ಮೈಸೂರು: ಕಾಡಂಚಿನ ಗ್ರಾಮಗಳಲ್ಲಿ ಜನರ ಮೇಲೆರಗಿ ಪ್ರಾಣಕ್ಕೆ ಕುತ್ತಾಗಿದ್ದ ಹುಲಿರಾಯನ ಹೆಜ್ಜೆ ಇದೀಗ ಮೈಸೂರು ಸಪೀಪದ ಗ್ರಾಮಗಳಲ್ಲಿ ಕಾಣಿಸಿಕೊಂಡಿದ್ದು, ಜನರ ಆತಂಕ ಹೆಚ್ಚಿದೆ. ತಾಲೂಕಿನ ಚಿಕ್ಕಕಾನ್ಯ, ದೊಡ್ಡಕಾನ್ಯ, ಬ್ಯಾತಹಳ್ಳಿ, ಸಿಂಧುವಳ್ಳಿ ಭಾಗಗಳಲ್ಲಿ ಸ್ಥಳೀಯರಿಗೆ ಹುಲಿ ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ದೊರೆತಿದ್ದು, ಅರಣ್ಯ ಇಲಾಖೆ ಹುಲಿ ಸೆರೆ ಕಾರ್ಯಾಚರಣೆ ಆರಂಭಿಸಿದೆ.
ನಿನ್ನೆ ಮೈಸೂರು ತಾಲೂಕಿನ ಕೆಲ ಗ್ರಾಮಗಳಲ್ಲಿ ಹುಲಿ ಕಾಣಿಸಿಕೊಂಡಿರುವುದಾಗಿ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ರಸ್ತೆ ಬದಿಯಲ್ಲಿ ಹುಲಿ ತಿರುಗಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಈ ವಿಡಿಯೋ ಎಲ್ಲಿ ಸೆರೆ ಹಿಡಿದಿದ್ದು ಎಂಬ ಖಚಿತ ಮಾಹಿತಿ ದೊರೆತಿಲ್ಲ. ಅರಣ್ಯ ಸಂರಕ್ಷಣಾಧಿಕಾರಿ ಡಾ.ಮಾಲತಿಪ್ರಿಯಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಎಸ್.ಬಸವರಾಜು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎನ್.ಲಕ್ಷ್ಮೀಕಾಂತ, ವಲಯ ಅರಣ್ಯಾಧಿಕಾರಿ ಕೆ.ಸುರೇಂದ್ರ ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ ಬುಧವಾರ ಹುಲಿ ಕಾಣಿಸಿಕೊಂಡಿರುವ ಚಿಕ್ಕಕಾನ್ಯ, ದೊಡ್ಡಕಾನ್ಯ, ಬ್ಯಾತಹಳ್ಳಿ, ಸಿಂಧುವಳ್ಳಿ ಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಹುಲಿಯ ಹೆಜ್ಜೆ ಗುರುತು ಪತ್ತೆಯಾಗಿವೆ. ಹಾಗಾಗಿ, ಹುಲಿಯನ್ನು ಸುರಕ್ಷಿತವಾಗಿ ಸೆರೆ ಹಿಡಿಯಲು ವಿಶೇಷ ತಂಡ ರಚಿಸಲಾಗಿದೆ. ಜತೆಗೆ, ಹುಲಿ ಕಾಣಿಸಿಕೊಂಡ ಭಾಗಗಳಲ್ಲಿ ವಿಶೇಷ ಕ್ಯಾಮರಾ ಮತ್ತು ಬೋನುಗಳನ್ನು ಅಳವಡಿಸಲಾಗಿದ್ದು, ಕಾರ್ಯಾಚರಣೆ ಪ್ರಗತಿಯಲ್ಲಿದೆ. ಹುಲಿಯನ್ನು ಕಂಡ ಕೂಡಲೇ ಅರಿವಳಿಕೆ ಮದ್ದನ್ನು ನೀಡಲು ಇಲಾಖಾ ಪಶುವೈದ್ಯಾಧಿಕಾರಿಗಳಿಗೆ ಅರಣ್ಯಾಧಿಕಾರಿಗಳು ಸೂಚನೆ ನೀಡಿದ್ದಾರೆ.
ಕಾರ್ಯಾಚರಣೆಗೆ ವಿಶೇಷ ತಂಡ: ವಿಶೇಷ ತಂಡದಲ್ಲಿ ಚಿರತೆ ಕಾರ್ಯಪಡೆಯ ೧೦ ಸಿಬ್ಬಂದಿ, ಮೈಸೂರು ವಲಯದ ೨೦ ಸಿಬ್ಬಂದಿ, ನಗರ ಹಸಿರೀಕರಣ ವಲಯದ ೧೦ ಸಿಬ್ಬಂದಿ, ನಂಜನಗೂಡು ವಲಯದ ೧೦ ಸಿಬ್ಬಂದಿಯ ಜತೆಗೆ ವಿವಿಧ ಬಗೆಯ ಒಟ್ಟು ೩೫ ಕ್ಯಾಮರಾಗಳನ್ನು ಬಳಸಿಕೊಳ್ಳಲಾಗಿದೆ. ತುಮಕೂರು ಮಾದರಿಯ ಹುಲಿ ಹಿಡಿಯುವ ೩ ಬೋನುಗಳನ್ನು ತೆಗೆದುಕೊಂಡು ಅವಶ್ಯಕತೆ ಇರುವ ಸ್ಥಳದಲ್ಲಿ ಅಳವಡಿಸಲಾಗಿದೆ.
ಡ್ರೋಣ್ ಕ್ಯಾಮೆರಾ ಬಳಕೆ ಹುಲಿಯ ಚಲನವಲನಗಳನ್ನು ಗಮನಿಸಲು ಹುಲಿ ಕಾಣಿಸಿಕೊಂಡಿರುವ ಗ್ರಾಮಗಳ ಸುತ್ತಮುತ್ತ ಡ್ರೋನ್ ಕ್ಯಾಮರಾ ಮೂಲಕ ಪರಿಶೀಲನೆಯೂ ನಡೆಯುತ್ತಿದೆ. ಹುಲಿ ಕಾಣಿಸಿಕೊಂಡಿರುವ ಮೈಸೂರು ವಲಯದ ವ್ಯಾಪ್ತಿಯಲ್ಲಿ ವನ್ಯಜೀವಿ ಮುಂಜಾಗ್ರತಾ ಎಚ್ಚರಿಕೆ ಸಂದೇಶ ವ್ಯವಸ್ಥೆ ಮೂಲಕ ಎಲ್ಲ ರೈತರು ಹಾಗೂ ಸಾರ್ವಜನಿಕರ ಮೊಬೈಲ್ಗೆ ಹುಲಿ ಇರುವಿಕೆಯ ಬಗ್ಗೆ ಮಾಹಿತಿ ನೀಡಲಾಗಿದೆ.