ಹೆತ್ತೂರು: ಪುಂಡಾನೆ ಸೆರೆ ಕಾರ್ಯಾಚರಣೆ ವೇಳೆ ಕಾದಾಡಿ ಮರಣ ಹೊಂದಿದ, ದಸರಾ ಅಂಬಾರಿ ಆನೆ ಅರ್ಜುನನ ಸಮಾಧಿ ಸ್ಥಳದಲ್ಲಿ ಸ್ಮಾರಕ ನಿರ್ಮಾಣ ಚಟುವಟಿಕೆಗಳು ಗರಿಗೆದರಿವೆ.
ಯಸಳೂರು ಹೋಬಳಿಯ ದಬ್ಬಳಿಕಟ್ಟೆಯಲ್ಲಿರುವ ಸಮಾಧಿ ಸ್ಥಳದಲ್ಲಿ ಅರ್ಜುನನ ಪ್ರತಿಕೃತಿಯನ್ನು ಸ್ಥಾಪಿಸಿ ಸಾಂಪ್ರದಾಯಿಕವಾಗಿ ಪೂಜೆ ಮಾಡಲಾಗಿದೆ. ಈಗ ಪ್ರತಿಕೃತಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಸ್ಥಳೀಯರು ಮುಗಿಬಿದ್ದಿದ್ದಾರೆ. ದಬ್ಬಳ್ಳಿಕಟ್ಟೆ ಮೀಸಲು ಅರಣ್ಯದಲ್ಲಿ ೨೦೨೩ರ ಡಿಸೆಂಬರ್ ೪ ರಂದು ಅರ್ಜುನ ಮೃತಪಟ್ಟಿದ್ದ. ಒಂದು ವರ್ಷದೊಳಗೆ ಸ್ಮಾರಕ ನಿರ್ಮಿಸಿ ಲೋಕಾರ್ಪಣೆಗೊಳಿಸುವುದಾಗಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದರು. ಆದರೆ ಭರವಸೆ ಈಡೇರದೆ, ಜನರ ಒತ್ತಡ ಹೆಚ್ಚುತ್ತಿದ್ದಂತೆಯೇ ಚಟುವಟಿಕೆಗಳು ತ್ವರಿತಗತಿಯಲ್ಲಿ ನಡೆದಿವೆ.
ಅರ್ಜುನನ ಎರಡು ಪ್ರತಿಕೃತಿಗಳನ್ನು ರೂಪಿಸಿದ್ದು, ಅಂತಿಮ ಹಂತದ ಸಣ್ಣಪುಟ್ಟ ಕೆತ್ತನೆ ನಡೆದಿದೆ. ದಬ್ಬಳ್ಳಿಕಟ್ಟೆ ಹಾಗೂ ಅರ್ಜುನ ಆಶ್ರಯ ಪಡೆದಿದ್ದ ಮೈಸೂರಿನ ಬಳ್ಳೆ ಆನೆ ಶಿಬಿರದಲ್ಲಿ ಶೀಘ್ರ ಲೋಕಾರ್ಪಣೆಯಾಗಲಿವೆ’ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕಲಾವಿದ ಧನಂಜಯ ಪಡು ನೇತೃತ್ವದಲ್ಲಿ ೯.೮ ಅಡಿ ಎತ್ತರ ಹಾಗೂ ೧೨.೩ ಅಡಿ ಉದ್ದದ ಪ್ರತಿಕೃತಿಗಳು ನಿರ್ಮಾಣವಾಗಿದ್ದು, ಒಟ್ಟು ೧೦ ಕಲಾವಿದರು ಶ್ರಮಿಸಿದ್ದಾರೆ. ಸಮಾಧಿ ಕಟ್ಟೆಯ ಮೇಲೆ ಅರ್ಜುನನ ಪ್ರತಿಕೃತಿಯನ್ನು ಸ್ಥಾಪಿಸಲಾಗಿದ್ದು ಅಂತಿಮ ಹಂತದ ಕೆಲಸಗಳು ನಡೆಯುತ್ತಿವೆ. ಅರಣ್ಯ ಸಚಿವರು ಶೀಘ್ರ ಲೋಕಾರ್ಪಣೆ ಮಾಡಲಿದ್ದಾರೆ. ಎಂದು ಉಪ ವಲಯ ಅರಣ್ಯಾಧಿಕಾರಿ ತಿಳಿಸಿದ್ದಾರೆ. ಸಮಾಧಿ ಸುತ್ತ ಸೌರ ವಿದ್ಯುತ್ ಬೇಲಿ.
ಕಲಾಕೃತಿಯು ಸಾಕ್ಷಾತ್ ಅರ್ಜುನನನ್ನೇ ಹೋಲುತ್ತಿದ್ದು ಬೇರೆ ಆನೆಗಳು ಬಂದು ಉಪಟಳ ನೀಡದಂತೆ ಸಮಾಧಿ ಸ್ಥಳದ ಸುತ್ತಲೂ ಸೌರ ವಿದ್ಯುತ್ ಬೇಲಿ ಅಳವಡಿಸಲಾಗಿದೆ. ಕಲಾಕೃತಿ ನಿರ್ಮಾಣ ಸ್ಥಳವನ್ನು ಸದ್ಯಕ್ಕೆ ಪರದೆಗಳಿಂದ ಮುಚ್ಚಲಾಗಿದೆ’ ಎಂದು ಉಪ ವಲಯ ಅರಣ್ಯಾಧಿಕಾರಿ ವಿಜಯಕುಮಾರ್ ಹೇಳಿದ್ದಾರೆ.