ಕಲಬುರಗಿ : ಬೌದ್ಧ ಧರ್ಮದ ಕುರುಹುಗಳ, ದೇವಾಲಯಗಳ ರಕ್ಷಣೆಗೆ ಉತ್ಖನನ ನಡೆಸುವಂತೆ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.
ಸಂಸತ್ತಿನಲ್ಲಿ ಈ ಕುರಿತು ವಿಷಯ ಪ್ರಸ್ತಾಪಿಸಿದ ಅವರು, ಕಲಬುರಗಿ ಜಿಲ್ಲೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸರ್ವೆ ಹಾಗೂ ಉತ್ಖನನ ನಡೆಸಿ ಬೌದ್ಧ ಧರ್ಮ ದೇವಾಲಯಗಳ ಮತ್ತು ಕುರುಹುಗಳನ್ನು ರಕ್ಷಣೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಅಲ್ಲದೆ ಕೃಷ್ಣಾ ಹಾಗೂ ಭೀಮಾ ನದಿ ತೀರದಲ್ಲಿ ಅದರಲ್ಲೂ ವಿಶೇಷವಾಗಿ ಕಲಬುರಗಿ ಜಿಲ್ಲೆಯಲ್ಲಿ ಬೌದ್ಧ ಧರ್ಮದ ಕುರುಹುಗಳು ಇದ್ದು, ಸರ್ಕಾರ ಉತ್ಖನನ ನಡೆಸಿ ಅವುಗಳನ್ನು ರಕ್ಷಿಸುವಂತೆ ಈಗಾಗಲೇ ಮೂರು, ನಾಲ್ಕು ಬಾರಿ ಪತ್ರ ಬರೆದಿದ್ದೇನೆ. ಆದರೂ ರಕ್ಷಿಸುವ ಕೆಲಸವಾಗಿಲ್ಲ ಎಂದು ರಾಜ್ಯಸಭೆ ಅಧ್ಯಕ್ಷರಾದ ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಅವರ ಗಮನಕ್ಕೆ ತಂದರು.
ಅಮರಾವತಿ ರಾಜನಿಂದ ಆ ನಂತರ ನಾಗಾರ್ಜುನ ಆಚಾರ್ಯರವರೆಗೆ ಕಲಬುರಗಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಬೌದ್ದ ಧರ್ಮ ವಿಸ್ತಾರಗೊಂಡ ಇತಿಹಾಸವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿದ ಖರ್ಗೆ ಅವರು ಬೌದ್ಧ ಧರ್ಮದ ಕುರುಹುಗಳನ್ನು ಪತ್ತೆ ಹಚ್ಚುವ ಸಲುವಾಗಿ ಹಾಗೂ ಬೌದ್ಧ ಧರ್ಮದ ದೇಗುಲ ರಕ್ಷಿಸುವ ಸಲುವಾಗಿ ಉತ್ಖನನದ ಅಗತ್ಯೆತೆಯನ್ನು ಒತ್ತಿ ಹೇಳಿ, ಕೂಡಲೇ ಕೇಂದ್ರ ಸರ್ಕಾರ ಸಚಿವರು ಅಗತ್ಯ ಕ್ರಮವಹಿಸುವಂತೆ ಕೋರಿದರು.



