ಮೈಸೂರು : ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಪರಿಷತ್ ನಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಪ್ರಾಸ್ಟಿಟ್ಯೂಟ್ ಎಂದಿದ್ದು ಸತ್ಯ. ನಾನೇ ಆ ಪದವನ್ನ ಕೇಳಿಸಿಕೊಂಡು ಒಂದು ಕ್ಷಣ ಗಾಬರಿಯಾಗಿ ಬಿಟ್ಟೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಏನು ಇಂತಹ ಪದಗಳನ್ನು ಬಳಸುತ್ತಿದ್ದಾರಲ್ಲ ಅಂದು ಕೊಂಡೆ. ತಕ್ಷಣ ನಾನು ಲಕ್ಷ್ಮೀ ಹೆಬ್ಬಾಳ್ಕರ್ ಬಳಿಗೂ ಹೋದೆ. ಆಗ ಅವರು ಕೂಡ ನನಗೆ ಸಿ.ಟಿ ರವಿ ಬಳಸಿದ ಪದವನ್ನ ಹೇಳಿದರು. ಈಗ ಸಿ.ಟಿ ರವಿ ನಾನು ಆ ಪದವನ್ನ ಬಳಸಿಲ್ಲ ಎಂದು ಹೇಳುತ್ತಿದ್ದಾರೆ. ಸಿ.ಟಿ ರವಿ ಬಳಸಿದ್ದು ಫ್ರಸ್ಟೇರೇಟ್ ಎಂಬ ಪದ ಅಲ್ಲ ಅವರು ಬಳಸಿದ್ದು ಪ್ರಾಸ್ಟಿಟೂಟ್ ಅದಕ್ಕೆ ನಾನೇ ಸಾಕ್ಷಿ. ಈಗ ಸಿಂಪತಿ ಗಿಟ್ಟಿಸಿಕೊಳ್ಳಲು ಸಿ.ಟಿ ರವಿ ಡ್ರಾಮಾ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಬಿಜೆಪಿಯವರಿಗೆ ಮಾನ ಮರ್ಯಾದೆ ಏನು ಇಲ್ಲ. ಹೀಗಾಗಿ ಅವರು ಸಿ.ಟಿ ರವಿ ಪರ ನಿಂತಿದ್ದಾರೆ. ಸಿಟಿ ರವಿಯನ್ನು ಪೊಲೀಸರು ಎನ್ಕೌಂಟರ್ ಮಾಡಲು ಯತ್ನಿಸಿದರು, ಕೊಲೆ ಮಾಡುವ ಪ್ರಯತ್ನ ನಡೆದಿತ್ತು ಎಂಬುಂದೆಲ್ಲಾ ಶುದ್ಧ ಡ್ರಾಮಾ. ಬಿಜೆಪಿಯವರು ಈ ವಿಚಾರದಲ್ಲಿ ನೀಡುತ್ತಿರುವ ಹೇಳಿಕೆಗಳೆಲ್ಲ ಬರಿ ನಾಟಕ ಎಂದು ಹರಿಹಾಯ್ದರು.