ವಿಜಯಪುರ : ರಾಜಕಾರಣ ಹೇಗಿದೆ ಎಂದರೆ, ಶಕ್ತಿ ಪ್ರದರ್ಶನ ಇಂದು ಅನಿವಾರ್ಯವಾಗಿದೆ. ಅದನ್ನು ಮಾಡದಿದ್ದರೆ ನಾಯಕತ್ವವನ್ನು ಗುರುತಿಸುವುದು ಸಾಧ್ಯವಾಗುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಶಕ್ತಿ ಪ್ರದರ್ಶನ ಮಾಡಲು ಅಧಿಕಾರವಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರಿಗೆ, ಸಿದ್ದರಾಮಯ್ಯ ಮತ್ತೆ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರಲ್ಲ ಎಂಬ ಪ್ರಶ್ನೆ ಎದುರಾಯಿತು. ಇದಕ್ಕೆ ಉತ್ತರಿಸಿದ ಅವರು ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದರು.
ಡಿಕೆ ಶಿವಕುಮಾರ್ ಅವರಿಗೂ ಶಕ್ತಿ ಇದ್ದರೆ ಪ್ರದರ್ಶಿಸಲಿ. ಉತ್ತರ ಕರ್ನಾಟಕದಲ್ಲಿ ಡಿಕೆಶಿ ಶಕ್ತಿ ಪ್ರದರ್ಶನ ಮಾಡಲಿ ನೋಡೋಣ ಎಂದು ಯತ್ನಾಳ್ ಸವಾಲೆಸೆದರು. ಅಲ್ಲದೆ, ವಿಜಯಪುರಕ್ಕೆ ಬಂದು ಅವಮಾನ ಮಾಡಿಸಿಕೊಂಡು ಹೋಗಿದ್ದಾರೆ ಪುಣ್ಯಾತ್ಮ ಎಂದು ವ್ಯಂಗ್ಯವಾಡಿದರು.



