- ಶಂಶೀರ್ ಬುಡೋಳಿ, ರಾಜ್ಯಧರ್ಮ, ಮಂಗಳೂರು.
ಮಂಗಳೂರು (ದಕ್ಷಿಣ ಕನ್ನಡ): ಅಲ್ಲಿ ಸಂಭ್ರಮ ಮುಗಿಲು ಮುಟ್ಟಿತ್ತು. ಕೆಸರಗದ್ದೆಯಲ್ಲಿ ಇಳಿದ ತರುಣ-ತರುಣಿಯರು ಹೊಸ ಉಮೇದಿನಲ್ಲಿದ್ರು. ಕೈಯಲ್ಲಿ ನೇಜಿ ಹಿಡಿದು ನಾಟಿ ಕಾರ್ಯ ಮಾಡುತ್ತಿದ್ರೆ ಕ್ಷಣಮಾತ್ರದಲ್ಲೇ ಕೆಸರು ಗದ್ದೆಯಲ್ಲಿ ಹಸಿರ ರಂಗೋಲಿ ಬಿಡಿಸಿದ್ರು. ಅದ್ರ ಝಲಕ್ ಇಲ್ಲಿದೆ ನೋಡಿ..
ಸುತ್ತಲೂ ತೆನೆತುಂಬಿದ ಭತ್ತದ ಬೆಳೆ… ನಡುಗದ್ದೆಯಲ್ಲಿ ಮಾತ್ರ ಇನ್ನೂ ಬರೀ ಕೆಸರು. ಆದರೆ ಸಾಲಾಗಿ ಬಂದ ಈ ನವ ತರುಣರು ಮಾತ್ರ ಕ್ಷಣಮಾತ್ರದಲ್ಲೇ ಆ ಗದ್ದೆ ಯಲ್ಲೂ ಹಸಿರ ಬಿತ್ತನೆ ಮಾಡಿದ್ರು. ಟಿಪಿಕಲ್ ರೈತರ ವಸ್ತ್ರದಲ್ಲಿ ಯುವ ಮನಸ್ಸುಗಳು ಒಂದಾಗಿ ಭತ್ತದ ಬೆಳೆ ಉಳಿಸಿ ಬೆಳೆಸುವ ಪ್ರತಿಜ್ಞೆ ತೆಗೊಂಡ್ರು..ಎಲ್ಲೆಲ್ಲೂ ಕೃಷಿ ಕೆಲಸದ ಸಂಭ್ರಮ ದ ಜೊತೆಗೆ ಹಾಡು ಹಾಡುತ್ತಾ, ಸಂಧಿಗಳನ್ನು ಹೇಳುತ್ತಾ ಗದ್ದೆ ಕೆಲಸದಲ್ಲಿ ನೆರೆದವರು ಮೈ ಮರೆತ್ರು..ಇದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯ ಅನಂತೋಡಿನಲ್ಲಿ ನಡೆದ ಯುವಸಿರಿ ಕಾರ್ಯಕ್ರಮದ ದೃಶ್ಯವೈಭವ..

ಉಜಿರೆಯ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಯುವ ಸಿರಿ ಎನ್ನುವ ಐತಿಹಾಸಿಕ ಕಾರ್ಯಕ್ರಮ ಬೆಳಾಲಿನ ಶ್ರೀ ಅನಂತಪದ್ಮನಾಭ ದೇವಸ್ಥಾನ ಅನಂತೋಡಿವಿನಲ್ಲಿ ನಡೆದಿದೆ..ವಿವಿಧ ಸಂಘ ಸಂಸ್ಥೆಯ ಸಹಯೋಗದಲ್ಲಿ ಸುಮಾರು ೭೫0ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಏಕಕಾಲದಲ್ಲಿ ನೇಜಿನಾಟಿ ಕಾರ್ಯ ನಡೆದಿದೆ.. ಭತ್ತ ಕೃಷಿ ಭಾರತದ ಪ್ರಮಖ ಆದಾಯದ ಮೂಲ ಮತ್ತು ಆಹಾರದ ಮಾರ್ಗವೂ ಹೌದು. ದೇಶದ ಆದಾಯಕ್ಕೂ ಭತ್ತ ಕೃಷಿಯ ಕೊಡುಗೆ ಅಪಾರ.. ಆದರೆ ಇತ್ತೀಚೆಗೆ ದಿನಗಳಲ್ಲಿ ಕೃಷಿ ಮಾಡುವ ರೈತರ ಸಂಖ್ಯೆ ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್, ಯುವಕ – ಯುವತಿಯರಲ್ಲಿ ಕೃಷಿ ಬಗ್ಗೆ ಅರಿವು ಮೂಡಿಸುವ ಮತ್ತು ಕೃಷಿ ಕಡೆ ಸೆಳೆಯುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತಿದೆ.
- ಪೂರನ್ ವರ್ಮ, ಅಧ್ಯಕ್ಷರು ರೋಟರಿ ಕ್ಲಬ್ ಬೆಳ್ತಂಗಡಿ
ವಿದ್ಯಾರ್ಥಿಗಳಿಂದ ಎರಡು ತಿಂಗಳ ಹಿಂದೆಯೇ ಅನಂತೋಡಿನ ನಾಲ್ಕುವರೆ ಎಕರೆ ಗದ್ದೆಯಯಲ್ಲಿ ಉಳುಮೆ, ಬೀಜ ಬಿತ್ತನೆ, ಪುಣಿ ಕಟ್ಟುವ ಕಾರ್ಯ ಹೀಗೆ ಕೃಷಿಕಾರ್ಯ ನಡೆದಿದೆ.ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಕೆ ಸೇರಿದ ಗದ್ದೆ ಇದಾಗಿದ್ದು,ಎಲ್ಲಾ ಭತ್ತದ ಕೆಲಸಗಳನ್ನು ವಿದ್ಯಾರ್ಥಿಗಳೇ ಮಾಡಿದ್ದಾರೆ.. ಮುಂದೆ ಕಟಾವಿನ ಸಂದರ್ಭದಲ್ಲೂ ಈ ವಿದ್ಯಾರ್ಥಿಗಳೇ ಕೆಲಸಗಳನ್ನು ಮಾಡುತ್ತಾರೆ. ಇಲ್ಲಿ ಬೆಳೆದ ಭತ್ತ ಯಾರ ಸ್ವಂತಕ್ಕೆ ಉಪಯೋಗ ವಾಗೋದಿಲ್ಲ.ದೇವರ ನೈವೇದ್ಯ ಸೇರಿದಂತೆ ಅನ್ನ ದಾನಕ್ಕೆ ಈ ಗದ್ದೆಯ ಫಸಲು ಬಳಕೆಯಾಗಲಿದೆ.
- ಮೋಹನ್ ಕುಮಾರ್, ಸಂಚಾಲಕರು, ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್
ಸುಂದರ ಪೃಕೃತಿಯ ನಡುವೆ ಅದ್ಭುತ ಕಾರ್ಯಕ್ರಮ ನೆರೆದ ಜನರ ಮನಸ್ಸಿಗೂ ಮುದ ನೀಡಿತ್ತು.ಕಾರ್ಯಕ್ರಮದ ಪಕ್ಕದ ಗದ್ದೆಯಲ್ಲಿ ಆನೆ, ಜಿಂಕೆ, ನವಿಲು, ಹಸು-ಕರುಗಳ ಪೃತಿಕೃತಿ ಪೃಕೃತಿಯೊಳಗೆ ಎಲ್ಲರೂ ಒಂದೇ ಎಂಬ ಭಾವನೆ ಮೂಡಿಸಿತು. ಒಟ್ಟಿನ್ನಲ್ಲಿ ಹಲವು ಸೇವಾ ಕಾರ್ಯ ಯೋಜನೆಯ ಮೂಲಕ ಹೆಸರುವಾಸಿಯಾಸ ಬದುಕುಕಟ್ಟೋಣ ಬನ್ನಿ ಸಂಸ್ಥೆ, ಇದೀಗ ಮಕ್ಕಳಲ್ಲಿ ಕೃಷಿಪ್ರೀತಿಯ ಬೀಜ ವನ್ನು ಬಿತ್ತಲು ಮುಂದಾಗಿದೆ..ಇಂತಹ ಪ್ರಯತ್ನ ನಿಜಕ್ಕೂ ಶ್ಲಾಘನೀಯ.
