ನಂಜನಗೂಡು: ಒಂದೇ ತಿಂಗಳಲ್ಲಿ ನಾಲ್ಕು ಜನರನ್ನು ಕೊಂದು ಹಾಕಿರುವ ನರಭಕ್ಷಕ ಹುಲಿ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭ ಮಾಡಿದ್ದು, ೩ ಸಾಕಾನೆ, ೨೦೭ ಸಿಬ್ಬಂದಿಗಳ ಸಹಕಾರದೊಂದಿಗೆ ನಂಜನಗೂಡು ತಾಲ್ಲೂಕಿನ ಬಳ್ಳೂರುಹುಂಡಿ ಗ್ರಾಮದಲ್ಲಿ ಶನಿವಾರ ಹುಲಿ ಓಡಾಡುವ ಮಾರ್ಗದಲ್ಲಿ ಬೋನು ಇರಿಸಲಾಗಿದೆ. ಜೀವಂತವಾಗಿ ಸೆರೆ ಸಿಗದಿದ್ದರೆ ಗುಂಡು ಹೊಡೆದು ಕೊಂದು ಹಾಕಲೂ ಸಹ ಆದೇಶಿಸಲಾಗಿದೆ.
ಸಾಕಾನೆಗಳಾದ ಪಾರ್ಥ, ರೋಹಿತ, ಹಿರಣ್ಯ ಜೊತೆಗೆ ಅರಣ್ಯ ಇಲಾಖೆಯ ೧೨ ಅಧಿಕಾರಿಗಳು ಹಾಗೂ ೧೯೫ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗಿ ಆಗಿದ್ದಾರೆ. ಜೊತೆಗೆ ನಾಗಣಾಪುರ, ಡೋರನಕಟ್ಟೆ, ವೆಂಕಟಗಿರಿ ಹಾಗೂ ವಡೆಯನಪುರ ಕಾಲೊನಿಗಳ ತಲಾ ೨೫ ಗಿರಿಜನರೂ ನರಹಂತಕ ಹುಲಿಯ ಸೆರೆಗೆ ಶ್ರಮಿಸುತ್ತಿದ್ದಾರೆ.

ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ್ ಪುಷ್ಕರ್ ಹಾಗೂ ಮೈಸೂರು ವಲಯ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯಾ ನೇತೃತ್ವದಲ್ಲಿ ಅಧಿಕಾರಿಗಳ ತಂಡವು ಶನಿವಾರ ಸಭೆ ನಡೆಸಿ ಕಾರ್ಯಾಚರಣೆಯ ಕ್ರಮಗಳ ಬಗ್ಗೆ ಚರ್ಚಿಸಿತು. ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಪಿ. ರಮೇಶ್ಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಕೆ. ಪರಮೇಶ್, ಕೆ.ಆರ್. ನಾರಾಯಣ, ಡಿ. ಶ್ರೀನಿವಾಸ, ಅಮೃತ ಮಾಯಪ್ಪನವರ ಹಾಗೂ ಪಶು ವೈದ್ಯಾಧಿಕಾರಿ ವಾಸೀಂ ಮಿರ್ಜಾ ಸಭೆಯಲ್ಲಿ ಪಾಲ್ಗೊಂಡಿದ್ದರು.
ವಿಶೇಷ ಹುಲಿ ಸಂರಕ್ಷಣಾ ದಳ, ಚಿರತೆ ಕಾರ್ಯಪಡೆ ಹಾಗೂ ಆನೆ ಕಾರ್ಯಪಡೆಗಳ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗಿ ಆಗಿದ್ದಾರೆ. ಕಾರ್ಯಾಚರಣೆಗೆ ೫೦ ಸಿಸಿ ಕ್ಯಾಮೆರಾ ಹಾಗೂ ೫ ಜಿಎಸ್ಎಂ ಕ್ಯಾಮೆರಾಗಳು, ಅಗತ್ಯ ಔಷಧಿ, ೧೦ ವಾಹನಗಳನ್ನು ಬಳಸಲಾಗುತ್ತಿದೆ. ತುಮಕೂರಿನಿಂದ ಹುಲಿ ಹಿಡಿಯುವ ಬೋನು ತರಿಸಿಕೊಳ್ಳಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.