ಕೇರಳ: ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಭಾರೀ ಭೂಕುಸಿತದಿಂದ ಕಟ್ಟಡಗಳಲ್ಲಿ ಸಿಲುಕಿಕೊಂಡಿರುವ ಜನರನ್ನು ಹುಡುಕಲು ರಕ್ಷಕರು ಕಠಿಣ ಪರಿಸ್ಥಿತಿಗಳೊಂದಿಗೆ ಹೋರಾಡುತ್ತಿದ್ದಾರೆ. ಸಾವಿನ ಸಂಖ್ಯೆ ೨೯೬ಕ್ಕೆ ತಲುಪಿದೆ ಎಂದು ಹೇಳಲಾಗುತ್ತಿದೆ. ಇನ್ನೂ ನಾಪತ್ತೆಯಾಗಿರುವ ೨೦೦ ಮಂದಿಗಾಗಿ ಶೋಧ ಕಾರ್ಯ ನಡೆಯುತ್ತಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ.
ವಯನಾಡ್ ಜಿಲ್ಲಾಡಳಿತದ ಪ್ರಕಾರ, ಮೃತರಲ್ಲಿ ೨೭ ಮಕ್ಕಳು ಮತ್ತು ೭೬ ಮಹಿಳೆಯರು ಸೇರಿದ್ದಾರೆ. ೨೨೫ ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅದರಲ್ಲೂ ಮುಂಡಕ್ಕೆ ಮತ್ತು ಚೂರಲ್ಮಲಾ ಪ್ರದೇಶಗಳಲ್ಲಿ ಹೆಚ್ಚು ಸಾವುನೋವುಗಳು ಸಂಭವಿವೆ ಎಂದು ಕೇರಳದ ಕಂದಾಯ ಸಚಿವ ಕೆ ರಾಜನ್ ಹೇಳಿದ್ದಾರೆ.
ಹಾಳಾದ ರಸ್ತೆಗಳು ಮತ್ತು ಸೇತುವೆಗಳ ಕಾರಣದಿಂದಾಗಿ ಭಾರೀ ಸಲಕರಣೆಗಳ ಕೊರತೆ ಸೇರಿದಂತೆ ರಕ್ಷಣಾ ತಂಡಗಳಿಗೆ ಸವಾಲುಗಳು ಎದುರಾಗಿವೆ. ಮನೆಗಳು ಮತ್ತು ಇತರ ಕಟ್ಟಡಗಳ ಮೇಲೆ ಬಿದ್ದ ಮಣ್ಣು ಮತ್ತು ಬೃಹತ್ ಬೇರುಸಹಿತ ಮರಗಳನ್ನು ತೆರವುಗೊಳಿಸಲು ಕಷ್ಟವಾಗುತ್ತಿದೆ.
ರಕ್ಷಣಾ ಕಾರ್ಯಗಳ ಕುರಿತು ಮಾತನಾಡಿದ ರಾಜನ್, ವಿವಿಧ ಸಂಸ್ಥೆಗಳು ಮತ್ತು ಸಶಸ್ತ್ರ ಪಡೆಗಳ ೧,೩೦೦ ಸಿಬ್ಬಂದಿಗಳು ಈ ಪ್ರದೇಶದಲ್ಲಿ ಜಂಟಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಿದ್ದಾರೆ ಎಂದು ತಿಳಿಸಿದರು. ಜಿಲ್ಲೆಯ ೯೧ ಪರಿಹಾರ ಶಿಬಿರಗಳಿಗೆ ೯,೩೨೮ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಅವರು ಹೇಳಿದರು. ಇವರಲ್ಲಿ ಚೂರಲ್ಮಲಾ ಮತ್ತು ಮೆಪ್ಪಾಡಿಯಲ್ಲಿ ಭೂಕುಸಿತದಿಂದ ಸ್ಥಳಾಂತರಗೊಂಡ ೫೭೮ ಕುಟುಂಬಗಳ ೨,೩೨೮ ಜನರನ್ನು ಒಂಬತ್ತು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅವರು ಹೇಳಿದರು.
ಸಂತ್ರಸ್ತರ ರಕ್ಷಣೆಗೆ ಮೊದಲ ಆದ್ಯತೆ: ಕೇರಳ ಸಿಎಂ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ರಾಜಕೀಯ ಮುಖಂಡರು ನಿರಾಶ್ರಿತರನ್ನು ಭೇಟಿ ಮಾಡಿ ಅವರಿಗೆ ಒಗ್ಗಟ್ಟು ವ್ಯಕ್ತಪಡಿಸಿದರು.
ವಯನಾಡ್ ದುರಂತದ ಸಂತ್ರಸ್ತರನ್ನು ರಕ್ಷಿಸುವುದು ಮೊದಲ ಆದ್ಯತೆ ಎಂದು ಸರ್ವಪಕ್ಷ ಸಭೆಯ ನಂತರ ವಿಜಯನ್ ಹೇಳಿದರು. ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು, ಸೇನಾಪಡೆಗಳು ಮತ್ತು ಸ್ವಯಂಸೇವಾ ಸಂಸ್ಥೆಗಳು ಮತ್ತು ಸ್ಥಳೀಯ ಜನರ ಸಂಘಟಿತ ಪ್ರಯತ್ನದೊಂದಿಗೆ ರಕ್ಷಣಾ ಕಾರ್ಯಾಚರಣೆ ಮುಂದುವರಿಯುತ್ತದೆ ಎಂದು ಅವರು ಹೇಳಿದರು.