ಬೆಳಗಾವಿ: ಅಂಗನವಾಡಿಯ ಮಕ್ಕಳು ಮನೆಯ ಅಂಗಳದಲ್ಲಿನ ಹೂ ಕಿತ್ತರು ಎಂಬ ಕಾರಣಕ್ಕೆ ಮನೆಯ ಮಾಲೀಕ ಅಂಗನವಾಡಿ ಸಹಾಯಕಿಯ ಮೂಗನ್ನೇ ಕತ್ತರಿಸಿರುವ ಘಟನೆ ಸೋಮವಾರ ಬಸುರ್ಪೆ ಗ್ರಾಮದಲ್ಲಿ ನಡೆದಿದೆ.
ಅಂಗನವಾಡಿ ಸಹಾಯಕಿ ಸುಗಂಧಾ ಮೋರೆ (50) ಕುಡಗೋಲಿನಿಂದ ಹಲ್ಲೆಗೆ ಒಳಗಾದವರು. ಇದೇ ಗ್ರಾಮದ ಕಲ್ಯಾಣಿ ಮೋರೆ ಎಂಬಾತ ಆರೋಪಿ.
ಘಟನೆ ಸೋಮವಾರ (ಜನವರಿ 1) ನಡೆದಿದ್ದರೂ ಪೊಲೀಸರು ಇನ್ನೂ ಅರೋಪಿಗಳನ್ನು ಬಂಧಿಸಿಲ್ಲ ಎಂದು ಸಂತ್ರಸ್ತೆ ಕುಟುಂಬದವರು ದೂರಿದ್ದಾರೆ.
ಸಹಾಯಕ್ಕಾಗಿ ಸಂತ್ರಸ್ತೆಯ ಕುಟುಂಬದವರು ಮಾಧ್ಯಮಗಳಿಗೆ ಮಾಹಿತಿ ನೀಡಿದ ಮೇಲೆಯೇ ವಿಷಯ ಬಹಿರಂಗವಾಗಿದೆ.
ಮೂಗು ಬಹುಪಾಲು ಭಾಗ ಕತ್ತರಿಸಿದ್ದರಿಂದ ಮಹಿಳೆಯ ಶ್ವಾಸಕೋಶಕ್ಕೆ ರಕ್ತ ಹೋಗಿದ್ದು, ಅವರು ಸಾವು -ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ವಿಜಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಸೋಮವಾರ ಅಂಗನವಾಡಿ ಮಕ್ಕಳು ಆಟವಾಡುತ್ತ ಹೋಗಿ ಪಕ್ಕದ ಮನೆಯ ಆವರಣದಲ್ಲಿ ಬೆಳೆದಿದ್ದ ಕೆಳವು ಹೂಗಳನ್ನು ಕಿತ್ತುಕೊಂಡರು. ಇದರಿಂದ ಕೋಪಗೊಂಡ ಮನೆಯ ಮಾಲೀಕ ಕಲ್ಯಾಣಿ ಮಕ್ಕಳನ್ನು ಹೊಡೆಯಲು ಬಂದ. ಮಧ್ಯೆ ಪ್ರವೇಶಿಸಿದ ಅಂಗವಾಡಿ ಸಹಾಯಕಿ ಸುಗಂಧಾ ಅವರು ಮಕ್ಕಳನ್ನು ಹೊಡೆಯದಂತೆ ತಕರಾರು ಮಾಡಿದರು.
ಕುಡಗೋಲು ತೆಗೆದುಕೊಂಡು ಬಂದ ಆರೋಪಿ ಕಲ್ಯಾಣಿ ಏಕಾಏಕಿ ಸುಗಂಧಾ ಅವರ ಮೇಲೆ ದಾಳಿ ಮಾಡಿ ಅವರ ಮೂಗು ಕತ್ತರಿಸಿದ ಎಂದು ಮಂಗಳವಾರ ಪೊಲೀಸರಿಗೆ ದೂರು ನೀಡಲಾಗಿದೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.