ನಂಜನಗೂಡು : ಜಿಲ್ಲೆಯಲ್ಲಿ ಹುಲಿಯ ಉಪಟಳ ಹೆಚ್ಚಾಗಿದ್ದು, ತಾಲ್ಲೂಕಿನ ಅರಣ್ಯದಂಚಿನ ಗ್ರಾಮದಲ್ಲಿ ದನ ಮೇಯಿಸುತ್ತಿದ್ದ ಮಹಿಳೆ ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿರುವ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. ತಿಂಗಳ ಅಂತರದಲ್ಲಿಯೇ ಜಿಲ್ಲೆಯೊಳಗೆ ನಾಲ್ವರು ಹುಲಿ ದಾಳಿಗೆ ಬಲಿಯಾದಂತಾಗಿದೆ. ನಂಜನಗೂಡು ತಾಲ್ಲೂಕು ಬಳ್ಳೂರು ಹುಂಡಿ ಗ್ರಾಮದ ವೆಂಕಟಯ್ಯ ಎಂಬವರ ಪತ್ನಿ ರತ್ನಮ್ಮ(೫೦) ಹುಲಿ ದಾಳಿಗೆ ತುತ್ತಾಗಿ ಸಾವನ್ನಪ್ಪಿದ ಮಹಿಳೆ.
ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಹೆಡಿಯಾಲ ಸಮೀಪವಿರುವ ಬಳ್ಳೂರುಹುಂಡಿ ಗ್ರಾಮಕ್ಕೆ ಹೊಂದಿಕೊಂಡಂತಿರುವ ಮಹದೇವ ನಗರ ಗ್ರಾಮದ ನರ್ಸರಿ ಸಮೀಪದ ಬಳಿ ಹಾಡಹಗಲೇ ದುರ್ಘಟನೆ ನಡೆದಿದೆ. ಹುಲಿ ರತ್ನಮ್ಮನನ್ನು ಸುಮಾರು ೩ ಕಿಮೀ ದೂರ ಎಳೆದುಕೊಂಡು ಹೋಗಿ ಅರೆಬರೆ ತಿಂದು ಬೀಸಾಡಿದೆ. ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರು ಸ್ಥಳಕ್ಕೆ ಅರಣ್ಯ ಇಲಾಖಲೆ ಸಿಬ್ಬಂದಿಗಳು ಸಕಾಲಕ್ಕೆ ಬರಲಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.ಕೊನೆಗೆ ಗ್ರಾಮಸ್ಥರೇ ರತ್ನಮ್ಮನನ್ನು ಹುಡುಕಾಟ ನಡೆಸಿ ಶವ ಪತ್ತೆ ಮಾಡಿದರು ಎನ್ನಲಾಗಿದೆ.
ರತ್ನಮ್ಮ ತಮ್ಮ ಜಮೀನಿನಲ್ಲಿ ಜಾನುವಾರುಗಳನ್ನು ಮೇಯಿಸಲು ಕುಳಿತಿದ್ದರು. ಈ ವೇಳೆ ಏಕಾಏಕಿ ದಾಳಿ ಮಾಡಿದ ಹುಲಿ ಆಕೆಯನ್ನು ಎಳೆದುಕೊಂಡು ಹೋಗಿದೆ. ಆಕೆ ಕೂಗಿಕೊಂಡಿದ್ದು ಹುಲಿ ದಾಳಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ಆಗಿಲ್ಲ. ಬಲವಾದ ಹೊಡೆತಕ್ಕೆ ಆಕೆಯ ಕುತ್ತಿಗೆ ಭಾಗಕ್ಕೆ ಬಲವಾದ ಏಟು ಬಿದ್ದಿದೆ. ನೆರೆಹೊರೆಯವರು ಕೂಗಿಕೊಂಡಾಗ ಎಳೆದುಕೊಂಡು ಹೋದ ಹುಲಿ ಸ್ವಲ್ಪ ದೂರದಲ್ಲಿಯೇ ದೇಹ ಬಿಟ್ಟು ಹೋಗಿದೆ.

ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ತಕ್ಷಣಕ್ಕೆ ಸ್ಥಳಕ್ಕೆ ಧಾವಿಸಿದ ಪರಮೇಶ್ವರ ಹಾಗೂ ಎ.ಟಿ. ನಾರಾಯಣ ಅವರು ಸಿಬ್ಬಂದಿಗಳೊಂದಿಗೆ ಹುಡುಕಾಟ ನಡೆಸಿದರು. ರತ್ನಮ್ಮ ದೇಹ ಅನತಿ ದೂರದಲ್ಲಿಯೇ ಪತ್ತೆಯಾಗಿದೆ. ಅರಣ್ಯಕ್ಕೆ ಸೇರಿದ ಪ್ರದೇಶದಲ್ಲಿಯೇ ದೇಹ ದೊರೆತಿದೆ. ದೇಹದ ಭಾಗವನ್ನು ಹುಲಿ ತಿಂದಿರುವುದು ಕಂಡು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಂದೇ ತಿಂಗಳಲ್ಲಿ ೪ ಬಲಿ: ಕೆಲ ದಿನಗಳ ಹಿಂದೆ ಇದೇ ಸ್ಥಳದಲ್ಲಿ ವೀರಭದ್ರ ಭೋವಿ ಎಂಬ ದನ ಗಾಹಿ ಮೇಲೆ ದಾಳಿ ಹುಲಿ ಮಾಡಿತ್ತು. ಅಲ್ಲದೇ ಇನ್ನೊಬ್ಬ ವ್ಯಕ್ತಿಯನ್ನು ಕೊಂದು ಹಾಕಿತ್ತು. ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಸೇರಿದ ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಬಾಲಕನೊಬ್ಬನನ್ನು ಹುಲಿ ಸಾಯಿಸಿದ್ದರೆ, ಹುಣಸೂರು ತಾಲ್ಲೂಕಿನ ಹನಗೋಡು ಬಳಿ ರೈತನನ್ನು ಸಾಯಿಸಿತ್ತು.