ಗುಂಡ್ಲುಪೇಟೆ: ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಲಾರಿ ಅಡಿಗೆ ಸಿಲುಕಿದ್ದು, ಅದೃಷ್ಟವಶಾತ್ ದಂಪತಿಗಳು ಪಾರಾದ ಘಟನೆ ಪಟ್ಟಣದ ಕೆಎಸ್ಆರ್ ಟಿಸಿ ಮುಂಭಾಗದ ರಾಷ್ಟ್ರೀಯ ಹೆದ್ದಾರಿ-766ರಲ್ಲಿ ನಡೆದಿದೆ.
ತಾಲೂಕಿನ ಮಡಹಳ್ಳಿ ಗ್ರಾಮದ ಗಂಗಾಧರ್ ಮತ್ತು ದಂಪತಿ ಘಟನೆಯಲ್ಲಿ ಅದೃಷ್ಟವಶಾತ್ ಪಾರಾಗಿದ್ದಾರೆ. ಪಟ್ಟಣದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಮುಂಭಾಗ ರಸ್ತೆ ಕ್ರಾಸ್ ಮಾಡುವ ವೇಳೆ ಬಲದಿಂದ ಬಂದ ಟಿಪ್ಪರ್ ಲಾರಿ ಬೈಕ್ ಗೆ ಗುದ್ದಿದೆ. ಬೈಕ್ ನಲ್ಲಿದ್ದ ದಂಪತಿ ರಸ್ತೆಗೆ ಬಿದ್ದಿದ್ದು, ಟಿಪ್ಪರ್ ಮುಂಭಾಗದ ಚಕ್ರದ ಅಡಿಗೆ ಬೈಕ್ ಸಿಲುಕಿದೆ. ಆದರೆ ಯಾವುದೇ ಅನಾಹುತ ಸಂಭವಿಸಿಲ್ಲ.
ಘಟನೆ ನಡೆದ ತಕ್ಷಣ ಸ್ಥಳೀಯರು ದೌಡಾಯಿಸಿ ಟಿಪ್ಪರ್ ಮುಂದಿನ ಚಕ್ರದ ಅಡಿಗೆ ಸಿಲುಕಿದ್ದ ಬೈಕ್ ಅನ್ನು ಹೊರ ತೆಗೆದು ದಂಪತಿಗಳನ್ನು ರಕ್ಷಿಸಿದ್ದಾರೆ. ಈ ವೇಳೆ ಟಿಪ್ಪರ್ ಚಾಲಕನ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದರು.
ಟ್ರಾಫಿಕ್ ಜಾಮ್: ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ್ದರಿಂದ ಹತ್ತು ನಿಮಿಷಕ್ಕೂ ಅಧಿಕ ಕಾಲ ಟ್ರಾಫಿಕ್ ಜಾಮ್ ಉಂಟಾಯಿತು. ನಂತರ ಪೊಲೀಸರು ಆಗಮಿಸಿ, ಸಂಚಾರಕ್ಕೆ ಅನುವು ಮಾಡಿಕೊಟ್ಟರು.



