ಚಾಮರಾಜನಗರ: ಭಾರತದ ಶ್ರೇಷ್ಠ ರಂಗಭೂಮಿ ನಟರಾಗಿ ಕನ್ನಡ ನಾಡಿನಲ್ಲಿ ಅಭೂತಪೂರ್ವ ಅಭಿನಯ ಹಾಗೂ ವಿಡಂಬನಾತ್ಮಕ ಚಟುವಟಿಕೆಯ ಮೂಲಕ ರಂಗಭೂಮಿಗೆ ಅಪಾರ ಕೊಡುಗೆ ನೀಡಿದ ಶ್ರೇಷ್ಠ ರಂಗಭೂಮಿ ರತ್ನ ಮಾಸ್ಟರ್ ಹಿರಣ್ಣಯ್ಯನವರು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಸಂಸ್ಕೃತಿ ಚಿಂತಕ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ನಡೆದ ರಂಗಭೂಮಿ ನಟ ಮಾಸ್ಟರ್ ಹಿರಣ್ಣಯ್ಯ ರವರ ಕೊಡುಗೆಗಳ ಕುರಿತು ಮಾತನಾಡಿ ಹಿರಣ್ಣಯ್ಯ ಮಿತ್ರ ಮಂಡಳಿಯ ಮೂಲಕ ರಂಗಭೂಮಿಗೆ ಹೊಸ ಅರ್ಥವನ್ನು ನೀಡಿದವರು . ಸಮಾಜ ಮತ್ತು ಸರ್ಕಾರವನ್ನು ತಮ್ಮ ವಾಗ್ಜರಿಯ ಮೂಲಕ ಸಮಾಜವನ್ನು ತಿದ್ದುವ ಪ್ರಯತ್ನ ನಡೆಸಿದವರು .ಹೊಸ ಆಲೋಚನೆ ,ಹೊಸ ಚಿಂತನೆ ,ಧ್ವನಿ ಮಾಧುರ್ಯ ,ಹಾಸ್ಯ ಪ್ರಜ್ಞೆ ,ಕನ್ನಡದ ವಿಶೇಷ ಸಾಹಿತ್ಯದ ,ಮಾತಿನ ಮೂಲಕ ಇಡೀ ಕರ್ನಾಟಕದ ಮನೆಯನ್ನು ಗೆದ್ದವರು. ಇವರ ಲಂಚಾವತಾರ ನಾಟಕ ಸುಮಾರು 10,000 ಪ್ರದರ್ಶನಗಳನ್ನು ಕಾಣುವ ಮೂಲಕ ದಾಖಲೆಯನ್ನೇ ನಿರ್ಮಿಸಿತು. ಸಮಾಜ ತಿದ್ದುವ, ಭ್ರಷ್ಟ ಮನಸ್ಸಿನ ಮನುಷ್ಯನನ್ನು ಬದಲಾಯಿಸುವಲ್ಲಿ ಇವರ ನಾಟಕಗಳು ತುಂಬಾ ಪ್ರಭಾವ ಬೀರಿತು. ಹಲವು ಭಾಷೆಗಳಲ್ಲಿ ಉತ್ತಮ ಪಾಂಡಿತ್ಯವನ್ನು ಗಳಿಸಿದ್ದ ಹಿರಣ್ಣಯ್ಯನವರು ಪತ್ರಿಕೆಗಳನ್ನು ಹಂಚಿ ಶಿಕ್ಷಣವನ್ನು ಪಡೆದ ಮಹಾ ವ್ಯಕ್ತಿ. ತಂದೆಯ ಮೂಲಕಾರಂಗ ಶಿಕ್ಷಣವನ್ನು ಪಡೆದವರು. ನಿಗರ್ವಿ ,ಸರಳ ವ್ಯಕ್ತಿತ್ವದ ಹಿರಣ್ಯ ನವರು ಅನೇಕ ಸಮಾಜಮುಖಿ ಕಾರ್ಯವನ್ನು ಮಾಡಿದರು. ಇವರ ಸಾಧನೆ, ವ್ಯಕ್ತಿತ್ವ ಕನ್ನಡ ನಾಡಿನಲ್ಲಿ ದಾಖಲಾಗಿರುವುದು ಹೆಮ್ಮೆಯ ವಿಷಯವೆಂದು ತಿಳಿಸಿದರು.
ಉದ್ಘಾಟನೆಯನ್ನು ಸಮಾಜ ಸೇವಕರಾದ ಡಾ. ಪರಮೇಶ್ವರಪ್ಪ ನೆರವೇರಿಸಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಪ್ರತಿ ಮಂಗಳವಾರ ವಿಶೇಷ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಮಾಸ್ಟರ್ ಹಿರಣ್ಣಯ್ಯನವರ ನಾಟಕಗಳನ್ನು ನೋಡಿದ ನಾವೇ ಧನ್ಯರು. ರಂಗ ಭೂಮಿಯಲ್ಲಿ ಅವರ ಮಾತಿನ ದಾಟಿಗೆ ಬೆರಗಾಗುತ್ತಿದ್ದೆವು .ನೇರ ನಡೆ-ನುಡಿ ಮೂಲಕ ಸಮಾಜದ ಅನೇಕ ಜ್ವಲಂತ ಸಮಸ್ಯೆಗಳನ್ನು ನಾಟಕದ ಮೂಲಕ ವಿವರಿಸಿ ಪ್ರಭಾವಶಾಲಿಯಾಗಿ ರೂಪಿಸಿದವರು ಎಂದರು.
ಬರಹಗಾರ ಲಕ್ಷ್ಮಿ ನರಸಿಂಹ ಮಾತನಾಡಿ ಮಾಸ್ಟರ್ ಹಿರಣ್ಣಯ್ಯ ರಂಗಭೂಮಿಯ ನಟರಾಗಿ ತಮ್ಮ ನಾಟಕಗಳಾದ ಲಂಚಾವತಾರ, ಭ್ರಷ್ಟಾಚಾರ ,ನಡುಬೀದಿ ನಾರಾಯಣ, ಸದಾರಮೆ, ಅನಾಚಾರ ,ದೇವದಾಸಿ ಮುಂತಾದ ನಾಟಕಗಳ ಮೂಲಕ ಕನ್ನಡಿಗರ ಮನಸ್ಸನ್ನು ಗೆದ್ದವರು. ನಾಟಕ ರಂಗಭೂಮಿ ತುಂಬಾ ಪ್ರಭಾವಶಾಲಿಯಾದ ಮಾಧ್ಯಮವಾಗಿ ರೂಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ಸಭೆಯಲ್ಲಿ ಶ್ರೀನಿವಾಸ್ ಗೌಡ, ಸಿದ್ದರಾಜು ,ಮೂರ್ತಿ, ಅರ್ಜುನ್ ಶ್ರೇಯಸ್ ,ಮೋಹಿತ್, ನಾಗರಾಜು ಮುಂತಾದವರು ಉಪಸ್ಥಿತರಿದ್ದರು