ಇಂಫಾಲ: ಮಣಿಪುರದಲ್ಲಿ ಹಿಂಸಾಚಾರ ಮತ್ತೆ ಭುಗಿಲೆದ್ದಿದೆ ಬುಧವಾರ ತಡರಾತ್ರಿ ಜನಾಂಗೀಯ ಗಲಭೆ ಪೀಡಿತ ಮಣಿಪುರದ ಖಂಗಾಬೊಕ್ ನಲ್ಲಿ ಉಗ್ರರ ಗುಂಪೊಂದು ಗುಂಡು ಹಾರಿಸಿದ ಪರಿಣಾಮ ಮೂವರು ಗಡಿ ಭದ್ರತಾ (ಬಿಎಸ್ ಎಫ್) ಸಿಬ್ಬಂದಿಗಳು ಗಾಯಗೊಂಡಿದ್ದಾರೆ.
ಪೊಲೀಸರ ಪ್ರಕಾರ, ಉದ್ರಿಕ್ತರ ಗುಂಪೊಂದು ತೌಬಲ್ ಜಿಲ್ಲೆಯ ಖಂಗಾಬೊಕ್ ನಲ್ಲಿರುವ ಸೇನಾ ಶಿಬಿರವನ್ನು ಗುರಿಯಾಗಿ ಗುಂಡಿನ ದಾಳಿ ನಡೆಸಿದ ಪರಿಣಾಮ ಮೂವರು ಸಿಬ್ಬಂದಿಗಳು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗಿದೆ.
ಕೆಳೆದ ಕೆಲ ತಿಂಗಳ ಹಿಂದೆ ಎರಡು ಸಮುದಾಯಗಳ ನಡುವೆ ಆರಂಭವಾದ ಘರ್ಷಣೆ ಬೂದಿ ಮುಚ್ಚಿದ ಕೆಂಡದಂತಿದ್ದು, ಆಗಾಗ ಘರ್ಷಣೆಗಳು ನಡೆಯುತ್ತಿರುತ್ತವೆ ಅಲ್ಲದೆ ಹಿಂಸಾಚಾರ ಪ್ರದೇಶದಲ್ಲಿ ಗಡಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಇದರ ನಡುವೆ ಗುಂಪೊಂದು ಶಿಬಿರದ ಮೇಲೆ ಗುಂಡಿನ ದಾಳಿ ನಡೆಸಿದೆ ಇದಕ್ಕೆ ಪ್ರತಿಯಾಗಿ ಭದ್ರತಾ ಸಿಬಂದಿಗಳು ಪ್ರತಿದಾಳಿ ನಡೆಸಿ ಉದ್ರಿಕ್ತ ಗುಂಪನ್ನು ಹಿಮ್ಮೆಟ್ಟಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಮಾಹಿತಿ ನೀಡಿದ ಪೊಲೀಸ್ ಅಧಿಕಾರಿ ಉದ್ರಿಕ್ತರ ಗುಂಪೊಂದು ತೌಬಲ್ ನಲ್ಲಿರುವ ಪೊಲೀಸ್ ಪ್ರಧಾನ ಕಚೇರಿಯ ಮೇಲೆ ದಾಳಿ ನಡೆಸುವುದು ಉದ್ದೇಶವಾಗಿತ್ತು ಆದರೆ ಭದ್ರತಾ ಸಿಬಂದಿಗಳು ಅದಕ್ಕೆ ಅವಕಾಶ ನೀಡಲಿಲ್ಲ. ಉದ್ರಿಕ್ತ ಗುಂಪನ್ನು ಹಿಮ್ಮೆಟ್ಟಿಸುವಲ್ಲಿ ಸಿಬಂದಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದ್ದಾರೆ.
ಗಾಯಗೊಂಡ ಯೋಧರನ್ನು ಕಾನ್ ಸ್ಟೆಬಲ್ ಗೌರವ್ ಕುಮಾರ್, ಸಹಾಯಕ ಸಬ್ ಇನ್ಸ್ಪೆಕ್ಟರ್ (ಎಎಸ್ ಐ) ಸೊಬ್ರಾಮ್ ಸಿಂಗ್ ಮತ್ತು ಎಎಸ್ ಐ ರಾಮ್ಜಿ ಎಂದು ಗುರುತಿಸಲಾಗಿದೆ. ಗಾಯಗೊಂಡ ಯೋಧರನ್ನು ಚಿಕಿತ್ಸೆಗಾಗಿ ಇಂಫಾಲ್ ನ ರಾಜ್ ಮೆಡಿಸಿಟಿಗೆ ಕರೆದೊಯ್ಯಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.