ಶಿಡ್ಲಘಟ್ಟ : ರಾಷ್ಟ್ರಕವಿ ಕುವೆಂಪು ಅವರ ಸರ್ವರಿಗೂ ಸಮಬಾಳು, ಸಮಪಾಲು ಪರಿಕಲ್ಪನೆಯ ಸಮಾನತೆ ಮತ್ತು ನ್ಯಾಯದೊಂದಿಗೆ ಸಮಸಮಾಜದ ನಿರ್ಮಾಣಕ್ಕೆ ಯುವ ಜನತೆ ಪಣತೊಡಬೇಕೆಂದು ನಟ ಸಾಮಾಜಿಕ ಹೋರಾಟಗಾರ ಚೇತನ್ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಮಾನತೆಯ ಕರ್ನಾಟಕ ನಿರ್ಮಾಣ ಭವಿಷ್ಯದ ಕುರಿತು ಚರ್ಚಾ ಕಾರ್ಯಕ್ರಮದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳ ಪದಾಧಿಕಾರಿ ಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು ದೇಶದಲ್ಲಿ ಭೀಮರಾವ್ ಅಂಬೇಡ್ಕರ್ ಚಿಂತನೆಯ ಸಮಸಮಾಜದ ನಿರ್ಮಾಣ ಆಗಬೇಕೆನ್ನುವ ದಿಶೆಯಲ್ಲಿ ನಾನು ಕರ್ನಾಟಕ ರಾಜ್ಯಾದ್ಯಂತ ಪ್ರವಾಸ ಹಮ್ಮಿಕೊಂಡಿದ್ದು, ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದು ಇದರ ಭಾಗವಾಗಿ ಶಿಡ್ಲಘಟ್ಟಕ್ಕೆ ಬಂದಿದ್ದೇನೆ ಎಂದು ತಿಳಿಸಿದ್ದಾರೆ.
ಈ ವೇಳೆ ಪ್ರಸ್ತುತ ದೇಶದ ರಾಜಕೀಯ ಕಲುಷಿತಗೊಂಡಿದೆ. ಉತ್ತಮ ಸಮಾಜ ನಿರ್ಮಾಣಕ್ಕೆ ನಾವೆಲ್ಲಾ ಪಣ ತೊಡಬೇಕಿದೆ ಸಮಾನತೆ ವಿಚಾರದಲ್ಲಿ ಆಗಿರೋ ಅನ್ಯಾಯ ಸರಿಪಡಿಸಿ ಮುಂದಿನ ಪೀಳಿಗೆಗೆ ಆಗದಂತೆ ಎಚ್ಚರವಹಿಸಬೇಕಿದೆ ಹಾಗೂ ಸಂವಿಧಾನದ ಆದರ್ಶಗಳನ್ನು ಎತ್ತಿಹಿಡಿಯಬೇಕಾದರೆ ಬ್ರಾಹ್ಮಣ್ಯ ವ್ಯವಸ್ಥೆ, ಬಂಡವಾಳ ಶಾಹಿ ವ್ಯವಸ್ಥೆ ಹಾಗೂ ಆರ್ಥಿಕ ಅಸಮಾನತೆಗಳಿಗೆ ಕಡಿವಾಣ ಹಾಕಿ, ಸಮಾಜದ ಎಲ್ಲಾ ವರ್ಗಗಳಿಗೆ ಅವಕಾಶಗಳು ಮುಕ್ತವಾಗಿ ದೊರೆಯುವಂತೆ ಮಾಡಬೇಕಾಗಿದೆ ಎಂದು ತಿಳಿಸಿದರು.
ಅಲ್ಲದೇ ಒಳ್ಳೆ ಕೆಲಸಗಳನ್ನು ಮಾಡಲು ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಉತ್ತಮ ಸಮಾಜವನ್ನು ಕಟ್ಟಲು ಹೋರಾಟವೇ ಮುಖ್ಯ. ಸಮ ಸಮಾಜ ನಿರ್ಮಾಣಕ್ಕೆ ಜನರ ಬೆಂಬಲ ಬೇಕು. ನಾವು ಬೆಳೆಯುವುದಲ್ಲದೆ ನಮ್ಮೊಡನೆ ಜನರು ಬದಲಾಗಬೇಕು ಸಮ ಸಮಾಜ ನಿರ್ಮಾಣವಾಗಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಧ್ಯಕ್ಷ ಬಾಬು, ಜಿಲ್ಲಾಧ್ಯಕ್ಷ ಕಾಚಹಳ್ಳಿ ಶ್ರೀನಿವಾಸ್, ಅಣ್ಣೆಪ್ಪ, ನರಸಿಂಹರೆಡ್ಡಿ, ಸುರೇಶ್, ರಾಮಾಂಜಿ, ವರದರಾಜ್, ರವಿ, ಮುನಿಯಪ್ಪ, ಸುರೇಶ್ ಭಗತ್, ವಕೀಲ ಅಜಯ್ ಕುಮಾರ್ ಬುಜ್ಜಿ ನಾಯಕ್ ಹಾಗೂ ಇನ್ನೂ ಮುಂತಾದವರು ಪಾಲ್ಗೊಡಿದ್ದರು.



