ಮಂಗಳೂರು (ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿ ನೇತ್ರಾವತಿ ನದಿ ನೀರಿನ ಮಟ್ಟ ಇಂದು ಏಕಾಏಕಿ ಏರಿಕೆಯಾಗಿದೆ. ಸದ್ಯ 7.4 ಮೀಟರ್ ಗೆ ಏರಿಕೆಯಾಗಿದೆ. ಬೆಳಿಗ್ಗೆ 6 ಗಂಟೆಯ ವೇಳೆಗೆ 6.7 ಮೀಟರ್ ನಲ್ಲಿ ಹರಿಯುತ್ತಿದ್ದ ನದಿ ನೀರು ಸುಮರು 8.30 ಗಂಟೆಗೆ 7.5 ಕ್ಕೆ ಏರಿಕೆಯಾಗಿದೆ. ಅಪಾಯದ ಮಟ್ಟ 8.5 ಆಗಿದ್ದು, ತಾಲೂಕಿನ ತಗ್ಗು ಪ್ರದೇಶಗಳು ಜಲಾವೃತಗೊಂಡಿಲ್ಲ.
ಆದರೂ ನದಿ ತೀರದ ಜನರು ಎಚ್ಚರಿಕೆಯಿಂದ ಇರುವಂತೆ ಬಂಟ್ವಾಳ ತಾಲೂಕು ಆಡಳಿತ ತಿಳಿಸಿದೆ. ನೇತ್ರಾವತಿ ನದಿಯು ತುಂಬಿ ಹರಿಯುತ್ತಿರುವ ಹಿನ್ನೆಲೆ ಯಾರೂ ಕೂಡ ನದಿ ತೀರಕ್ಕೆ ತೆರಳಬಾರದು, ಅಪಾಯ ಹೆಚ್ಚಿರುವುದರಿಂದ ಜಾಗರೂಕತೆಯಿಂದ ಇರುವಂತೆ ತಿಳಿಸಿದೆ. ಘಟ್ಟ ಪ್ರದೇಶದಲ್ಲಿ ಅತಿಯಾದ ಮಳೆಗೆ ಉಪ್ಪಿನಂಗಡಿ, ಹಾಗೂ ಬಂಟ್ವಾಳದ ಡ್ಯಾಂ ಗಳು ಭರ್ತಿಯಾಗಿದೆ. ಡ್ಯಾಂ ಗಳು ಭರ್ತಿಯಾದ ಕೂಡಲೇ ಅವರು ನೀರು ಹೊರಬಿಡುವುದರಿಂದ ನೇತ್ರಾವತಿ ನದಿ ಕೆಳಭಾಗದಲ್ಲಿ ತಗ್ಗುಪ್ರದೇಶಗಳು ಜಲಾವೃತಗೊಳ್ಳುತ್ತದೆ ಮತ್ತು ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತದೆ ಎಂದು ಹೇಳಲಾಗಿದೆ.