ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ಮತ್ತು ಯೆನೆಪೋಯ ಒಕ್ಕೂಟದ ಆರೋಗ್ಯ ವಿಜ್ಞಾನ ಸಂಸ್ಥೆ ಮಂಗಳೂರು ಇವರ ಸಹಯೋಗದಲ್ಲಿ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ವಿವಿಧ ವಿಭಾಗಗಳ ಸಿಬ್ಬಂದಿಗಳಿಗೆ ಮೂಲಭೂತ ಜೀವನ ಕೌಶಲ್ಯ ಮತ್ತು ಪ್ರಥಮ ಚಿಕಿತ್ಸೆಯ ಬಗ್ಗೆ ಕಾರ್ಯಾಗಾರವನ್ನು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ.ಕೆ.ವಿ.ರಾವ್ ಮಾತನಾಡಿ, ಅಪಘಾತಗಳು ಮತ್ತು ಆಕಸ್ಮಿಕ ಸಮಸ್ಯೆಗಳು ಯಾವುದೇ ಮುನ್ಸೂಚನೆ ಇಲ್ಲದೆ ಎದುರಾಗಬಹುದು. ಇಂತಹ ಸಂದರ್ಭಗಳಲ್ಲಿ ಪ್ರಥಮ ಚಿಕಿತ್ಸೆ ಮತ್ತು ಜೀವನ ಕೌಶಲ್ಯಗಳ ಅರಿವು ಅಮೂಲ್ಯ ಜೀವಗಳನ್ನು ಉಳಿಸಬಲ್ಲದು. ಈ ಕಾರ್ಯಾಗಾರದಲ್ಲಿ ಭಾಗಿಯಾಗುವುದರಿಂದ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳುವ ಮುಂಜಾಗ್ರತಾ ಕ್ರಮ ವಹಿಸಿಕೊಳ್ಳುವುದರ ಜೊತೆಗೆ ಪ್ರಕೃತಿ-ಪ್ರಾಣಿಸಂಕುಲಗಳೊಂದಿಗೆ ಅನ್ಯೋನ್ಯವಾಗಿ ಇರುವುದಕ್ಕೆ ನಾಂದಿಯಾಗಬಹುದೆಂದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಯೆನೆಪೋಯ ಆರೋಗ್ಯ ವಿಜ್ಞಾನ ಸಂಸ್ಥೆಯ ಟ್ರಾಮಾ ಕೇರ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ದೆಬಂತಿಯಾ ಮಾತನಾಡಿ, ಗಾಯಗೊಂಡ ವ್ಯಕ್ತಿಗೆ ಪ್ರಾಥಮಿಕ ಹಂತದಲ್ಲೇ ನೀಡಬೇಕಾದ ಚಿಕಿತ್ಸೆ, ರಕ್ತಸ್ರಾವವನ್ನು ನಿಯಂತ್ರಿಸುವ ವಿಧಾನಗಳು, ಮೂಳೆ ಮುರಿತ, ತಲೆಗೆ ಗಾಯ, ಹಾವು ಕಡಿತ, ಸುಟ್ಟ ಗಾಯಗಳು ಹಾಗೂ ಅಚೇತನ ಸ್ಥಿತಿಯಲ್ಲಿರುವವರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ವಿಧಾನಗಳ ಬಗ್ಗೆ ವಿವರಿಸಿದರು.
ಹೃದಯರಕ್ತನಾಳದ ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ರೇಯಾ ಮಾತನಾಡಿ, ಹೃದಯಾಘಾತ, ರಕ್ತಸ್ರಾವ, ಉಸಿರಾಟ ತೊಂದರೆ ಮುಂತಾದ ಸಂದರ್ಭಗಳಲ್ಲಿ ಅನುಸರಿಸಬೇಕಾದ ಮೂಲಭೂತ ಕ್ರಮಗಳ ಕುರಿತು ವಿವರವಾದ ಮಾಹಿತಿ ನೀಡಿದರು. ಜೊತೆಗೆ ಸಿಬ್ಬಂದಿಗಳಿಗೆ ಪ್ರಾಯೋಗಿಕ ಪ್ರಾತ್ಯಕ್ಷಿಕೆ ನೀಡುವ ಮೂಲಕ ಪ್ರಥಮ ಚಿಕಿತ್ಸೆಯ ಮಹತ್ವವನ್ನು ವಿವರಿಸಿದರು.
ಯೆನೆಪೋಯ ಒಕ್ಕೂಟದ ಆರೋಗ್ಯ ವಿಜ್ಞಾನ ಸಂಸ್ಥೆ ಕರೋಲಿನಾ, ಅಕಿಲ್ ಫ್ರಾನ್ಸಿಸ್ ಮತ್ತು ಉವೈಸ್ ಅವರು ಪ್ರಾಯೋಗಿಕ ಪ್ರಾತ್ಯಕ್ಷಿಕೆಗೆ ಸಹಕರಿಸಿದರು.
ಕಾರ್ಯಕ್ರಮದಲ್ಲಿ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಅರುಣ ಕುಮಾರ್ ಶೆಟ್ಟಿ ಎನ್., ಸಂಸ್ಕøತಿ ಗ್ರಾಮ, ಮೃಗಾಲಯ, ಲೇಕ್ ಗಾರ್ಡನ್ ತಾರಾಲಯ, ವಿಜ್ಞಾನಕೇಂದ್ರ ಮತ್ತು ಭದ್ರತೆ ವಿಭಾಗಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.
ಕಮ್ಯುನಿಟಿ ಮೊಬಿಲೈಸರ್ ಶಿವರಾಮ್ ಸ್ವಾಗತಿಸಿದರು. ಕೇಂದ್ರದ ಕ್ಯುರೇಟರ್ ಜಗನ್ನಾಥ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ವರದಿ: ಶಂಶೀರ್ ಬುಡೋಳಿ



