ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಸರ್ಕಾರದ ಸವಲತ್ತುಗಳು ಪಟ್ಟಣದ ಅರ್ಹ ಫಲಾನುಭವಿಗಳಿಗೆ ಮನೆ ಬಾಗಿಲಿಗೆ ತಲುಪಲಿ ಎಂಬ ಸದುದ್ದೇಶದಿಂದ ನಾನು ಶಾಸಕರ ನಡಿಗೆ ವಾರ್ಡ್ ಕಡೆಗೆ ಎಂಬ ಕಾರ್ಯಕ್ರಮ ನಡೆಸುವ ಮೂಲಕ ಮತದಾರರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೇನೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ೬ನೇ ವಾರ್ಡಿನ ವ್ಯಾಪ್ತಿಯ ಕಂಠೇನಹಳ್ಳಿ ಬಡಾವಣೆಯಲ್ಲಿ ಬುಧವಾರ ಬೆಳಿಗ್ಗೆ ಶಾಸಕರ ನಡಿಗೆ
ವಾರ್ಡ್ ಕಡೆಗೆ ಎಂಬ ವಿನೂತನ ಕಾರ್ಯಕ್ರಮ ಉದ್ಘಾಟಿಸಿ ಜನರ ಸಮಸ್ಯೆ ಆಲಿಸಿ ಮಾತನಾಡಿದ ಅವರು ಪ್ರತಿವಾರ ಇದನ್ನು ನಡೆಸಲಿದ್ದು ಅಧಿಕಾರಿಗಳು ಪ್ರತಿ ಮನೆಗೆ ನನ್ನೊಂದಿಗೆ ಬಂದು ಸಮಸ್ಯೆ ಆಲಿಸಿ ಸೂಕ್ತ ಪರಿಹಾರ ನೀಡಬೇಕು ಎಂದರು.
ಮುಂದೆ ಪ್ರತಿ ಬುಧವಾರ ನಿರಂತರವಾಗಿ ಈ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದ್ದು ನಾಲ್ಕು ದಿನಗಳ ಮುಂಚಿತವಾಗಿ ಆಯಾ ವಾರ್ಡಿನ ಜನರಿಗೆ ಮಾಹಿತಿ ನೀಡಲಿದ್ದು ಅವರುಗಳು ತಮ್ಮ ಸಾರ್ವಜನಿಕ
ದೂರು ಮತ್ತು ದುಮ್ಮಾನಗಳನ್ನು ಲಿಖಿತವಾಗಿ ನನಗೆ ನೀಡಿದರೆ ತ್ವರಿತವಾಗಿ ಪರಿಹಾರ ಕಂಡು ಹಿಡಿಯುವ ಭರವಸೆ ನೀಡಿದರು.
ಪಟ್ಟಣದ ನಾಲ್ಕು ಭಾಗದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಗುಂಪು ಮನೆ ಪಡೆದುಕೊಳ್ಳಲು ಹಣ ಪಾವತಿ ಮಾಡಿರುವವರಿಗೆ ತ್ವರಿತವಾಗಿ ಆಧ್ಯತೆಯ ಮೇರೆಗೆ ಮನೆಗಳನ್ನು ನಿರ್ಮಿಸಿ ವಿತರಿಸಲು ಕ್ರಮ
ಕೈಗೊಳ್ಳುವುದಾಗಿ ಶಾಸಕರು ಭರವಸೆ ನೀಡಿದರು.
ಪುರಸಭೆ ಅಧ್ಯಕ್ಷ ಶಿವುನಾಯಕ್ ಮಾತನಾಡಿ ನಮ್ಮ ಜನಪ್ರಿಯ ಶಾಸಕರಾದ ಡಿ.ರವಿಶಂಕರ್ ಅವರು ಇಂದಿನಿoದ ಪ್ರತಿ ಬುಧವಾರ ಶಾಸಕರ ನಡಿಗೆ ವಾರ್ಡ್ ಕಡೆಗೆ ಎಂಬ ಅಭಿಯಾನ ನಡೆಸುತ್ತಿದ್ದು ಇದರಿಂದ ಪಟ್ಟಣದ ಸಮಸ್ಯೆಗಳನ್ನು ಪರಿಹರಿಸಲು ಅನುಕೂಲವಾಗಲಿದ್ದು ಇದಕ್ಕಾಗಿ ಅವರನ್ನು ಪುರಸಭೆ ವತಿಯಿಂದ ಅಭಿನಂದಿಸುವುದಾಗಿ ತಿಳಿಸಿದರು.
ಮುಂದಿನ ದಿನಗಳಲ್ಲಿ ನಾವು ಅವರ ಮಾರ್ಗದರ್ಶನದಲ್ಲಿ ಅಭಿವೃದ್ದಿ ಕೆಲಸಗಳನ್ನು ಮಾಡುವ ಮೂಲಕ ಸರ್ಕಾರದ ಜನಪರ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ಬದ್ದವಾಗಿದ್ದು ಇದಕ್ಕೆ ಜನತೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಪುರಸಭೆ ಉಪಾಧ್ಯಕ್ಷ ವಸಂತಮ್ಮಕೃಷ್ಣೇಗೌಡ, ಸದಸ್ಯರಾದ ಕೋಳಿಪ್ರಕಾಶ್, ಶಂಕರ್ಸ್ವಾಮಿ, ಮಾಜಿ ಅಧ್ಯಕ್ಷ
ನರಸಿಂಹರಾಜು, ಮಾಜಿ ಸದಸ್ಯರಾದ ಕೆ.ವಿನಯ್, ಸೈಯದ್ಅಸ್ಲಾಂ, ಕೆ.ಎಲ್.ರಾಜೇಶ್, ನಗರ ಕಾಂಗ್ರೆಸ್
ಅಧ್ಯಕ್ಷ ಎಂ.ಜೆ.ರಮೇಶ್, ವಕ್ತಾರ ಸೈಯದ್ಜಾಬೀರ್, ಕಾಂಗ್ರೆಸ್ ಮುಖಂಡರಾದ ಮಾದೇಶ, ಹೊಯ್ಸಳ, ಎಸ್.ಮಹದೇವ್, ಮಧುಸೂದನ್, ಮುಖ್ಯಾಧಿಕಾರಿ ವಿ.ಬಿ.ವೆಂಕಟೇಶ್, ಕಂದಾಯಾಧಿಕಾರಿ ರಮೇಶ್ ಮತ್ತಿತರರು ಇದ್ದರು.