ಮೈಸೂರು : ಶತಮಾನದಷ್ಟು ಹಳೆಯದಾದ ಮೈಸೂರು ವಿಶ್ವವಿದ್ಯಾಲಯದ ಮಾನಸಗಂಗೋತ್ರಿ ಕ್ಯಾಂಪಸ್ನಲ್ಲಿರುವ ಐತಿಹಾಸಿಕ ಪಾರಂಪರಿಕ ಕಟ್ಟಡವಾದ ಜಯಲಕ್ಷ್ಮಿ ವಿಲಾಸ ಭವನವು ದೊಡ್ಡ ವಿವಾದದ ಕೇಂದ್ರಬಿಂದುವಾಗಿದೆ. ವಿಶ್ವವಿದ್ಯಾನಿಲಯ ಆಡಳಿತವು ಆಸ್ತಿಯನ್ನು ಖಾಸಗಿ ಸಂಸ್ಥೆಗೆ 40 ವರ್ಷಗಳ ಕಾಲ ಗುತ್ತಿಗೆ ನೀಡಲು ಯೋಚಿಸುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಟಿಎನ್ಐಇ ಜೊತೆ ಮಾತನಾಡಿದ ಯುಒಎಂ ಸಿಂಡಿಕೇಟ್ ಸದಸ್ಯ ಡಾ. ಟಿಆರ್ ಚಂದ್ರಶೇಖರ್, ಈ ವಿಷಯವನ್ನು ಮೌಖಿಕವಾಗಿ ಚರ್ಚಿಸಲಾಗಿದೆ. ಇತ್ತೀಚಿನ ಸಿಂಡಿಕೇಟ್ ಸಭೆಯಲ್ಲಿ ಸದಸ್ಯರಿಗೆ ಯಾವುದೇ ಅಧಿಕೃತ ದಾಖಲೆಗಳನ್ನು ವಿತರಿಸಲಾಗಿಲ್ಲ ಎಂದು ಹೇಳಿದರು. ಉದ್ದೇಶಿತ ಕ್ರಮದ ಕಾನೂನುಬದ್ಧತೆ ಮತ್ತು ಪಾರದರ್ಶಕತೆಯನ್ನು ಪ್ರಶ್ನಿಸಿ ನಾನು ಉಪಕುಲಪತಿ ಮತ್ತು ರಿಜಿಸ್ಟ್ರಾರ್ಗೆ ಕಾನೂನು ಎಚ್ಚರಿಕೆ ನೋಟಿಸ್ ನೀಡುತ್ತಿದ್ದೇನೆ ಎಂದು ಹೇಳಿದರು.
ಕ್ಯಾಂಪಸ್ನಲ್ಲಿರುವ ಜಯಲಕ್ಷ್ಮಿ ವಿಲಾಸ ಭವನವು ಕೇವಲ ವಾಸ್ತುಶಿಲ್ಪದ ಹೆಗ್ಗುರುತಲ್ಲ, ನಗರದ ಶ್ರೀಮಂತ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಪರಂಪರೆಯ ಸಂಕೇತವಾಗಿದೆ. ಜಯಚಾಮರಾಜೇಂದ್ರ ಒಡೆಯರ್ ಆಳ್ವಿಕೆಯಲ್ಲಿ ನಿರ್ಮಿಸಲಾದ ಈ ಅರಮನೆಯು ನಂತರ ಮೈಸೂರು ವಿಶ್ವವಿದ್ಯಾಲಯದ ಭಾಗವಾಯಿತು. ಈ ಕಟ್ಟಡವು ವಿಶ್ವವಿದ್ಯಾನಿಲಯದ ಆಡಳಿತ ವ್ಯಾಪ್ತಿಗೆ ಬಂದಾಗ ಕುವೆಂಪು ಅವರು ಉಪಕುಲಪತಿಯಾಗಿ ಸೇವೆ ಸಲ್ಲಿಸಿದ ನಂತರ ಇದರ ಐತಿಹಾಸಿಕ ಮಹತ್ವ ಮತ್ತಷ್ಟು ಹೆಚ್ಚಾಯಿತು.
ಇತ್ತೀಚೆಗೆ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ಮತ್ತು ಅಂತರರಾಷ್ಟ್ರೀಯ ಹಣಕಾಸು ಬೆಂಬಲದ ಮೂಲಕ ಸುಮಾರು 33 ಕೋಟಿ ರೂ. ವೆಚ್ಚದಲ್ಲಿ ಕಟ್ಟಡದ ಜೀರ್ಣೋದ್ಧಾರ ಕೈಗೆತ್ತಿಕೊಳ್ಳಲಾಯಿತು, ಇದರಲ್ಲಿ ಸುಮಾರು 2.8 ಕೋಟಿ ರೂ.ಗಳಲ್ಲಿ US ರಾಯಭಾರಿಗಳ ಸಾಂಸ್ಕೃತಿಕ ಸಂರಕ್ಷಣೆ ನಿಧಿ (AFCP) ಮತ್ತು ಡೆಕ್ಕನ್ ಹೆರಿಟೇಜ್ ಫೌಂಡೇಶನ್ನ ಹಾಗೂ ಹರೀಶ್ ಮತ್ತು ಬಿನಾ ಶಾ ಫೌಂಡೇಶನ್ ಪಾಲುದಾರಿಕೆಯಿದೆ.
ಜೀರ್ಣೋದ್ಧಾರದ ನಂತರ ಸಾರ್ವಜನಿಕ ಪರಂಪರೆ, ಶೈಕ್ಷಣಿಕ ಬಳಕೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ಸ್ಮಾರಕವನ್ನು ಸಂರಕ್ಷಿಸುವ ಗುರಿಯನ್ನು ಹೊಂದಿದೆ. ಆದಾಗ್ಯೂ, ಆಸ್ತಿಯನ್ನು ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡುವ ವರದಿಯು ನಿರ್ಧಾರದ ಉದ್ದೇಶ ಮತ್ತು ಕಾನೂನುಬದ್ಧತೆಯ ಬಗ್ಗೆ ಗಂಭೀರ ಕಳವಳಗಳನ್ನು ಹುಟ್ಟುಹಾಕಿದೆ ಎಂದು ಅವರು ಹೇಳಿದರು.
ಜನವರಿ 2024 ರಲ್ಲಿ, ವಿಶ್ವವಿದ್ಯಾನಿಲಯ ಆಡಳಿತವು ಪುನಃಸ್ಥಾಪಿಸಲಾದ ಮಹಲನ್ನು ಶೈಕ್ಷಣಿಕ ಕಾರ್ಯಕ್ರಮಗಳು, ಸಂಶೋಧನಾ ಚಟುವಟಿಕೆಗಳು ಮತ್ತು ವಸ್ತುಸಂಗ್ರಹಾಲಯ ಸ್ಥಳವಾಗಿ ಬಳಸಲಾಗುವುದು ಎಂದು ಹೇಳಿತ್ತು ಎಂದು ಚಂದ್ರಶೇಖರ್ ಹೇಳಿದರು. “ಪ್ರಸ್ತುತ ಪ್ರಸ್ತಾವನೆಯು ನಿಜವಾಗಿದ್ದರೆ, ಹಿಂದೆ ನೀಡಿದ್ದ ಭರವಸೆಗಳು ಹುಸಿಯಾಗಲಿವೆ ಎಂದು ಅವರು ಹೇಳಿದರು.
ಪ್ರಸ್ತಾವಿತ ತಿಳುವಳಿಕೆ ಒಪ್ಪಂದವನ್ನು ಪರಿಶೀಲಿಸುವಂತೆ ಮತ್ತು ಹಿಂತೆಗೆದುಕೊಳ್ಳುವಂತೆ ಅವರು ವಿಶ್ವವಿದ್ಯಾನಿಲಯವನ್ನು ಒತ್ತಾಯಿಸಿದ್ದಾರೆ. ಇಲ್ಲದಿದ್ದರೆ ಕರ್ನಾಟಕ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಏತನ್ಮಧ್ಯೆ, TNIE ಯುಒಎಂ ಉಪಕುಲಪತಿ ಪ್ರೊ. ಎನ್.ಕೆ. ಲೋಕನಾಥ್ ಅವರನ್ನು ಸಂಪರ್ಕಿಸಿದಾಗ, ಈ ನಿಟ್ಟಿನಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ ಎಂದು ಅವರು ನಿರಾಕರಿಸಿದರು. ಇದು ಇನ್ನೂ ಚರ್ಚೆಯ ಹಂತದಲ್ಲಿದೆ ಮತ್ತು ಸಿಂಡಿಕೇಟ್ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಾಗಿದೆ. ವಿಶ್ವವಿದ್ಯಾನಿಲಯವನ್ನು ಸುಸ್ಥಿರವಾಗಿಡಲು ನಾವು ಬಯಸುವುದರಿಂದ, ಈ ವಿಷಯವನ್ನು ಕೈಗೆತ್ತಿಕೊಳ್ಳಲಾಯಿತು . ಸಾರ್ವಜನಿಕ ಖಾಸಗಿ ಸಹಭಾಗಿತ್ವ (PPP) ಮಾದರಿಯನ್ನು ಪರಿಚಯಿಸುವ ಬಗ್ಗೆ ಚರ್ಚಿಸಲಾಯಿತು, ಆದರೆ ಇಲ್ಲಿಯವರೆಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ” ಎಂದು ಅವರು ಸ್ಪಷ್ಟಪಡಿಸಿದರು.



