ತುಮಕೂರು: ಮುದ್ದಹನುಮೇಗೌಡರಿಗೆ ಟಿಕೆಟ್ ಕೊಡೋ ವಿಚಾರದಲ್ಲಿ ನನ್ನ ಅಭಿಪ್ರಾಯ ಏನೂ ಇಲ್ಲ. ಅದು ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದು ಸಹಕಾರಿ ಸಚಿವ ಕೆ.ಎನ್ ರಾಜಣ್ಣ ತಿಳಿಸಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಅವರು, ಮುದ್ದಹನುಮೇಗೌಡರು ಕಾಂಗ್ರೆಸ್ ಗೆ ತುಂಬಾ ಸನಿಹ ಬಂದಿದ್ದಾರೆ. ಅವರು ಯಾವುದೇ ಸಂದರ್ಭದಲ್ಲಿ ಬೇಕಾದರೂ ಪಕ್ಷಕ್ಕೆ ಸೇರ್ಪಡೆಯಾಗಬಹುದು ಎಂದರು.
ಎಐಸಿಸಿ ಕಾರ್ಯದರ್ಶಿ ಮಯೂರ್ ಜಯಕುಮಾರ್ ಲೋಕಸಭೆ ಟಿಕೆಟ್ ಸಂಬಂಧಪಟ್ಟಂತೆ ಅಭಿಪ್ರಾಯ ಸಂಗ್ರಹಿಸಲು ಆಗಮಿಸಿದ್ದಾರೆ ಎಂದು ತಿಳಿಸಿದರು.
ರಾಮನ ಕುರಿತ ಅವಹೇಳನಕಾರಿ ಹೇಳಿಕೆ ವಿಚಾರವಾಗಿ ಮಾತನಾಡಿ, ನಾನು ರೈತ, ಹೊಲಕ್ಕೆ ಹೋಗುವಾಗ ಸಗಣಿ ಮೂರ್ತಿ ಮಾಡಿ ಗರಿಕೆ ಹುಲ್ಲು ಇಟ್ಟು ಪೂಜೆ ಮಾಡ್ತಿದ್ದೆ. ಹೊಲದಲ್ಲಿ ಸಿಕ್ಕ ಬೆಣಚು ಕಲ್ಲಿಗೂ ಪೂಜೆ ಮಾಡ್ತಿದ್ವಿ. ಅದು ನಮ್ಮ ನಂಬಿಕೆ. ಬಾಬ್ರಿ ಮಸೀದಿ ದ್ವಂಸ ಮಾಡಿದಾಗ, ನಾನು ಭೇಟಿ ಕೊಟ್ಟಾಗ ನಾನು ಕಂಡ ಚಿತ್ರಣವನ್ನೂ ಅವತ್ತು ಹೇಳಿಕೊಂಡಿದ್ದೇನೆ ಅಷ್ಟೇ. ಬೊಂಬೆಯನ್ನ ದೇವರು ಅಂತಾ ಹೇಳಿದ್ರೆ ಏನೂ ತಪ್ಪು ಬೊಂಬೆಯಲ್ಲಿ ದೈವತ್ವ ಇರೋದಿಲ್ವಾ ಎಂದು ರಾಜಣ್ಣ ಉಲ್ಟಾ ಹೊಡೆದಿದ್ದಾರೆ.
ಬೊಂಬೆ ಅನ್ನೋ ಕಾರಣಕ್ಕೆ ತಿರಸ್ಕಾರ ಮನೋಭಾವದಿಂದ ಇವರು ಮಾತನಾಡುತಾರಲ್ಲ ಅದು ಸರಿನಾ ? ಎಂದು ಪ್ರಶ್ನಿಸಿದರು.
ಟೂರಿಂಗ್ ಟಾಕೀಸ್ ರೀತಿಯೇ ಇತ್ತು. ಅವತ್ತು ಅಲ್ಲಿ ಅದಕ್ಕೆ ಹೇಳಿದ್ದೇನೆ ನಾನು. ಅದನ್ನ ಬಿಟ್ಟು ದೇವರನ್ನೇ ಟೂರಿಂಗ್ ಟಾಕೀಸ್ ಅಂದಿಲ್ಲ. ಬಿಜೆಪಿಯವರು ನನಗೆ ರಾವಣ ಎಂದಿದ್ದಾರೆ. ನನಗೆ ಬೇಜಾರಿಲ್ಲ, ರಾವಣ ಎಂದು ಅನಿಸಿಕೊಳ್ಳಲು ನಾನು ಸಿದ್ಧನಿದ್ದೇನೆ. ಅವನಂತ ಧೈವ ಭಕ್ತ ಯಾರೂ ಇರಲಿಲ್ಲ. ಇವರೆಲ್ಲ ಡೋಂಗಿ ದೈವ ಭಕ್ತರು ಎಂದು ತಿರುಗೇಟು ನೀಡಿದರು.
ಹಿಂದೆ ಅಣ್ಣಾದೋರೈ ರಾಮಾಯಣಕ್ಕೆ ಬದಲಾಗಿ ರಾವಯಾಣಾವಣ ನಾಟಕ ಆಡಿದ್ರು. ಈ ನಾಟಕದಲ್ಲಿ ರಾವಣ ಸೀತೆ ಮೇಲೆ ಬಲಾತ್ಕಾರ ಮಾಡೋದಿಲ್ಲ. ಇದು ರಾವಣನ ದೊಡ್ಡ ಗುಣ ಅಲ್ವೇ. ನಾನು ರಾಮ ಮತ್ತು ರಾವಣ ಇಬ್ಬರ ಪರ ಇದ್ದೇನೆ. ನನ್ನ ಹೇಳಿಕೆಯನ್ನ ನಾನು ಸಮರ್ಥನೆ ಮಾಡಿಕೊಳ್ತೇನೆ. ಹೇಳಿಕೆಯಿಂದ ಹಿಂದೆ ಸರಿಯೋ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ರಾವಣ ಶಿವನ ಪರಮಭಕ್ತ. ರಾವಣನಿಗೆ ಶಿವ ಆತ್ಮಲಿಂಗ ಕೊಟ್ಟಿರೋದು. ಕಾಂಗ್ರೆಸ್ ನವರು ಹಜ್ ಯಾತ್ರೆಗೆ ದುಡ್ಡು ಕೊಟ್ಟಂತೆ ಯಡಿಯೂರಪ್ಪನವ್ರು ಕಾಶಿಗೆ ಹೋಗೋಕೆ ದುಡ್ಡು ಕೊಟ್ಟಿದ್ರು. ಅದನ್ನ ಯಾರೂ ಬೇಡ ಅನ್ನಲ್ಲ. ಇದರ ಕುರಿತು ಇನ್ನೂ ಹಲವು ಸೂಕ್ಷ್ಮವಾದ ವಿಚಾರಗಳಿವೆ. ಮುಂದಿನ ದಿನಗಳಲ್ಲಿ ಹೇಳುತ್ತೇನೆ ಎಂದರು.