ಬೆಂಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರುಎಣಿಕೆ ವೇಳೆ ಮತ ತಿದ್ದುಪಡಿ ನಡೆದಿರುವ ಆರೋಪದ ಹಿನ್ನೆಲೆಯಲ್ಲಿ ಶಾಸಕ ಡಿ.ಎನ್. ಜೀವರಾಜ್ ಸೇರಿದಂತೆ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ಅವರ ಅಂಚೆ ಮತದ ಏಜೆಂಟ್ ಹಾಗೂ ವಕೀಲರಾದ ಸುಧೀರ್ ಕುಮಾರ್ ಮುರೊಳ್ಳಿ ನೀಡಿದ ದೂರಿನ ಆಧಾರದ ಮೇಲೆ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ದೂರುದಾರರು ನೀಡಿದ ಮಾಹಿತಿ ಪ್ರಕಾರ, 2023ರ ಮೇ 13ರಂದು ನಡೆದ ಮತ ಎಣಿಕೆ ಸಂದರ್ಭದಲ್ಲೇ ಟಿ.ಡಿ. ರಾಜೇಗೌಡ ಅವರಿಗೆ ಬಂದಿದ್ದ ಸುಮಾರು 170 ಅಂಚೆ ಮತಗಳನ್ನು ತಿದ್ದುಪಡಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಮತ ಎಣಿಕೆಯ ಬಳಿಕ ಅಂದಿನ ಚುನಾವಣಾಧಿಕಾರಿ ವೇದಮೂರ್ತಿ, ಜಿಲ್ಲಾಧಿಕಾರಿ ರಮೇಶ್ ಹಾಗೂ ಅಭ್ಯರ್ಥಿ ಜೀವರಾಜ್ ಸಂಚು ರೂಪಿಸಿ ಮತಪೆಟ್ಟಿಗೆಗಳ ಸೀಲು ತೆರೆದು ಅಕ್ರಮ ನಡೆಸಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದಲ್ಲದೆ, 2026ರ ಮೇ 2ರಂದು ಸ್ಟ್ರಾಂಗ್ ರೂಂ ಬಳಿಯಲ್ಲಿ ನಡೆದ ಮರುಎಣಿಕೆ ಸಂದರ್ಭದಲ್ಲಿಯೂ ಆಕ್ಷೇಪಣೆ ವ್ಯಕ್ತಪಡಿಸಲಾಗಿತ್ತು. ಒಟ್ಟು 257 ಬ್ಯಾಲೆಟ್ಗಳು ಮತ ಎಣಿಕೆಯ ನಂತರವೇ ತಿದ್ದುಪಡಿ ಆಗಿರುವುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ಚುನಾವಣಾ ಪ್ರಕ್ರಿಯೆಯ ದಾಖಲೆಗಳಲ್ಲಿ ಎಲ್ಲರೂ ಸಹಿ ಮಾಡಿದ್ದರೂ, ನಂತರ ವ್ಯತ್ಯಾಸ ಕಂಡುಬಂದಿರುವುದು ಸಂಚು ರೂಪಿಸಿರುವ ಶಂಕೆಯನ್ನು ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿ ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



