ಬೆಂಗಳೂರು : ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಕೊರತೆ ಇಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ವಿಧಾನ ಪರಿಷತ್ನಲ್ಲಿ ನಡೆದ ಸುದೀರ್ಘ ಚರ್ಚೆಯಲ್ಲಿ ವಿರೋಧ ಪಕ್ಷದ ಸದಸ್ಯರಾದ ಡಾ.ಧನಂಜಯ ಸರ್ಜಿ ಹಾಗೂ ಪ್ರತಾಪ್ ಸಿಂಹ ನಾಯಕ್ ಅವರು, ಸರ್ಕಾರಿ ಆಸ್ಪತ್ರೆಗಳಲ್ಲಿ ಶೀತ, ಕೆಮ್ಮು ಹಾಗೂ ಸೋಂಕು ನಿವಾರಕ ಔಷಧಗಳು ಸಹ ಲಭ್ಯವಿಲ್ಲ ಎಂದು ಆರೋಪಿಸಿದರು. ಇದರಿಂದ ಸಾರ್ವಜನಿಕರ ವಿಶ್ವಾಸ ಕುಸಿಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಔಷಧ ಖರೀದಿ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದ್ದು, ಈಗಾಗಲೇ ಶೇ.80ರಷ್ಟು ಔಷಧಗಳನ್ನು ನೇರವಾಗಿ ಖರೀದಿ ಮಾಡಲಾಗಿದೆ. ಉಳಿದ ಶೇ.20ರಷ್ಟು ಔಷಧಗಳನ್ನು ಖರೀದಿಸಲು ಸರ್ಕಾರಿ ಆಸ್ಪತ್ರೆಗಳಿಗೆ ಹಣ ನೀಡಲಾಗಿದೆ ಎಂದು ಹೇಳಿದರು.
ನಂತರ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ರೇಬೀಸ್ ಲಸಿಕೆ ಖರೀದಿ ವಿಷಯವನ್ನು ಉಲ್ಲೇಖಿಸಿ, ಇತರೆ ರಾಜ್ಯಗಳಲ್ಲಿ ರೂ.201ಕ್ಕೆ ಲಭ್ಯವಿರುವ ಲಸಿಕೆಯನ್ನು ಕರ್ನಾಟಕದಲ್ಲಿ ರೂ.282ಕ್ಕೆ ಖರೀದಿಸಲಾಗಿದೆ ಎಂದು ಆರೋಪಿಸಿದರು. ಇದರಲ್ಲಿ ಅಕ್ರಮ ನಡೆದಿದೆ ಎಂಬ ಶಂಕೆಯನ್ನು ವ್ಯಕ್ತಪಡಿಸಿದರು.
ಈ ಆರೋಪಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಔಷಧ ಖರೀದಿಯಲ್ಲಿ ಕೆಲವು ಅಕ್ರಮಗಳು ನಡೆದಿರುವುದನ್ನು ಒಪ್ಪಿಕೊಂಡು, ಈಗಾಗಲೇ ಅವನ್ನು ಸರಿಪಡಿಸಲಾಗಿದೆ ಎಂದರಲ್ಲದೆ, ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ಲಿಮಿಟೆಡ್ (ಕೆಎಸ್ಎಂಸಿಎಲ್) ಮೂಲಕ ಶೇ.80ರಷ್ಟು ಔಷಧಗಳನ್ನು ಟೆಂಡರ್ ಪ್ರಕ್ರಿಯೆಯಲ್ಲಿ ಖರೀದಿ ಮಾಡಲಾಗುತ್ತಿದೆ. ಉಳಿದ ಔಷಧಗಳಿಗಾಗಿ ಆಸ್ಪತ್ರೆಗಳಿಗೆ ಹಣ ನೀಡಲಾಗುತ್ತಿದೆ ಎಂದು ವಿವರಿಸಿದರು.
ಇನ್ನೂ ಹೊಸ ಟೆಂಡರ್ಗಳಿಗೆ ಹೆಚ್ಚಿನ ಕಂಪನಿಗಳನ್ನು ಆಕರ್ಷಿಸಲು ಹಿಂದಿನ ಕಾರ್ಯಕ್ಷಮತೆ ನಿಯಮವನ್ನು ತೆಗೆದುಹಾಕಲಾಗಿದ್ದು, ಔಷಧ ಅವಧಿ ಮುಗಿಯುವ ಸಮಸ್ಯೆಯನ್ನು ತಡೆಯಲು ವಾರ್ಷಿಕ ಖರೀದಿ ಬದಲು ತ್ರೈಮಾಸಿಕ ಪೂರೈಕೆ ವ್ಯವಸ್ಥೆ ಜಾರಿಗೆ ತರಲಾಗಿದೆ. 270 ಕೋಟಿ ರೂ. ಮೌಲ್ಯದ ಔಷಧಗಳನ್ನು ಖರೀದಿಸಲಾಗಿದ್ದು, ಅವುಗಳನ್ನು ‘ವೇರ್ಹೌಸ್ ಕ್ವಾರಂಟೈನ್’ ಮೂಲಕ ಗುಣಮಟ್ಟ ಪರಿಶೀಲನೆ ಮಾಡಿದ ನಂತರವೇ ಆಸ್ಪತ್ರೆಗಳಿಗೆ ವಿತರಿಸಲಾಗುತ್ತಿದೆ ಎಂದು ಹೇಳಿದರು.



