ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ತನ್ನ ಪೋರ್ಟಲ್ನಲ್ಲಿ ಯುಜಿಸಿಇಟಿ-2024 ಅಭ್ಯರ್ಥಿಗಳ ಮಾಹಿತಿಯನ್ನು ಜೂನ್ 29ರಂದು ಪ್ರಕಟಿಸಿದ್ದು, ಇದರಲ್ಲಿ ಯಾವುದೇ ತಪ್ಪು ಕಂಡುಬಂದಿದ್ದರೆ ಅಂತಹ ಅಭ್ಯರ್ಥಿಗಳು ಜುಲೈ 4ರಿಂದ 6ರ ಒಳಗೆ ಇಲ್ಲಿನ ಮಲ್ಲೇಶ್ವರದಲ್ಲಿರುವ ಕೆಇಎ ಕಚೇರಿಗೆ ಖುದ್ದು ಹಾಜರಾಗಿ ಸರಿಪಡಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳು ಯುಜಿಸಿಇಟಿ ಅರ್ಜಿಯಲ್ಲಿ ತಪ್ಪುಗಳನ್ನು ಎಸಗಿದ್ದರಿಂದ ವ್ಯತ್ಯಾಸಗಳಾಗಿರುವುದನ್ನು ಗಣನೆಗೆ ತೆಗೆದುಕೊಂಡು ಈ ಅಂತಿಮ ಆವಕಾಶ ನೀಡಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಮಂಗಳವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಒಂದು ಲಕ್ಷಕ್ಕಿಂತ ಒಳಗಿನ ರ್ಯಾಂಕ್ನವರು ಜುಲೈ 4ರಂದು, 1.8 ಲಕ್ಷಕ್ಕಿಂತ ಒಳಗಿನ ರ್ಯಾಂಕ್ನವರು ಜುಲೈ 5ರಂದು ಹಾಗೂ 1.8 ಲಕ್ಷಕ್ಕಿಂತ ಮೇಲ್ಪಟ್ಟ ರ್ಯಾಂಕ್ನವರು ಜುಲೈ 6ರಂದು ವೆಬ್ಸೈಟಿನಲ್ಲಿ ಪ್ರಕಟಿಸಿರುವ ವೇಳಾಪಟ್ಟಿಯ ಪ್ರಕಾರ ಖುದ್ದು ಹಾಜರಾಗಬೇಕು ಎಂದು ವಿವರಿಸಲಾಗಿದೆ.
ಆನ್ಲೈನ್ ಪೋರ್ಟಲ್ನಲ್ಲಿ ಪ್ರಕಟಿಸಿರುವ ಮಾಹಿತಿಯಲ್ಲಿ ವ್ಯತ್ಯಾಸ ಗುರುತಿಸಿರುವ ಅಭ್ಯರ್ಥಿಗಳು ಯುಜಿಸಿಇಟಿ-2024ಕ್ಕೆ ಸಲ್ಲಿಸಿದ್ದ ಅರ್ಜಿ ಪ್ರತಿ, ಪ್ರವೇಶ ಪತ್ರ, ಅಗತ್ಯವಿರುವ ಎಲ್ಲಾ ಮೂಲ ದಾಖಲೆಗಳು ಮತ್ತು ಎಲ್ಲಾ ಪ್ರಮಾಣ ಪತ್ರಗಳ ಎರಡು ಸೆಟ್ ಜೆರಾಕ್ಸ್ ಪ್ರತಿಗಳೊಂದಿಗೆ ಬರಬೇಕು ಎಂದು ಅವರು ತಿಳಿಸಿದ್ದಾರೆ.
ಎಲ್ಲಾ ಮಾಹಿತಿ ಸರಿ ಇರುವವರು ಕೆಇಎಗೆ ಬರುವ ಅಗತ್ಯವಿಲ್ಲ. ಇಂತಹ ಅಭ್ಯರ್ಥಿಗಳು ಕಚೇರಿಗೆ ಬಂದು ವೃಥಾ ಸಮಯ ಹಾಗೂ ಶ್ರಮ ವ್ಯರ್ಥ ಮಾಡಿಕೊಳ್ಳಬಾರದು. ಅಂಥವರಿಗೆ ವೆರಿಫಿಕೇಶನ್ ಸ್ಲಿಪ್ ಡೌನ್ಲೋಡ್ ಮಾಡಿಕೊಳ್ಳಲು ಸದ್ಯದಲ್ಲಿಯೇ ಕೆಇಎ ವೆಬ್ಸೈಟಿನಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದು ಹೆಚ್.ಪ್ರಸನ್ನ ಹೇಳಿದ್ದಾರೆ.