ಯಳಂದೂರು: ಪಟ್ಟಣವೂ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ಶಾಲೆಗಳಲ್ಲಿ ಬುಧವಾರ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಇದಕ್ಕಾಗಿ ಒಂದು ವಾರದಿಂದಲೂ ಮಕ್ಕಳಿಗೆ ಇದರ ಬಗ್ಗೆ ತಾಲೀಮು ನೀಡಲಾಗಿತ್ತು. ಸುಲಭ ಆಸನಗಳನ್ನು ಮಕ್ಕಳಿಂದ ಮಾಡಿಸುವ ಮೂಲಕ ಯೋಗದ ಮಹತ್ವದ ಬಗ್ಗೆ ಮಾಹಿತಿ ನೀಡಲಾಯಿತು.
ಆರೋಗ್ಯಕರ ಜೀವನಕ್ಕೆ ಯೋಗವೇ ಮದ್ದು: ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ ಆಯೋಜನೆ ಮಾಡಲಾಗಿದ್ದ ಯೋಗ ದಿನಾಚರಣೆಯಲ್ಲಿ ಉಪ ಪ್ರಾಂಶುಪಾಲ ನಂಜುAಡಯ್ಯ ಮಾತನಾಡಿ, ಮನುಷ್ಯ ಇಂದು ಒತ್ತಡದ ಜೀವನ ನಡೆಸುತ್ತಿದ್ದಾನೆ. ಪ್ರತಿ ವಿಷಯದಲ್ಲೂ ನೆಮ್ಮದಿಯನ್ನು ಹುಡುಕುವ ಧಾವಂತದಲ್ಲಿದ್ದಾನೆ. ಇದರಿಂದ ಆರೋಗ್ಯ ಹಾಳಾಗುತ್ತಿದೆ. ಮನುಷ್ಯನ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸ್ವಸ್ಥವಾಗಿಟ್ಟುಕೊಳ್ಳಲು ಯೋಗ ಪರಿಣಾಮಕಾರಿ ಚಿಕಿತ್ಸೆಯಾಗಿದೆ. ಇದು ಸಂಪೂರ್ಣ ಉಚಿತವಾಗಿ ಲಭಿಸುವ ಔಷಧವಾಗಿದೆ. ಪ್ರತಿನಿತ್ಯ ಚಾಚುತಪ್ಪದೆ ಯೋಗವನ್ನು ಮಾಡಿದ್ದೆ ಆದಲ್ಲಿ ಅನೇಕ ಕಾಯಿಲೆಗಳನ್ನು ವಾಸಿ ಮಾಡುವುದಲ್ಲದೆ, ಒತ್ತಡ ರಹಿತ ಜೀವನಕ್ಕೆ ಯೋಗ ಮಹತ್ವದ್ದಾಗಿದೆ ಎಂದರು.
ದೈಹಿಕ ಆರೋಗ್ಯ ಹಾಗೂ ಮನಸ್ಸಿನ ಪ್ರಫುಲ್ಲತೆಗೆ ಯೋಗವೇ ಮದ್ದಾಗಿದೆ. ಹಲವು ರಾಷ್ಟçಗಳು ಇದನ್ನು ಸ್ವೀಕರಿಸುವ ಮೂಲಕ ಇದರ ಮಹತ್ವಕ್ಕೆ ಮತ್ತಷ್ಟು ಮೆರಗು ನೀಡಿದ್ದಾರೆ. ಹಾಗಾಗಿ ಪ್ರತಿಯೊಬ್ಬರೂ ಇದರ ಉಪಯೋಗ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ತಾಲೂಕಿನ ಗುಂಬಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವೀರಭದ್ರಸ್ವಾಮಿ ಮಾತನಾಡಿ, ಯೋಗಕ್ಕೆ ಇಡೀ ವಿಶ್ವವೇ ಮನಸೋತಿದೆ. ಸಾವಿರಾರು ವರ್ಷಗಳ ಯೋಗದಿಂದ ಸ್ವಸ್ಥ ಜೀವನ ನಡೆಸಬಹುದು ಎಂಬುದು ಇಂದು ಇಡೀ ವಿಶ್ವವೇ ಮನಗಂಡಿದೆ. ಯೋಗ ಭಾರತ ವಿಶ್ವಕ್ಕೆ ನೀಡಿದ ಅತ್ಯಮೂಲ್ಯ ಕೊಡುಗೆಯಾಗಿದೆ. ಇದನ್ನು ಪ್ರತಿಯೊಬ್ಬರೂ ದಿನನಿತ್ಯ ಮಾಡುವ ಮೂಲಕ ಆರೋಗ್ಯಕರ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.
ಪಟ್ಟಣ ಹಾಗೂ ತಾಲೂಕಿನ ಸರ್ಕಾರಿ ಹಾಗೂ ಖಾಸಗಿ ಶಾಲೆಗಳೂ ಸೇರಿದಂತೆ ವಿವಿಧೆಡೆ ಯೋಗ ದಿನವನ್ನು ಆಚರಣೆ ಮಾಡಲಾಯಿತು. ಯೋಗ ದಿನದ ನಿಮಿತ್ತ ಸರ್ಕಾರಿ ಆದೇಶದಂತೆ ಶಾಲೆಗಳಲ್ಲಿ ಬೆಳಗಿನ ತರಗತಿಗಳನ್ನು ಮಾತ್ರ ನಡೆಸಲಾಯಿತು.