ಮಂಡ್ಯ: ಉಪಲೋಕಾಯುಕ್ತರ ಭೇಟಿ ಹಾಗೂ ಇತ್ತೀಚೆಗೆ ಮಿಮ್ಸ್ ನಲ್ಲಿ ಬಾಲಕಿಯ ಸಾವನ್ನು ಗಂಭೀರವಾಗಿ ಪರಿಗಣಿಸಿರುವ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ರವಿಕುಮಾರ್ ಹಾಗೂ ಜಿಲ್ಲಾಧಿಕಾರಿ ಡಾ: ಕುಮಾರ ಅವರು ಇಂದು ಮಿಮ್ಸ್ ನಲ್ಲಿ ಸಭೆ ನಡೆಸಿ ಸೂಚನೆಗಳನ್ನು ನೀಡಿದರು.
ಕುಡಿಯುವ ನೀರು ಮೊದಲ ಮೂಲಭೂತ ಸೌಕರ್ಯವಾಗಿದ್ದು, ಮಿಮ್ಸ್ ನಲ್ಲಿ ಬಹಳಷ್ಟು ರೋಗಿಗಳು ಹಾಗೂ ಸಾರ್ವಜನಿಕರು ಕುಡಿಯುವ ನೀರಿನ ಕೊರತೆಯಿದೆ ಎಂದು ಆರೋಪಿಸುತ್ತಿದ್ದು, ಶಾಸಕ ಪಿ.ರವಿಕುಮಾರ್ ಅವರು ಶಾಸಕರ ಅನುದಾನದಿಂದ ಎರಡು ಶುದ್ಧ ಕುಡಿಯುವ ನೀರಿನ ಘಟಕವನ್ನು ಸಭೆಯಲ್ಲೇ ಮಂಜೂರು ಮಾಡಿ ಅವಶ್ಯಕವಿರುವ ಸ್ಥಳದಲ್ಲಿ ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆಸ್ಪತ್ರೆಯಲ್ಲಿ ವಾಹನ ನಿಲುಗಡೆಗೆ ಸಂಬಂಧಿಸಿದಂತೆ ಹಲವಾರು ದೂರುಗಳಿದ್ದು, ವಾಹನ ನಿಲುಗಡೆ ಸ್ಥಳದಲ್ಲಿ ಸಿ.ಸಿ.ಟಿ.ವಿ ಅಳವಡಿಸಿ. ವಾಹನ ನಿಲುಗಡೆ ಮಾಡುವವರಿಗೆ ಎಲೆಕ್ಟ್ರಾನಿಕ್ ಆಧಾರಿತ ಚೀಟಿಗಳನ್ನು ನೀಡಬೇಕು ಹಾಗೂ ನಿಲುಗಡೆಯ ಸಮಯ ನಮೂದು ಮಾಡಬೇಕು ಎಂದರು.
ಸoಚಾರ ಪೊಲೀಸ್ ಠಾಣೆಯವರು ನಿಗದಿತವಾಗಿ ಭೇಟಿ ನೀಡಿ ವಾಹನ ನಿಲುಗಡೆ ಸಮರ್ಪಕವಾಗಿ ನಡೆಯುತ್ತಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ಕೆಲವರು ವಾಹನ ನಿಲುಗಡೆ ಪ್ರದೇಶದಲ್ಲಿ ವಾಹನವನ್ನು ವಾರಗಟ್ಟಲೇ ನಿಲ್ಲಿಸಿ ಹೋಗುತ್ತಾರೆ ಎಂದು ಆರೋಪವಿದೆ. ಇದನ್ನು ಸಹ ಗಂಭೀರವಾಗಿ ಪರಿಶೀಲಿಸಿ ಎಂದು ಸೂಚನೆ ನೀಡಿದರು.
ಮಿಮ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಯಾಂಟೀನ್ ನಲ್ಲಿ ಉತ್ತಮ ಗುಣಮಟ್ಟದ ಸೇವೆ ಸಿಗುತ್ತಿಲ್ಲ. ಇದನ್ನು ಪರಿಶೀಲಿಸಿ ಉತ್ತಮ ಗುಣಮಟ್ಟದ ಆಹಾರ ದೊರಕುವ ರೀತಿ ವ್ಯವಸ್ಥೆ ಮಾಡಿ ಎಂದರು.
ಅಕ್ಕ ಕೆಫೆ ಸ್ವಸಹಾಯ ಮಹಿಳಾ ಗುಂಪು ಸ್ಥಳದ ವ್ಯವಸ್ಥೆ ಮಾಡಿಕೊಂಡರೆ 5 ಲಕ್ಷ ರೂ ಸಹಾಯಧನ ಪಡೆದು ಅಕ್ಕ ಕೆಫೆ ಪ್ರಾರಂಭಿಸಬಹುದು. ಇದರ ಬಗ್ಗೆ ಸಹ ಯೋಜಿಸಿ ಉತ್ತಮ ಕ್ಯಾಂಟೀನ್ ನ್ನು ಮಿಮ್ಸ್ ಗೆ ಒದಗಿಸಲಾಗುವುದು ಎಂದರು.
ಮಾನವೀಯ ನೆಲೆಯಲ್ಲಿ ಕಾರ್ಯನಿರ್ವಹಿಸಿ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರು ಬಡವರಾಗಿದ್ದು, ಅವರೊಂದಿಗೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಕಾರ್ಯನಿರ್ವಹಿಸಿ. ಸರ್ಕಾರಿ ನೌಕರರು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ ಎಂದು ಕಿವಿಮಾತು ಹೇಳಿದರು.
ಜಿಲ್ಲಾಧಿಕಾರಿ ಡಾ: ಕುಮಾರ ಅವರು ಮಾತನಾಡಿ ಶೌಚಾಲಯಗಳನ್ನು ದಿನಕ್ಕೆ ಮೂರು ಬಾರಿ ಸೌಚ್ಛಗೊಳಿಸುತ್ತಿರುವ ಬಗ್ಗೆ ಲಾಗ್ ಪುಸ್ತಕವನ್ನು ನಿರ್ವಹಿಸಿ. ಶೌಚಾಲಯದಲ್ಲಿ ಬಳಸುವ ಬಕೆಟ್ ಗಳಿಂದ ಹಿಡಿದು ಮಿಮ್ಸ್ ನಲ್ಲಿ ಉಪಯೋಗಿಸುವ ವಸ್ತುಗಳ ಮೇಲೆ ಮಿಮ್ಸ್ ಎಂದು ನಮೂದಿಸಿ ಎಂದರು.
ಹೊರ ರೋಗಿ ಚಿಕಿತ್ಸಾ ವಿಭಾಗದಲ್ಲಿ ಮಹಿಳೆಯರು ಹಾಗೂ ವಿಕಲಚೇತನರಿಗೆ ಪ್ರತ್ಯೇಕವಾದ ಸಾಲುಗಳ ವ್ಯವಸ್ಥೆ ಮಾಡಿ. ಔಷಧಿ ವಿತರಣಾ ಸ್ಥಳದಲ್ಲೂ ಸಹ ಇನ್ನೊಂದು ಹೆಚ್ಚುವರಿ ಸಾಲನ್ನು ತೆರೆಯಿರಿ. ಅದನ್ನು ನಿರ್ವಹಿಸುವ ವ್ಯವಸ್ಥೆ ಮಾಡಿ. ಆರೋಗ್ಯ ಧಾಮದಲ್ಲಿ 100 ಹಾಸಿಗೆ ವ್ಯವಸ್ಥೆ ಮಾಡಿದ್ದು, ಆರೋಗ್ಯ ಧಾಮದ ನಿರ್ವಹಣೆಗೆ ಒಬ್ಬರು ಹೊರಗುತ್ತಿಗೆ ಸಿಬ್ಬಂದಿಯನ್ನು ನಿಯೋಜಿಸುವ ವ್ಯವಸ್ಥೆಯಾಗಬೇಕು ಎಂದರು.
ರೋಗಿಗಳಿಗೆ ಹೊರಗಡೆ ಖಾಸಗಿ ಮೆಡಿಕಲ್ ಸ್ಟೋರ್ ಗಳಲ್ಲಿ ಖರೀದಿ ಮಾಡಲು ವೈದ್ಯರು ಚೀಟಿ ಬರೆದುಕೊಡುತ್ತರೆ ಎಂದು ಆರೋಪವಿದೆ. ಇದರ ಬಗ್ಗೆ ನಿಗಾ ವಹಿಸಿ.ಇದಲ್ಲದೇ ಡ್ಯೂಟಿ ಡಾಕ್ಟರ್ ಸರಿಯಾದ ಸಮಯಕ್ಕೆ ಕೆಲಸಕ್ಕೆ ಹಾಜರಾಗುತ್ತಿದ್ದಾರ ಹಾಗೂ ಕರ್ತವ್ಯ ನಿರ್ವಹಿಸುತ್ತದ್ದಾರ ಎಂಬುದನ್ನು ಪರಿಶೀಲಿಸಿ. ಹಾಜರಾತಿ ಪರಿಶೀಲಿಸಲು ಉನ್ನತ ತಂತ್ರಜ್ಞಾನದ ಸಾಫ್ಟ್ ವೇರ್ ಗಳ ಬಯೋಮೆಟ್ರಿಕ್ ಇದ್ದು, ಅದನ್ನು ಅಳವಡಿಸಿಕೊಳ್ಳಿ ಎಂದರು. ಮಿಮ್ಸ್ ನಿರ್ದೇಶಕರು, ವೈದ್ಯಕೀಯ ಅಧೀಕ್ಷಕರು, ಆರ್.ಎಂ.ಒ ಹಾಗೂ ಸಿ.ಎ.ಒ ಅವರು ಪ್ರತಿದಿನ ಸರದಿ ಮಾಡಿಕೊಂಡು ಆಸ್ಪತ್ರೆಯನ್ನು ಪರಿಶೀಲಿಸಿದರೆ ಬಹಳಷ್ಟು ಸಮಸ್ಯೆಗಳು ಪರಿಹಾರವಾಗುತ್ತದೆ ಎಂದರು.
ಸಭೆಯಲ್ಲಿ ಮಿಮ್ಸ್ ನಿರ್ದೇಶಕ ಡಾ: ನರಸಿಂಹ ಸ್ವಾಮಿ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.