ಬೆಂಗಳೂರು: ಜೂನ್ 12ರಂದು ಪ್ರಪಂಚದಾದ್ಯಂತ ‘ವಿಶ್ವ ಬಾಲಕಾರ್ಮಿಕ ವಿರೋಧಿ ದಿನ’ವನ್ನು ಆಚರಿಸಲಾಗುತ್ತದೆ. ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆ 2002ರಲ್ಲಿ ಈ ದಿನವನ್ನು ಘೋಷಿಸಿದ್ದು, ಆಗಿನಿಂದ ಪ್ರತಿ ವರ್ಷ ಈ ದಿನವು ಬಾಲ ಕಾರ್ಮಿಕರ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದಿಂದ ಆಚರಿಸಲಾಗುತ್ತಿದೆ. ವಿಶ್ವದಾದ್ಯಂತ ವಿವಿಧ ರಾಷ್ಟ್ರಗಳು ಈ ದಿನವನ್ನು ಸಾಮಾಜಿಕ ಜವಾಬ್ದಾರಿ ನಿಭಾಯಿಸುವ ದೃಷ್ಟಿಕೋಣದಿಂದ ಆಚರಿಸುತ್ತಿವೆ.
ಕರ್ನಾಟಕ ರಾಜ್ಯವೂ ಈ ದಿನದ ಮಹತ್ವವನ್ನು ಮನಗಂಡು ಹಲವು ಸಾಮಾಜಿಕ ಜಾಗೃತಿ ಕ್ರಮಗಳನ್ನು ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಇಲಾಖೆ, ನಿಗಮಗಳು, ಮಂಡಳಿಗಳು, ಪ್ರಾಧಿಕಾರಗಳು, ಶಾಲಾ-ಕಾಲೇಜುಗಳು ಹಾಗೂ ಇತರ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರು “ಬಾಲ ಹಾಗೂ ಕಿಶೋರ ಕಾರ್ಮಿಕರಿಂದ ದುಡಿಮೆಯನ್ನು ಬಯಸುವುದಿಲ್ಲವೆಂಬ ಪ್ರಮಾಣ ವಚನ”ವನ್ನು ಸ್ವೀಕರಿಸುವಂತೆ ರಾಜ್ಯ ಸರ್ಕಾರ ಆದೇಶ ನೀಡಿದೆ.