ಬೆಂಗಳೂರು : ಬಿಡದಿ ಟೌನ್ಶಿಪ್ ಯೋಜನೆ ವಿಚಾರವಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಮತ್ತಷ್ಟು ವಾಗ್ದಾಳಿ ನಡೆಸಿದ್ದಾರೆ. ಯೋಜನೆಯಿಂದ ಸಾಮಾನ್ಯ ರೈತರ ಜಮೀನುಗಳು ಮಾತ್ರ ಒಳಗೊಂಡಿವೆ, ಆದರೆ ಕೆಲವರ ಜಮೀನುಗಳು ಹೊರಗಿವೆ ಎಂದು ಆರೋಪಿಸಿದರು.
ಬಿಡದಿ, ದೇವಗೆರೆ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಖರೀದಿ ಮಾಡಿರುವ ಜಮೀನುಗಳ ಪೈಕಿ ಒಂದು ಎಕರೆಯೂ ಟೌನ್ಶಿಪ್ ವ್ಯಾಪ್ತಿಗೆ ಬಾರದಂತೆ ನೋಡಿಕೊಳ್ಳಲಾಗಿದೆ. ಆದರೆ ರೈತರ ಜಮೀನುಗಳು ಮಾತ್ರ ಯೋಜನೆಗೆ ಒಳಪಟ್ಟಿವೆ. ಇದರ ಹಿಂದಿನ ಕಾರಣ ಏನು? ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.
ಟೌನ್ಶಿಪ್ ಪ್ರದೇಶದಲ್ಲೇ ಕುಟುಂಬದವರು 36 ಎಕರೆ ಜಮೀನು ಖರೀದಿ ಮಾಡಿಲ್ಲವೇ ಎಂದು ಪ್ರಶ್ನಿಸಿದ ಸಿಎಂ, ರೈತರು ಸಂಕಷ್ಟದ ಸಮಯದಲ್ಲಿ ತಮ್ಮ ಜಮೀನು ಮಾರಿಕೊಳ್ಳದಂತೆ ರೆಡ್ಜೋನ್ ಮಾಡಲಾಗಿತ್ತು ಎಂದು ಆರೋಪಿಸಿದರು. ಯಾವ ಜನರು ನಿಮ್ಮನ್ನು ಮುಖ್ಯಮಂತ್ರಿ, ಪ್ರಧಾನಮಂತ್ರಿ ಹಾಗೂ ಸಂಸದರನ್ನಾಗಿ ಮಾಡಿದರೋ, ಅವರಿಗೇ ಈ ರೀತಿ ಮಾಡುವುದು ಸರಿಯೇ?” ಎಂದು ಪ್ರಶ್ನಿಸಿದ ಅವರು, ನಾನು ರಾಜಕೀಯವಾಗಿ ನಿಮ್ಮ ಉತ್ತರಾಧಿಕಾರಿ ಅಲ್ಲ, ಆದರೆ ನೀವು ಆರಂಭಿಸಿದ ಅಭಿವೃದ್ಧಿ ಆಲೋಚನೆಯನ್ನು ಮುಂದುವರಿಸುತ್ತಿದ್ದೇನೆ ಎಂದರು.
ಕೈಗಾರಿಕಾ ಪ್ರದೇಶದ ವಿಚಾರದಲ್ಲೂ ಆರೋಪ : ಬಿಡದಿ ಟೌನ್ಶಿಪ್ಗೂ ಮುನ್ನ ಕೈಗಾರಿಕಾ ಪ್ರದೇಶ ನಿರ್ಮಾಣದ ಸಂದರ್ಭವನ್ನೂ ಪ್ರಸ್ತಾಪಿಸಿದ ಸಿಎಂ, ಕೆಐಎಡಿಬಿ ಮೂಲಕ ನಡೆದ ಭೂಸ್ವಾಧೀನದಲ್ಲಿ ಕೆಲವರ ಜಮೀನುಗಳು ಉಳಿದವು ಎಂದು ಆರೋಪಿಸಿದರು.
ಕೇತಗಾನಹಳ್ಳಿ, ಶಾನಮಂಗಲ ಹಾಗೂ ಹಾರೋಹಳ್ಳಿ ಭಾಗಗಳಲ್ಲಿ ಕೈಗಾರಿಕಾ ಪ್ರದೇಶ ನಿರ್ಮಾಣದ ವೇಳೆ ವಿವಿಧ ಹಂತಗಳಲ್ಲಿ ನೀಡಲಾದ ಪರಿಹಾರ ಮೊತ್ತವನ್ನು ಉಲ್ಲೇಖಿಸಿದ ಅವರು, ಕೊನೆಯ ಹಂತದಲ್ಲಿ ಪ್ರತಿ ಎಕರೆಗೆ ₹1 ಕೋಟಿ ವರೆಗೆ ಪರಿಹಾರ ನೀಡಲಾಗಿತ್ತು ಎಂದು ಹೇಳಿದರು.



