ಬೆಂಗಳೂರು : ಡಿಸಿಎಂ ಡಿಕೆ ಶಿವಕುಮಾರ್, ಸಿಎಂ ಸಿದ್ದರಾಮಯ್ಯ ಬಳಿಕ ಇದೀಗ ಕಾಂಗ್ರೆಸ್ ಶಾಸಕರೇ ಡಿನ್ನರ್ ಮೀಟಿಂಗ್ ಮಾಡಿದ್ದಾರೆ. ಮೊದಲ ಬಾರಿ ಗೆದ್ದ 30ಕ್ಕೂ ಹೆಚ್ಚು ಶಾಸಕರು ನಗರದ ಖಾಸಗಿ ಹೋಟೆಲಿನಲ್ಲಿ ಡಿನ್ನರ್ ಸಭೆ ನಡೆಸಿದ್ದು, ಮೊದಲ ಬಾರಿ ಗೆದ್ದ ಶಾಸಕರಿಗೆ 4-5 ಹಿರಿಯ ಶಾಸಕರ ಸಾಥ್ ನೀಡಿದ್ದಾರೆ.
ಸಂಪುಟ ಪುನಾರಚನೆ ನಡೆದರೆ ತಮ್ಮನ್ನು ಪರಿಗಣಿಸುವಂತೆ ಈ ಹಿಂದೆ ಹೊಸದಾಗಿ ಆಯ್ಕೆಯಾದ ಶಾಸಕರು ಬೇಡಿಕೆ ಇಟ್ಟಿದ್ದರು. ಅದರಂತೆ ಇದೀಗ ಸಿಎಂ ಬದಲಾವಣೆ, ಸಂಪುಟ ಪುನಾರಚನೆಯ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಕೈ ಶಾಸಕರು ಸಭೆ ನಡೆಸಿರುವುದು ಕುತೂಹಲ ಮೂಡಿಸಿದೆ.
ಈ ಹಿಂದೆ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಪಟ್ಟವನ್ನು ಅಲಂಕರಿಸಿ 6 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಶಾಸಕರಿಗೆ ಡಿನ್ನರ್ ಕೊಟ್ಟಿದ್ದರು. ಬಳಿಕ ಸಿಎಂ ಸಿದ್ದರಾಮಯ್ಯನವರು ಮೊನ್ನೆ(ಮಾ.16 ರಂದು) 14 ಮಂದಿ ಶಾಸಕರ ಜೊತೆ ತಮ್ಮ ಕಾವೇರಿ ನಿವಾಸದಲ್ಲಿ ಡಿನ್ನರ್ ಸಭೆ ನಡೆಸಿದ್ದರು.
ಅಚ್ಚರಿಯೆಂದರೆ, ಈ ಸಭೆಯಲ್ಲಿ ಸಿಎಂ ಮತ್ತು ಡಿಸಿಎಂ ಎರಡೂ ಬಣದ ಶಾಸಕರಿದ್ದರು. ಸಭೆಯಲ್ಲಿ ಶಾಸಕರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಒತ್ತಡ ಹೇರುವ ಚರ್ಚೆ ನಡೆದಿದ್ದು, ಈ ಕುರಿತು ಸಹಿ ಮಾಡಿದ ಪತ್ರವನ್ನು ಈಗಾಗಲೇ ಹೈಕಮಾಂಡ್ಗೆ ಕಳುಹಿಸಲಾಗಿದೆ.
ಸಿಎಂ ಮತ್ತು ಡಿಸಿಎಂ ಎರಡೂ ಬಣಗಳ ಶಾಸಕರು ಈ ಸಭೆಯಲ್ಲಿ ಹಾಜರಾಗಿದ್ದರೂ ಡಿ.ಕೆ.ಶಿವಕುಮಾರ್ ಬೆಂಬಲಿತ ಶಾಸಕರ ಸಂಖ್ಯೆ ಹೆಚ್ಚಾಗಿತ್ತು. ನಾಯಕತ್ವ ಬದಲಾವಣೆಯ ವಿಷಯದಲ್ಲಿಯೂ ಹೈಕಮಾಂಡ್ ಮಧ್ಯಪ್ರವೇಶಿಸಿ ತೀರ್ಮಾನ ತೆಗೆದುಕೊಳ್ಳುವಂತೆ ಒತ್ತಡ ಹೇರಬೇಕು ಎಂದೂ ಡಿಕೆಶಿ ಬೆಂಬಲಿಗ ಶಾಸಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಕಳೆದ ವಾರ ಹಿರಿಯ ಶಾಸಕರ ಸಭೆ ನಡೆದಿತ್ತು.



