ಬೆಂಗಳೂರು: ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ, ಮುಡಾ ನಿವೇಶನ ಹಗರಣ ಹಾಗೂ ಪರಿಶಿಷ್ಟರ ಉಪಯೋಜನೆ ಹಣ ದುರ್ಬಳಕೆ ಮುಂದಿಟ್ಟುಕೊಂಡು ಬಿಜೆಪಿ ಪಾದಯಾತ್ರೆ ನಡೆಸಲು ತೀರ್ಮಾನಿಸಿದೆ. ಈ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಇಂದು ಪಕ್ಷದ ನಾಯಕರ ಸಭೆ ನಡೆಸಿ ಮಹತ್ವದ ಚರ್ಚೆ ನಡೆಸಿದರು. ಅಲ್ಲದೇ ಪಾದಯಾತ್ರೆಗೆ ಸಹಕಾರ ಪಡೆದುಕೊಂಡರು.
ಸಭೆ ಬಳಿಕ ಮಾತಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ , ಕೆಂಗೇರಿ ಬಳಿಯ ಕೆಂಪಮ್ಮ ದೇಗುಲ, ಗಣಪತಿ ದೇಗುಲದಲ್ಲಿ ಪೂಜೆ ಮಾಡಿ ಪಾದಯಾತ್ರೆ ಆರಂಭಿಸುತ್ತೇವೆ. ಆಗಸ್ಟ್ 3ರ ಶನಿವಾರ ಬೆಳಗ್ಗೆ 8.30ಕ್ಕೆ ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವರಾದ ಹೆಚ್ಡಿಕೆ, ಪ್ರಹ್ಲಾದ್ ಜೋಶಿಯವರಿಂದ ಪಾದಯಾತ್ರೆಗೆ ಚಾಲನೆ ಸಿಗಲಿದೆ. ಈವೇಳೆ ಬಿಜೆಪಿ ಜೆಡಿಎಸ್ನ ಎಲ್ಲ ಹಿರಿಯರು ಉಪಸ್ಥಿತರಿರಲಿದ್ದಾರೆ. ಆಗಸ್ಟ್ 10ರ ಶನಿವಾರ ಪಾದಯಾತ್ರೆಯ ಸಮಾರೋಪ ಇದ್ದು, ನಮ್ಮ ವರಿಷ್ಠರು ಪಾಲ್ಗೊಳ್ತಾರೆ ಎಂದು ತಿಳಿಸಿದರು.
ಇನ್ನು ಒಟ್ಟು ಏಳು ದಿನಗಳ ಕಾಲ ಪಾದಯಾತ್ರೆ ನಡೆಯಲಿದ್ದು, ನಿತ್ಯ 20 ಕಿಮೀ ನಡಿಗೆ ಇರಲಿದೆ. ಬೆಳಗ್ಗೆ 10 ಕಿಮೀ, ಊಟದ ನಂತರ 10 ಕಿಮೀ ಪಾದಯಾತ್ರೆ ಇರಲಿದೆ. 224 ವಿಧಾನಸಭೆ ಕ್ಷೇತ್ರಗಳಿಂದ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ನಿತ್ಯ 8-10 ಕ್ಷೇತ್ರಗಳ ಮುಖಂಡರು, ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಪಾದಯಾತ್ರೆಗೆ ಪಕ್ಷದಿಂದ ಪ್ರಮುಖರ ತಂಡ ರಚಿಸಲಾಗಿದೆ. ಪ್ರತೀ ಜಿಲ್ಲೆಯಿಂದ ಕನಿಷ್ಠ 200 ಜನ ಬರ್ತಾರೆ, ಏಳು ದಿನವೂ ಅವರು ಇರ್ತಾರೆ. ವಸತಿ ವ್ಯವಸ್ಥೆ, ಊಟೋಪಹಾರಕ್ಕೆ ತಂಡಗಳನ್ನು ರಚಿಸಲಾಗಿದೆ. ಈ ಪಾದಯಾತ್ರೆ ಯಶಸ್ವಿಗೊಳಿಸಲು ಬಿಜೆಪಿ ಜೆಡಿಎಸ್ ಮುಖಂಡರ ಸಮನ್ವಯ ತಂಡವನ್ನೂ ರಚಿಸ್ತೇವೆ ಅಂತ ಇದೇ ವೇಳೆ ವಿಜಯೇಂದ್ರ ತಿಳಿಸಿದರು.
ಇನ್ನು ಪಾದಯಾತ್ರೆಗೆ ಸರ್ಕಾರ ಅಧಿಕೃತ ಅನುಮತಿ ಕೊಡದ ಬಗ್ಗೆ ಪ್ರತಿಕ್ರಿಯೆ ಕೊಟ್ಟ ವಿಜಯೇಂದ್ರ, ಕೋವಿಡ್ ಸಂದರ್ಭದಲ್ಲಿ ಕಾಂಗ್ರೆಸ್ ಸಹ ಪಾದಯಾತ್ರೆ ಮಾಡಿತ್ತು. ನಮ್ಮ ಹೋರಾಟ ಹತ್ತಿಕ್ಕುವ ಶಕ್ತಿ, ಈ ಸರ್ಕಾರಕ್ಕೆ ಇಲ್ಲ. ಸರ್ಕಾರದ ವಿರುದ್ಧ ಜನ ಆಕ್ರೋಶ ಹೊರ ಹಾಕಿದ್ದಾರೆ. ನಮ್ಮ ಹೋರಾಟ ಹತ್ತಿಕ್ಕಿದರೆ ಪರಿಸ್ಥಿತಿ ಎಲ್ಲಿಗೆ ಹೋಗುತ್ತೋ ಗೊತ್ತಿಲ್ಲ ಎಂದು ಎಚ್ಚರಿಸಿದ್ದಾರೆ.