ಯಳಂದೂರು: ವಿಶ್ವ ಸೈಕಲ್ ದಿನಾಚರಣೆ ನಿಮಿತ್ತ ಮಂಗಳವಾರ ಪಟ್ಟಣದ ಎಸ್ಡಿವಿಎಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಪಟ್ಟಣ ಪ್ರಮುಖ ಬೀದಿಗಳಲ್ಲಿ ಸೈಕಲ್ನಲ್ಲಿ ತೆರಳಿ ಜಾಗೃತಿ ಮೂಡಿಸಿದರು.
ಶಾಲೆಯಿಂದ ಸೈಕಲ್ನಲ್ಲಿ ಶಿಕ್ಷಕರೊಂದಿಗೆ ಸಾಲಾಗಿ ತೆರಳಿದ ವಿದ್ಯಾರ್ಥಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪಟ್ಟಣದ ಬಸ್ ನಿಲ್ದಾಣದ ಬಳಿ ನಿಂತು ಧ್ವನಿವರ್ಧಕದ ಮೂಲಕ ಸಾರ್ವಜನಿಕರಲ್ಲಿ ಸೈಕಲ್ ತುಳಿಯುವುದರಿಂದ ಆಗುವ ಪ್ರಯೋಜನಗ ಬಗ್ಗೆ ಘೋಷಣೆಗಳನ್ನು ಕೂಗಿ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಕನ್ನಡ ಭಾಷಾ ಶಿಕ್ಷಕ ಗುಂಬಳ್ಳಿ ಬಸವರಾಜು ಮಾತನಾಡಿ, ಸೈಕಲ್ ಪರಿಸರ ಸ್ನೇಹಿ ವಾಹನವಾಗಿದೆ. ಇದು ಯಾವುದೇ ಇಂಧನ ಬೇಡದ, ಹೊಗೆಯನ್ನು ಬಿಡದ ವಾಹನವಾಗಿದೆ. ಸೈಕಲ್ ತುಳಿಯುವುದು ಉತ್ತಮ ವ್ಯಾಯಾಮವಾಗಿದೆ. ಇದರಿಂದ ಕಾಲಿನ ಸ್ನಾಯುಗಳು ಸದೃಢಗೊಳ್ಳುತ್ತದೆ.
ದೇಹದಲ್ಲಿರುವ ಅಧಿಕ ಕೊಬ್ಬಿನಾಂಶವು ಕರಗುತ್ತದೆ. ಹೃದಯದ ಆರೋಗ್ಯಕ್ಕೂ ಇದು ಸಹಕಾರಿಯಾಗಿದೆ. ಆದರೆ ನಾವು ಇಂದು ಸಣ್ಣ ಕೆಲಸಗಳಿಗೂ ದ್ವಿಚಕ್ರ ವಾಹನಗಳನ್ನು ಬಳಸುತ್ತೇವೆ. ಅಂತರ ಕಡಿಮೆ ಬೇಡುವ ಕಡೆಗೆ ನಾವು ಸೈಕಲ್ ಬಳಸಿದ್ದಲ್ಲಿ ಪರಿಸರ ಮಾಲಿನ್ಯವನ್ನು ತಡೆಗಟ್ಟಬಹುದು. ಇದರಿಂದ ನಮ್ಮ ಪರಿಸರ ಶುದ್ಧವಾಗುವ ಜೊತೆಗೆ ದೇಹಕ್ಕೆ ವ್ಯಾಯಾಮವೂ ಲಭಿಸುತ್ತದೆ. ಹಾಗಾಗಿ ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯೂ ಸೈಕಲ್ ಸವಾರಿಯನ್ನು ಮಾಡಬೇಕು, ಹೆಚ್ಚು ಹೆಚ್ಚು ಸೈಕಲ್ಗಳನ್ನು ಬಳಸುವಂತಾಗಬೇಕು ಎಂದು ಸಲಹೆನೀಡಿದರು.
ಇದಕ್ಕೂ ಮುಂಚೆ ಈ ಜಾಥಕ್ಕೆ ವಿದ್ಯಾಸಂಸ್ಥೆಯ ಅಧ್ಯಕ್ಷ ವಿ. ಮಲ್ಲಿಕಾರ್ಜುನಸ್ವಾಮಿ ಚಾಲನೆ ನೀಡಿದರು. ಶಿಕ್ಷಕರಾದ ದೈಹಿಕ ಶಿಕ್ಷಕರಾದ ಮಹಾದೇವ, ಬಂಗಾರು ಸೇರಿದಂತೆ ಅನೇಕರು ಇದ್ದರು.