ಬೆಂಗಳೂರು: ಆರ್ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತ ಸರ್ಕಾರದ ಪ್ರಾಯೋಜಿತ ಅಮಾಯಕರ ಹತ್ಯಾಕಾಂಡ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತಕ್ಕೊಳಗಾಗಿ 11 ಮಂದಿ ಮೃತಪಟ್ಟ ಕುರಿತು ಬಿಜೆಪಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಪ್ಪು ನಮ್ಮದು ಸರಿ, ಆದರೆ ತಪ್ಪು ಯಾರದ್ದೆಂದು ಜನರು ಕೇಳುತ್ತಿದ್ದಾರೆ. ಕೂಗಳತೆ ಅಂತರದಲ್ಲೇ ಎರಡೆರಡು ಕಾರ್ಯಕ್ರಮಗಳು. ಈ ಕಾರ್ಯಕ್ರಮದ ಬಗ್ಗೆ ಐಪಿಎಲ್ ಚೇರ್ಮ್ಯಾನ್ ಗೊತ್ತೇ ಇಲ್ಲ ಎಂದಿದ್ದಾರೆ. ಸರ್ಕಾರ ಕೇಳಿದ್ದಕ್ಕೆ ಗ್ರೌಂಡ್ ಕೊಟ್ಟಿದ್ದೇನೆ ಎಂದು ಕೆಎಸ್ಸಿಎ ಹೇಳಿದೆ. ಇದರಲ್ಲಿ ಕೆಎಸ್ಸಿಎ ಅವರದ್ದು ತಪ್ಪಿಲ್ಲ. ಆರ್ಸಿಬಿಯವರು ಎರಡು ಕಿ.ಮೀ ಮೆರವಣಿಗೆಗೆ ಕೇಳಿದ್ದರು. ಆದರೆ ಅವರನ್ನು ವಿಧಾನಸೌಧಕ್ಕೆ ಕರೆದುಕೊಂಡು ಬಂದಿದ್ದು ಯಾರು ಎಂದು ಕೇಳಿದರು.
ಪಂದ್ಯ ಮುಗಿದ ಮೇಲೆ ನಮ್ಮ ಪೊಲೀಸರು ಬೆಳಗ್ಗೆ 3 ಗಂಟೆವರೆಗೂ ಕೆಲಸ ಮಾಡಿದ್ದಾರೆ. ಪಾಪ ನಮ್ಮ ಪೊಲೀಸರಿಗೆ ರಾತ್ರಿ ಎಲ್ಲಾ ನಿದ್ದೆನೇ ಇರಲಿಲ್ಲ. ಆದರೆ ನಮ್ಮ ಸರ್ಕಾರಕ್ಕೆ ಕಾಮನ್ ಸೆನ್ಸ್ ಇಲ್ಲ. ಅದೇ ಪೊಲೀಸರನ್ನು ನಿಯೋಜನೆ ಮಾಡಿದರೆ ಅವರು ಹೇಗೆ ಕೆಲಸ ಮಾಡಲು ಆಗುತ್ತದೆ? ಪೊಲೀಸರು ಈ ಕಾರ್ಯಕ್ರಮಕ್ಕೆ ನಿರಾಕರಣೆ ಮಾಡಿದ್ದಾರೆ. ಆದರೆ ಬಲತ್ಕಾರದಿಂದ ಸರ್ಕಾರದಲ್ಲಿರುವುದು ನಾನಾ ನೀನಾ ಎಂದು ಪ್ರಶ್ನೆ ಕೇಳಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ವಿಧಾನ ಸೌಧದ ಮುಂದೆ ಡ್ರೋನ್ ಎಲ್ಲಾ ಬಳಕೆ ಮಾಡಿದ್ದಾರೆ. ಹೈಕೋರ್ಟ್ ನಿರ್ಬಂಧಿತ ಸ್ಥಳ, ಎಂತಹ ಮುಠ್ಠಾಳ ಕೆಲಸ ಮಾಡಿದೆ. ಇವತ್ತು ಕೋರ್ಟ್ ಕೂಡ ಸುಮೊಟೋ ಕೇಸ್ ದಾಖಲಿಸಿಕೊಂಡಿದೆ. ಇಷ್ಟಾದರೂ ಕೂಡ ಮುಖ್ಯಮಂತ್ರಿಗಳು, ಇಷ್ಟು ಜನ ಸೇರುತ್ತಾರೆ ಎಂದು ನಾವು ಅಂದಾಜಿಸಿಲ್ಲ ಅಂದಿದ್ದಾರೆ. ಎಲ್ಲೆಲ್ಲಿ ಎಷ್ಟೆಷ್ಟು ಜನರು ಸೇರುತ್ತಾರೆ ಎಂದು ಸರ್ಕಾರಕ್ಕೆ ಸಾಮಾನ್ಯ ಜ್ಞಾನವೂ ಇಲ್ಲವೇ ಎಂದು ಕಿಡಿಕಾರಿದ್ದಾರೆ.