Friday, April 11, 2025
Google search engine

Homeರಾಜಕೀಯಬಿ.ಸಿ.ರೋಡ್‌ನಲ್ಲಿ ಜಮಾಯಿಸಿದ VHP, ಬಜರಂಗದಳ ಕಾರ್ಯಕರ್ತರು: ಈದ್ ಆಚರಣೆಗೆ ಆತಂಕ

ಬಿ.ಸಿ.ರೋಡ್‌ನಲ್ಲಿ ಜಮಾಯಿಸಿದ VHP, ಬಜರಂಗದಳ ಕಾರ್ಯಕರ್ತರು: ಈದ್ ಆಚರಣೆಗೆ ಆತಂಕ

ಮಂಗಳೂರು: ಈದ್ ಆಚರಣೆಗೆ ಸಂಬಂದಿಸಿ ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ ವೆಲ್ ನೀಡಿದ ಹೇಳಿಕೆ ಹಾಗೂ ಅದಕ್ಕೆ ಪ್ರತಿಯಾಗಿ ಬಂಟ್ವಾಳ ಪುರಸಭೆಯ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್ ನೀಡಿದ ಹೇಳಿಕೆಗಳು ಬಿ.ಸಿ.ರೋಡ್ ನಲ್ಲಿ ಆತಂಕದ ವಾತಾವರಣ ಸೃಷ್ಟಿಸಿವೆ.

ಪಟ್ಟಣದಲ್ಲಿ ಸೋಮವಾರ ಬೆಳಿಗ್ಗೆಯಿಂದ ವಿಎಚ್‌ಪಿ ಬಜರಂಗದಳ ಕಾರ್ಯಕರ್ತರು ಜಮಾಯಿಸಿದ್ದಾರೆ. ಶರಣ್ ಪಂಪ್ ವೆಲ್ ಅವರಿಗೆ ಸವಾಲು ಹಾಕಿರುವ ಪುರಸಭಾ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್ ಅವರ ವಿರುದ್ದ ಬಜರಂಗ ದಳ‌ಕಾರ್ಯಕರ್ತರು ಘೋಷಣೆ ಕೂಗಿದರು.

ನಾಗಮಂಗಲದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ‌ ನಡೆದ ಗಲಭೆ ಖಂಡಿಸಿ ಮಂಗಳೂರಿನಲ್ಲಿ ಈಚೆಗೆ ನಡೆದ ಪ್ರತಿಭಟನೆ ವೇಳೆ ಶರಣ್ ಪಂಪ್ ವೆಲ್,’ ಹಿಂದೂಗಳು ಮನಸು ಮಾಡಿದರೆ ಈದ್ ಮೆರವಣಿಗೆ ಅಸಾಧ್ಯ’ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಹೇಳಿಕೆ ನೀಡಿದ್ದ ಮಹಮ್ಮದ್ ಶರೀಫ್ ‘ ತಾಕತ್ತಿದ್ದರೆ ಬಿ.ಸಿ.ರೋಡ್‌ಗೆ ಬನ್ನಿ ಎಂದು ಸವಾಲೆಸೆದಿದ್ದರು.

ಈ ಕುರಿತು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದ ಬಜರಂಗದಳ ಮುಖಂಡ ಪುನೀತ್ ಅತ್ತಾವರ್, ‘ನಾವು ‘ಚಲೋ ಬಿ.ಸಿ.ರೋಡ್’ ಹಮ್ಮಿಕೊಳ್ಳುತ್ತೇವೆ.‌ ತಡೆಯುವವರು ತಡೆಯಿರಿ ‘ ಎಂದು ಪ್ರತಿ ಸವಾಲು ಹಾಕಿದ್ದರು.

ಬಿ.ಸಿ.ರೋಡ್‌ನಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಶರಣ್ ಪಂಪ್ ವೆಲ್, ‘ಮಹಮ್ಮದ್ ಶರೀಫ್ ಅವರ ಸವಾಲು ಸ್ವೀಕರಿಸಿ ಬಿಸಿರೋಡಿಗೆ ಬಂದಿದ್ದೇನೆ. ಇನ್ನೂ ಮುಂದೆಯೂ ಇಂತಹ ಸವಾಲು ಸ್ವೀಕರಿಸಲು ತಯಾರಾಗಿದ್ದೇವೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನ ಸೇರುವ ಮೂಲಕ ಹಿಂದುತ್ವಕ್ಕೆ ಜಯಸಿಕ್ಕಿದೆ. ಇಂತಹ ಸವಾಲುಗಳು ಹಿಂದೂ ಕಾರ್ಯಕರ್ತರಿಗೆ ಇದೇ ಮೊದಲಲ್ಲ. ಸಾಕಷ್ಟು ಕಾರ್ಯಕರ್ತರು ಪ್ರಾಣವನ್ನು ಕೊಟ್ಟಿದ್ದಾರೆ ಜೈಲಿಗೂ ಹೋಗಿದ್ದಾರೆ. ನಾಗಮಂಗಲದ ಗಣೇಶ ಚತುರ್ಥಿಯ ಮೆರವಣಿಗೆ ಸಂದರ್ಭದಲ್ಲಿ ಕಿಡಿಗೇಡಿಗಳು ಹಿಂಸೆ ಎಬ್ಬಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಹೇಳಿಕೆಯನ್ನು ಕೊಟ್ಟಿದ್ದೇವೆ.ಆದರೆ,ಆತ ಅದಕ್ಕೆ ಬಿ.ಸಿ.ರೋಡಿಗೆ ಆಗಮಿಸುವಂತೆ ಸವಾಲು ಹಾಕಿದ್ದ. ಆತನ ಸವಾಲಿಗೆ ಉತ್ತರವಾಗಿ ನಾವು ಇಂದು ಬಿಸಿರೋಡಿನಲ್ಲಿ ಸೇರಿದ್ದೇವೆ. ಮುಂದೆ ಅವಶ್ಯಕತೆ ಬಿದ್ದರೆ ಆತ ಹೇಳಿದಂತೆ ಮಸೀದಿಗೆ ಹೋಗುವುದಕ್ಕೂ ಸಿದ್ದರಿದ್ದೇವೆ. ಇದು ಶರಣ್ ಒಬ್ಬನಿಗೆ ಹಾಕಿದ ಸವಾಲು ಅಲ್ಲ‌ ಇಡೀ ಹಿಂದೂ ಕಾರ್ಯಕರ್ತರಿಗೆ ಹಾಕಿದ ಸವಾಲು’ ಎಂದು ಅವರು ತಿಳಿಸಿದರು.

ವಿಎಚ್‌ಪಿ, ಬಜರಂಗದಳ ಸಂಘಟನೆಗಳ ಪ್ರಮುಖರಾದ ಪುನೀತ್ ಅತ್ತಾವರ, ಪ್ರಸಾದ್ ಕುಮಾರ್ ರೈ ಬಂಟ್ವಾಳ, ಭಾಸ್ಕರ್ ಧರ್ಮಸ್ಥಳ, ನವೀನ್ ನೆರಿಯಾ, ಭುಜಂಗ ಕುಲಾಲ್, ಗುರುರಾಜ್ ಬಂಟ್ವಾಳ, ನರಸಿಂಹ ಮಹೇಶ್ ಬೈಲೂರು, ಕೃಷ್ಣಪ್ರಸಾದ್, ಮಿಥುನ್ ಕಲ್ಲಡ್ಜ, ನವೀನ್ ಮೂಡುಶೆಡ್ಡೆ, ಸಚಿನ್ ಮೆಲ್ಕಾರ್, ಆರ್.ಚೆನ್ನಪ್ಪ ಕೋಟ್ಯಾನ್, ದಿನೇಶ್ ಅಮ್ಟೂರು, ಸಂದೇಶ್ ಶೆಟ್ಟಿ ಅರೆಬೆಟ್ಟು, ಎ.ಗೋವಿಂದ ಪ್ರಭು, ಪುರುಷೋತ್ತಮ ಸಾಲಿಯಾನ್, ರಾಮದಾಸ್ ಬಂಟ್ವಾಳ ಮತ್ತಿತರರು ಇದ್ದರು.

ಬಜರಂಗದಳ ಮತ್ತು ವಿಎಚ್‌ಪಿ ಕಾರ್ಯಕರ್ತರ ಜೊತೆ ಮಾತುಕತೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳು ಸ್ಥಳದಿಂದ ನಿರ್ಗಮಿಸುವಂತೆ ಮನವೊಲಿಸುತ್ತಿದ್ದಾರೆ.

ಪಶ್ಚಿಮ ವಲಯದ ಐಜಿಪಿ ಅಮಿತ್ ಸಿಂಗ್,ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ ಎನ್.ಉಪವಿಭಾಗಾಧಿಕಾರಿ ಹರ್ಷವರ್ದನ್,ತಹಶಿಲ್ದಾರ್ ಅರ್ಚನಾ ಭಟ್ ಅವರು ಸ್ಥಳಕ್ಕೆ‌ ದಸಾವಿಸಿದ್ದಾರೆ. ಬಿ.ಸಿ.ರೋಡ್ ನಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಯತ್ನಿಸುತ್ತಿದ್ದಾರೆ. ಜಿಲ್ಲೆಯಾದ್ಯಂತ ಮಸೀದಿಗಳ ಬಳಿ ಬಿಗು ಪೊಲೀಸ್ ಬಂದೋಬಸ್ತ್ಗೆ ಏರ್ಪಾಟು ಮಾಡಲಾಗಿದೆ.

ಈ ನಡುವೆ ಪ್ರಚೋದನಾಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಮಹಮ್ಮದ್ ಶರೀಫ್ ವಿರುದ್ಧ ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶರಣ್ ಪಂಪ್ವೆಲ್ ಹಾಗೂ ಪುನೀತ್ ಅತ್ತಾವರ ವಿರುದ್ಧ ಮಂಗಳೂರಿನ ಸೆನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಚೋದನಾ ಕಾರಿ ಹೇಳಿಕೆ ನೀಡುವವರ ವಿರುದ್ಧ ಕಠಿಣ ಕ್ರಮ‌ಕೈಗೊಳ್ಳಲಾಗುತ್ತದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಎಚ್ಚರಿಕೆ ನೀಡಿದ್ದಾರೆ.

RELATED ARTICLES
- Advertisment -
Google search engine

Most Popular