ಬೆಂಗಳೂರು : ಹಿರಿಯ ವಿದ್ವಾಂಸ, ರಾಜಕೀಯ ವಿಶ್ಲೇಷಕ, ಚಿಂತಕ, ಲೇಖಕ, ಮೈಸೂರು ವಿವಿಯ ಹಂಗಾಮಿ ಕುಲಪತಿಯಾಗಿ ಹಾಗೂ ರಾಜ್ಯಶಾಸ್ತ್ರ ವಿಭಾಗದ ಡೀನ್ ಆಗಿ ಸೇವೆ ಸಲ್ಲಿಸಿದ್ದ ಪ್ರೊ.ಮುಝಫರ್ ಹುಸೇನ್ ಅಸ್ಸಾದಿ ಅವರು ಶುಕ್ರವಾರ ತಡರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ ೬೩ ವರ್ಷ ವಯಸ್ಸಾಗಿತ್ತು.
ಪ್ರೊ.ಮುಝಫರ್ ಅಸ್ಸಾದಿ ಅವರು ಬುಡಕಟ್ಟು ಸಮುದಾಯದವರ ಬದುಕು, ಜೀವನ ಶೈಲಿಯ ಬಗ್ಗೆ ಅಪಾರವಾದ ಅಧ್ಯಯನ ನಡೆಸಿದ್ದಾರೆ. ಆದಿವಾಸಿಗಳ ಸ್ಥಳಾಂತರಕ್ಕೆ ನೇಮಿಸಿದ್ದ ಸಮಿತಿಯ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಕೃಷಿ ಅಧ್ಯಯನ ಕ್ಷೇತ್ರ, ಜಾಗತೀಕರಣ, ಗಾಂಧೀವಾದ, ರಾಜಕೀಯ ಸಮಾಜಶಾಸ್ತ್ರ, ಪ್ರಜಾಪ್ರಭುತ್ವ ಸಿದ್ಧಾಂತ, ಸಾಮಾಜಿಕ ಚಳವಳಿಗಳು, ತುಲನಾತ್ಮಕ ಸರ್ಕಾರ ಮತ್ತು ಭಾರತದಲ್ಲಿ ರಾಜಕೀಯ, ಮಾನವ ಹಕ್ಕುಗಳು, ಜಾಗತಿಕ ರಾಜಕೀಯ ಸಿದ್ಧಾಂತ ಮೊದಲಾದ ವಿಚಾರಗಳ ಕುರಿತು ಅಳವಾದ ಅಧ್ಯಯನ ಮಾಡಿ ವಿಷಯ ಮಂಡನೆ ಮಾಡಿ ಗಮನ ಸೆಳೆದಿದ್ದಾರೆ.
ಉಡುಪಿ ಜಿಲ್ಲೆಯ ಶಿರ್ವ ಮೂಲದ ಡಾ. ಮುಝಫರ್ ಅಸ್ಸಾದಿ ಅವರು ಮಂಗಳೂರು ವಿ.ವಿ.ಯಿಂದ ಸ್ನಾತಕೋತ್ತರ ಪದವಿ, ನವದೆಹಲಿಯ ಜೆಎನ್ಯುನಿಂದ ಎಂ.ಫಿಲ್ ಹಾಗೂ ಪಿಎಚ್.ಡಿ ನಂತರ ಶಿಕಾಗೋ ವಿ.ವಿ.ಯಿಂದ ರಾಕ್ ಫೆಲ್ಲರ್ ಫೆಲೋ, ಪೋಸ್ಟ್ ಡಾಕ್ಟೊರಲ್ ಪದವೀಧರರು. ಈವರೆಗೆ ೧೧ ಕೃತಿಗಳನ್ನು ರಚಿಸಿದ್ದಾರೆ. ಬುಡಕಟ್ಟು ಸಮುದಾಯಗಳ ಸ್ಥಳಾಂತರ ಕುರಿತ ಹೈಕೋರ್ಟ್ ಸಮಿತಿ ಅಧ್ಯಕ್ಷರಾಗಿ, ವರದಿ ನೀಡಿದ್ದಾರೆ. ಕರ್ನಾಟಕದಲ್ಲಿ ಬಹುರೂಪಿ ಸ್ತ್ರೀವಾದ ಕಥನಗಳು ಮತ್ತು ಚಳವಳಿ, ಅಸ್ಮಿತೆ, ರಾಜಕಾರಣ ಮತ್ತು ಮೂಲಭೂತವಾದ ಇವರ ಪ್ರಮುಖ ಕೃತಿಗಳು. ಈ ಹಿಂದೆ ಹೊಸತಾಗಿ ಸ್ಥಾಪಿಸಲಾದ ರಾಯಚೂರು ವಿವಿಯ ವಿಶೇಷಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಸಹಿತ ಹಲವು ಗೌರವಗಳಿಗೆ ಪಾತ್ರರಾಗಿದ್ದಾರೆ.
ವಾರದ ಹಿಂದೆಯಷ್ಟೇ ಮೈಸೂರಿನ ರಂಗಾಯಣದಲ್ಲಿ ನಡೆದ ‘ಅವಸಾನದತ್ತ ನೀಲಗಿರಿ ಕನ್ನಡಿಗರು’ ಕೃತಿ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಬುಡಕಟ್ಟು ಸಮುದಾಯಗಳ ಸ್ಥಳಾಂತರ ಕುರಿತ ತಮ್ಮ ನೇತೃತ್ವದ ಹೈಕೋರ್ಟ್ ಸಮಿತಿ ವರದಿಯನ್ನು ಪ್ರಸ್ತಾಪಿಸಿದ್ದರು.
ಮೃತರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಸರಸ್ವತಿಪುರಂನ ಮುಸ್ಲಿಂ ವಿದ್ಯಾರ್ಥಿನಿಲಯದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.