ಚಾಮರಾಜನಗರ : ಪ್ರಾಣಿ-ಪಕ್ಷಿಗಳ ಉಳಿವಿಗಾಗಿ ಉತ್ತಮ ಪರಿಸರವನ್ನು ನಿರ್ಮಿಸುವುದು ಮಾನವನ ಆಧ್ಯ ಕರ್ತವ್ಯವಾಗಬೇಕು. ಮನುಷ್ಯನು ಆಧುನಿಕ ಜೀವನದಲ್ಲಿ ಪ್ರಾಣಿ-ಪಕ್ಷಿಗಳು ಮತ್ತು ಪರಿಸರದ ಬಗ್ಗೆ ನಿರ್ಲಕ್ಷ ತೋರುತ್ತಿರುವುದರಿಂದ ಮುಂದೆ ಭಾರಿ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಸಂಸ್ಕೃತಿ ಚಿಂತಕ ಹಾಗೂ ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಜೈ ಹಿಂದ್ ಪ್ರತಿಷ್ಠಾನ ಹಾಗೂ ಋಗ್ವೇದಿ ಯೂತ್ ಕ್ಲಬ್ ಹಮ್ಮಿಕೊಂಡಿದ್ದ ವಿಶ್ವ ಗುಬ್ಬಚ್ಚಿ ದಿನ ಅಂಗವಾಗಿ ಮಾತನಾಡುತ್ತಾ ಮಾರ್ಚ್ 20ರಂದು ವಿಶ್ವಗುಬ್ಬಚ್ಚಿ ದಿನವಾಗಿ ಜಗತ್ತಿನ ಎಲ್ಲಕಡೆ ಆಚರಿಸಲಾಗುತ್ತಿದೆ. ಗುಬ್ಬಚ್ಚಿ ಒಂದು ವಿಶಿಷ್ಟ ಪಕ್ಷಿಯಾಗಿದ್ದು ಪರಿಸರವನ್ನು ಶುದ್ಧಗೊಳಿಸುವ ಮೂಲಕ ಮಾನವ ಮತ್ತು ಪ್ರಕೃತಿ ಸಹಜ ಅನ್ಯೋನ್ಯತೆಯಿಂದ ಸರಿದೂಗಲು ಪಕ್ಷಿಗಳ ಕಾರ್ಯ ಮಹತ್ತರವಾದದ್ದು. ಪಕ್ಷಿಗಳನ್ನು ಉಳಿಸಿ ಬೆಳೆಸೋಣ.
ಮನೆಯ ಆವರಣದಲ್ಲಿ ಕಾಳುಗಳನ್ನು ಹಾಗೂ ನೀರನ್ನು ಇಡುವ ಮೂಲಕ ಪಕ್ಷಿಗಳಿಗೆ ಸಹಾಯ ಮಾಡಬಹುದು. ವಿಶ್ವ ಗುಬ್ಬಚ್ಚಿ ದಿನ ನಾವೆಲ್ಲರೂ ಜಾಗೃತಿಗಾಗಿ ಮಾನವನಿಗೆ ಅರಿವನ್ನು ಉಂಟುಮಾಡುವ ದಿನವಾಗಿದೆ. ಭಾರತದ ಸಂಸ್ಕೃತಿ ಪರಂಪರೆಯಲ್ಲಿ ಪ್ರತಿ ಪ್ರಾಣಿ ಪಕ್ಷಿಗಳನ್ನು ಪ್ರೀತಿಸುವುದು ನಮ್ಮ ರಕ್ತದ ಗುಣವಾಗಿದೆ. ಯಾವುದೇ ಪ್ರಾಣಿಪಕ್ಷಿಗಳಿಗೂ ನೋವನ್ನು ಬಯಸದ ಸಂಸ್ಕೃತಿ ನಮ್ಮದು. ಆಧುನಿಕ ಜೀವನ ಶೈಲಿಯಲ್ಲಿ ಮಾನವ ಬದಲಾವಣೆಯ ದಿಕ್ಕಿನಲ್ಲಿ ಸಾಗುವಾಗ ನಿರ್ಲಕ್ಷ ತೋರಬಾರದು .ಪ್ರಕೃತಿ ಮತ್ತು ಪ್ರಾಣಿ-ಪಕ್ಷಿಗಳು ಮಾನವನಿಗೆ ಪೂರ್ಣ ಸಹಕಾರಿಯಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ಗುಂಡ್ಲುಪೇಟೆಯ ಬಸವಣ್ಣರವರು ಮಾತನಾಡಿ ವಿಶ್ವ ಗುಬ್ಬಚ್ಚಿ ದಿನವೂ ನಮ್ಮ ಜಾಗೃತಿಯ ದಿನವಾಗಬೇಕು. ಗುಬ್ಬಚ್ಚಿ ಒಂದು ಸಣ್ಣ ಪಕ್ಷಿಯಾಗಿದ್ದು 40 ಗ್ರಾಂ ತೂಕವನ್ನು ಹೊಂದಿರುವ ವಿಶಿಷ್ಟ ಪಕ್ಷಿ .ತನ್ನದೇ ಆದ ಸಾಮೂಹಿಕ ಅನ್ಯೋನ್ಯತೆಯ ಜೀವನ ಶೈಲಿಯನ್ನು ಹೊಂದಿರುವ ಗುಬ್ಬಚ್ಚಿ ಕಳೆದ ದಶಕದಿಂದ ಕಣ್ಮರೆಯಾಗುತ್ತಿದೆ. ಇದಕ್ಕೆ ಕಾರಣ ನಮ್ಮ ಆಧುನಿಕ ವ್ಯವಸ್ಥೆಯ ಒಂದು ಭಾಗವಾಗಿದೆ. ಪ್ರಾಣಿಗಳ ಬೆಳವಣಿಗೆಗೆ ಪೂರಕವಾಗಿ ಮರ ಗಿಡಗಳನ್ನು ಬೆಳೆಸುವ ಹಾಗೂ ಬೇಸಿಗೆ ಸಂದರ್ಭದಲ್ಲಿ ಕಾಳುಗಳು ಮತ್ತು ನೀರನ್ನು ಇಡುವ ಮೂಲಕ ನಮ್ಮ ಪರಿಸರದಲ್ಲಿ ಪಕ್ಷಿಗಳ ಬೆಳವಣಿಗೆಗೆ ಸಹಕಾರ ನೀಡಬೇಕು ಎಂದರು.
ಉಪನ್ಯಾಸಕರಾದ ಕೊಳ್ಳೇಗಾಲದ ರಮೇಶ್ ರವರು ಮಾತನಾಡಿ ಜೈ ಹಿಂದ್ ಪ್ರತಿಷ್ಠಾನ ಮತ್ತು ಋಗ್ವೇದಿ ಯೂತ್ ಕ್ಲಬ್ ಪರಿಸರ ಜಾಗೃತಿ ಪ್ರಾಣಿ ಪಕ್ಷಿಗಳ ಮತ್ತು ನಿರಂತರವಾಗಿ ರಾಷ್ಟ್ರೀಯ ಕಾರ್ಯಕ್ರಮಗಳನ್ನು ನೆರವೇರಿಸಿಕೊಂಡು ಬರುತ್ತಿದೆ ಎಂದರು.
ಜಿಲ್ಲಾ ಯುವ ಸಂಘಟನೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ದೊಡ್ಡಮೋಳೆ ಮಾತನಾಡಿ, ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಪಕ್ಷಿಗಳ ಬೆಳವಣಿಗೆಗೆ ಪೂರಕವಾದ ಮರಗಿಡಗಳನ್ನೂ ಬೆಳೆಸಬೇಕು.ಯುವಕರು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪರಿಸರದ ಬಗ್ಗೆ ಜಾಗೃತಿಯನ್ನು ಹೊಂದಬೇಕು ಎಂದರು.
ಕಾರ್ಯಕ್ರಮದಲ್ಲಿ ಕೊಂಗಳಪ್ಪ, ಸುನಿಲ್, ಪ್ರಕಾಶ್, ಉಮೇಶ್, ಮಂಜು ಮುಂತಾದವರು ಉಪಸ್ಥಿತರಿದ್ದರು.



