ಬೆಂಗಳೂರು : ಐಪಿಎಲ್ 2026ರ 34ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಗುಜರಾತ್ ಟೈಟನ್ಸ್ ವಿರುದ್ಧ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಶುಕ್ರವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ರೋಚಕ ಪಂದ್ಯದಲ್ಲಿ ಬೆಂಗಳೂರು ತನ್ನ 5ನೇ ಗೆಲುವು ದಾಖಲಿಸಿದರೆ, ಗುಜರಾತ್ ಈ ಸೀಸನ್ ನಲ್ಲಿ 3ನೇ ಸೋಲನ್ನು ಅನುಭವಿಸಿತು.
ಪಂದ್ಯದ ನಂತರ ಮಾತನಾಡಿದ ಗುಜರಾತ್ ನಾಯಕ ಶುಭಮನ್ ಗಿಲ್, ತಂಡದ ಸೋಲಿಗೆ ಪ್ರಮುಖ ಕಾರಣಗಳನ್ನು ಬಿಚ್ಚಿಟ್ಟಿದ್ದಾರೆ.
ಬ್ಯಾಟಿಂಗ್ನಲ್ಲಿ ಎಡವಿದ್ದೆಲ್ಲಿ?
ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತು. ಮೊತ್ತ ದೊಡ್ಡದಾಗಿ ಕಂಡರೂ, ಕೊನೆಯ ಹಂತದಲ್ಲಿ ರನ್ ಗಳಿಸಲು ತಂಡ ವಿಫಲವಾಯಿತು ಎಂದು ಗಿಲ್ ಅಭಿಪ್ರಾಯಪಟ್ಟಿದ್ದಾರೆ.
ಡೆತ್ ಓವರ್ ಗಳ ವೈಫಲ್ಯ: 17ರಿಂದ 19ನೇ ಓವರ್ ವರೆಗಿನ ಆ ನಿರ್ಣಾಯಕ 3 ಓವರ್ಗಳಲ್ಲಿ ಗುಜರಾತ್ ಕೇವಲ 17 ರನ್ ಗಳಿಸಲಷ್ಟೇ ಶಕ್ತವಾಯಿತು.
ಬೌಂಡರಿಗಳ ಕೊರತೆ: “16 ರಿಂದ 19ನೇ ಓವರ್ಗಳ ನಡುವೆ ನಮಗೆ ಒಂದು ಬೌಂಡರಿ ಕೂಡ ಬಾರಿಸಲು ಸಾಧ್ಯವಾಗಲಿಲ್ಲ. ನಾವು ನಿರೀಕ್ಷಿಸಿದಷ್ಟು ರನ್ ಬರಲಿಲ್ಲ, ಆ ಮೂರು ಓವರ್ ಗಳು ಪಂದ್ಯದ ಮೇಲೆ ದೊಡ್ಡ ಪರಿಣಾಮ ಬೀರಿದವು” ಎಂದು ಗಿಲ್ ಬೇಸರ ವ್ಯಕ್ತಪಡಿಸಿದರು.
ಬೌಲಿಂಗ್ ಮತ್ತು ಫೀಲ್ಡಿಂಗ್ ಬಗ್ಗೆ ಗಿಲ್ ಹೇಳಿದ್ದೇನು?
ಮಧ್ಯದ ಓವರ್ ಗಳಲ್ಲಿ ವಿಕೆಟ್ ಸಿಗಲಿಲ್ಲ:
ಪವರ್ಪ್ಲೇ ನಂತರ ತಂಡ ಉತ್ತಮ ಸ್ಥಿತಿಯಲ್ಲಿತ್ತು. ಆದರೆ ಮಧ್ಯದ ಓವರ್ಗಳಲ್ಲಿ ವಿಕೆಟ್ ಪಡೆಯಲು ಸಾಧ್ಯವಾಗದಿದ್ದದ್ದು ಸೋಲಿಗೆ ಕಾರಣವಾಯಿತು ಎಂದು ಗಿಲ್ ಹೇಳಿದರು.
ವಿರಾಟ್ ಕೊಹ್ಲಿ ಕ್ಯಾಚ್ ಕೈಚೆಲ್ಲಿದ್ದು:
ಶೂನ್ಯ ರನ್ ಗಳಿಸಿದ್ದಾಗ ವಿರಾಟ್ ಕೊಹ್ಲಿ ನೀಡಿದ ಕ್ಯಾಚ್ ಅನ್ನು ಕೈಬಿಟ್ಟ ಬಗ್ಗೆ ಪ್ರತಿಕ್ರಿಯಿಸಿದ ಗಿಲ್, “ಕ್ಯಾಚ್ಗಳನ್ನು ಕೈಬಿಡುವುದು ಫೀಲ್ಡರ್ ಗಳಿಗೆ ಕಷ್ಟದ ಸಂದರ್ಭ. ಆದರೆ ಪಂದ್ಯಕ್ಕೆ ಮರಳುವುದು ಮುಖ್ಯವಾಗಿತ್ತು,” ಎನ್ನುತ್ತಾ ಪರೋಕ್ಷವಾಗಿ ಫೀಲ್ಡಿಂಗ್ ಲೋಪವನ್ನು ಒಪ್ಪಿಕೊಂಡರು.
ಬೌಲಿಂಗ್ನಲ್ಲಿ ಸ್ಥಿರತೆಯ ಕೊರತೆ:
“ನಮ್ಮ ಬೌಲರ್ಗಳು ಸತತವಾಗಿ ಸರಿಯಾದ ಲೆಂಗ್ತ್ನಲ್ಲಿ ಬೌಲಿಂಗ್ ಮಾಡಲು ವಿಫಲರಾದರು. ಈ ಪಿಚ್ ನಲ್ಲಿ ಲೆಂಗ್ತ್ ಕಾಪಾಡಿಕೊಳ್ಳುವುದು ಮುಖ್ಯವಾಗಿತ್ತು. ಆರ್ಸಿಬಿ ಬ್ಯಾಟರ್ಗಳು ಮಧ್ಯದ ಓವರ್ಗಳಲ್ಲಿ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡಿದರು” ಎಂದು ಎದುರಾಳಿ ತಂಡವನ್ನು ಶ್ಲಾಘಿಸಿದರು.



