ಮೈಸೂರು: ಟಿಪ್ಪು ನಮ್ಮ ಊರಿನವರೇ ಹೊರತು ಹೊರದೇಶದವರಲ್ಲ ಎಂದು ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದ್ದಾರೆ.
ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರನ್ನು ಇಡಬೇಕು ಎಂದು ಪ್ರಸ್ತಾಪ ಮಾಡಿದ ವಿಚಾರಕ್ಕೆ ವಿಪಕ್ಷ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದರು.
ಅವರು ಟಿಪ್ಪು ನಮ್ಮ ಊರಿನವರೇ ಅಲ್ವಾ? ಅವರೇನೂ ಹೊರ ದೇಶದವರಾ? ಭೂ ಸುಧಾರಣೆ ಕಾಯ್ದೆ ತಂದವರು ಟಿಪ್ಪು, ದೇವದಾಸಿ ಪದ್ಧತಿ ನಿರ್ಮೂಲನೆ ಮಾಡಿದ್ದು ಟಿಪ್ಪು ಅಲ್ವಾ? ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿನ ಬಗ್ಗೆ ನಮ್ಮ ತಕಾರರು ಇಲ್ಲ. ಟಿಪ್ಪು ವಿಚಾರದಲ್ಲಿ ಕೆಲವರು ಅಭಿಪ್ರಾಯ ಹೇಳಿದ್ದಾರೆ. ಅಭಿಪ್ರಾಯ ಹೇಳೋದು ಅಪರಾಧವಾ? ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ವಾ? ಎಂದು ಹೇಳಿದ್ದಾರೆ.
ವಿಮಾನ ನಿಲ್ದಾಣ ವಿಚಾರದಲ್ಲಿ ಕ್ಯಾಬಿನೆಟ್ ತೀರ್ಮಾನವಾಗಿದೆ. ಅದನ್ನು ತಿರಸ್ಕರಿಸಲು ಸಾಧ್ಯವಾ? ಹೆಸರು ಇಡುವುದು ಬಿಡುವುದು ಬೇರೆ ವಿಚಾರ. ಆದರೆ ಅವರನ್ನು ದೇಶ ದ್ರೋಹಿ ಅಂತಾ ಬಿಂಬಿಸೋದು ಸರಿಯಲ್ಲ ಎಂದರು.
ಇನ್ನು ಕೇರಳದಲ್ಲಿ ಕೋವಿಡ್ ಪ್ರಕರಣ ಹೆಚ್ಚಳವಾಗುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿ, ಈ ವಿಚಾರದಲ್ಲಿ ಮೈಸೂರು ಜಿಲ್ಲಾಡಳಿತದ ಜೊತೆಗೆ ಸಭೆ ಮಾಡುತ್ತೇನೆ. ಮೈಸೂರು ಕೇರಳದ ಗಡಿ ಜಿಲ್ಲೆಯಾದ ಕಾರಣ ಇವತ್ತೇ ಸಭೆ ಮಾಡುತ್ತೇನೆ ಎಂದು ಹೇಳಿದರು.
ಸಂಸತ್ ನಲ್ಲಿ ಸ್ಮೋಕ್ ಬಾಂಬ್ ವಿಚಾರದ ಬಗ್ಗೆ ಮಾತನಾಡಿದ ಸಚಿವರು ಇದು ಗಂಭೀರವಾದ ರಾಷ್ಟ್ರೀಯ ಭದ್ರತಾ ವಿಚಾರ. ಆರೋಪಿಗಳಿಗೆ ಬೇರೆಯವರು ಲೇಟರ್ ಕೊಟ್ಟಿದ್ದರೆ ಮೈಸೂರು ಗತಿ ಏನಾಗುತ್ತಿತ್ತು? ಬೇರೆ ಧರ್ಮದವರು ಲೇಟರ್ ಕೊಟ್ಟಿದ್ದರೆ ಗತಿ ಏನಾಗುತ್ತಿತ್ತು? ಲೇಟರ್ ಕೊಟ್ಟಿದ್ದ ಕಾರಣ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ.
ಒಂದೊಂದು ಬಾರಿ ಗಡಿಪಾರು ಆದವರು, ಕೊಲೆ ಆರೋಪಿಗಳು ನಮ್ಮ ಜೊತೆಯೆ ಫೋಟೋ ತೆಗೆಸಿ ಕೊಂಡಿರುತ್ತಾರೆ ಅದನ್ನು ನಾವು ಗಮನಿಸೋಕೆ ಆಗುತ್ತಾ? ಇದು ಅದೇ ರೀತಿ ಅಷ್ಟೆ ಎಂದು ಹೇಳಿದರು.