ಬೆಂಗಳೂರು : ಮಧ್ಯಪ್ರಾಚ್ಯ ಯುದ್ಧದಿಂದಾಗಿ ಭಾರತ ಸೇರಿದಂತೆ ಇಡೀ ಜಗತ್ತೇ ಸಮಸ್ಯೆಯಲ್ಲಿದೆ. ಅದರ ಬಗ್ಗೆ ಚರ್ಚೆ ಮಾಡಬೇಕಾದ ಪ್ರಧಾನಮಂತ್ರಿಯವರು, ಕೇರಳ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಕೆಲವು ಸಿನಿಮಾಗಳ ವಿರುದ್ಧ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ ಎಂದು ಹೇಳಿರುವುದು ಹಾಸ್ಯಾಸ್ಪದವೆಂದು ಕಾಂಗ್ರೆಸ್ಸಿನ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
ದಾವಣಗೆರೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದೊರೆಯುತ್ತಿಲ್ಲ. ಜನ ಸಾಮಾನ್ಯರು ಸಂಕಷ್ಟದಲ್ಲಿದ್ದಾರೆ, ಬೆಲೆ ಏರಿಕೆ ಹೆಚ್ಚಾಗಿದ್ದು, ಪ್ರಧಾನಮಂತ್ರಿಯವರು ಇಂತಹ ಗಂಭೀರ ವಿಚಾರಗಳ ಬಗ್ಗೆ ಪ್ರಸ್ತಾಪಿಸಬೇಕು ಎಂಬುದು ನಿರೀಕ್ಷೆ ಮತ್ತು ಅದು ಘನತೆ ಕೂಡ. ಆದರೆ ಕೇರಳ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ನರೇಂದ್ರ ಮೋದಿಯವರು ಧುರಂಧರ್, ಕೇರಳ ಫೈಲ್ಸ್, ಕಾಶೀರಿ ಫೈಲ್ಸ್ನಂತಹ ಚಿತ್ರಗಳ ವಿರುದ್ಧ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ ಎಂದು ಮಾತನಾಡಿದ್ದಾರೆ. ಇದು ಹಾಸ್ಯಾಸ್ಪದವಷ್ಟೇ ಅಲ್ಲ, ನಾಚಿಕೆಗೇಡು ಎಂದರು.
ಒಬ್ಬ ಪ್ರಧಾನಮಂತ್ರಿ ಚಲನಚಿತ್ರಗಳ ವಿಮರ್ಶೆಗೆ ತಮ್ಮ ಸಮಯವನ್ನು ಮೀಸಲಿಡುತ್ತಾರೆ. ಜನರ ಸಮಸ್ಯೆಗೆ ತುಟಿ ಬಿಚ್ಚುವುದಿಲ್ಲ ಎಂದರೆ, ಹಿಂದೆಂದೂ ಈ ರೀತಿ ಆಗಿರಲಿಲ್ಲ ಎಂದರು. ಮೋದಿ ಅವರು ಅಧಿಕಾರಕ್ಕೆ ಬಂದಾಗಿಂದಲೂ ಹೆಸರು ಬದಲಾವಣೆ ಮಾಡುವುದನ್ನು ಹೊರತು ಪಡಿಸಿದರೆ, ಬೇರೆ ಯಾವುದನ್ನೂ ಮಾಡಿಲ್ಲ. ಹೊಸ ಯೋಜನೆಗಳಂತೂ ಇಲ್ಲ.
ಅನ್ನ ಭಾಗ್ಯ ತಮ್ಮದು ಎಂದು ಬಿಜೆಪಿಯವರು ಹೇಳಿಕೊಳ್ಳುತ್ತಾರೆ. ಆದರೆ ಅದು ಕಾರ್ಯಕ್ರಮ ಅಲ್ಲ. ಕಾಂಗ್ರೆಸ್ ಸರ್ಕಾರ ನೀಡಿದ ಆಹಾರದ ಹಕ್ಕು. ಬಿಜೆಪಿ ಮತ್ತು ಆರ್ಎಸ್ಎಸ್ನವರು ಸುಳ್ಳು ಪ್ರಚಾರ ಮಾಡುವುದರಲ್ಲಿ ನಿಸ್ಸೀಮರು ಎಂದರು.



