Wednesday, May 6, 2026
Google search engine

Homeಕ್ರೀಡೆಸಿಎಸ್‌ ಕೆ ವಿರುದ್ಧ ಸೋಲು: ಅಕ್ಷರ್ ಪಟೇಲ್ ಬೇಸರ; ಸಂಜು ಸ್ಯಾಮ್ಸನ್ ಆಟವನ್ನು ಉದಾಹರಿಸಿದ ಡಿಸಿ...

ಸಿಎಸ್‌ ಕೆ ವಿರುದ್ಧ ಸೋಲು: ಅಕ್ಷರ್ ಪಟೇಲ್ ಬೇಸರ; ಸಂಜು ಸ್ಯಾಮ್ಸನ್ ಆಟವನ್ನು ಉದಾಹರಿಸಿದ ಡಿಸಿ ನಾಯಕ

ನವದೆಹಲಿ : ಐಪಿಎಲ್ 2026ರ 48ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ 8 ವಿಕೆಟ್‌ಗಳ ಸೋಲು ಅನುಭವಿಸಿದ ನಂತರ ಡೆಲ್ಲಿ ಕ್ಯಾಪಿಟಲ್ಸ್ (DC) ನಾಯಕ ಅಕ್ಷರ್ ಪಟೇಲ್ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಸಂಜು ಸ್ಯಾಮ್ಸನ್ ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನವನ್ನು ಉಲ್ಲೇಖಿಸಿ ಸೋಲಿಗೆ ಕಾರಣಗಳನ್ನು ವಿಶ್ಲೇಷಿಸಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ : 155 ರನ್ (20 ಓವರ್‌ಗಳಲ್ಲಿ)

ಚೆನ್ನೈ ಸೂಪರ್ ಕಿಂಗ್ಸ್: 156/2 (17.3 ಓವರ್‌ಗಳಲ್ಲಿ)

ಸಿಎಸ್‌ಕೆಗೆ 8 ವಿಕೆಟ್‌ಗಳ ಭರ್ಜರಿ ಜಯ.

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ 155 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಸಿಎಸ್‌ಕೆ, ಇನ್ನು 15 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿದರು. ಸಿಎಸ್‌ಕೆ ಪರ ಆರಂಭಿಕರಾಗಿ ಕಣಕ್ಕಿಳಿದ ಸಂಜು ಸ್ಯಾಮ್ಸನ್ 52 ಎಸೆತಗಳಲ್ಲಿ ಅಜೇಯ 87 ರನ್ ಸಿಡಿಸಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು.

ಅಕ್ಷರ್ ಪಟೇಲ್ ಹೇಳಿದ್ದೇನು?

ಸೋಲಿನ ನಂತರ ಮಾತನಾಡಿದ ನಾಯಕ ಅಕ್ಷರ್ ಪಟೇಲ್, ತಂಡದ ಬ್ಯಾಟಿಂಗ್ ವೈಫಲ್ಯದ ಬಗ್ಗೆ ಮಾತನಾಡಿದರು. “ನಮ್ಮ ತಂಡದಲ್ಲಿ 8 ಮಂದಿ ಸ್ಪೆಷಲಿಸ್ಟ್ ಬ್ಯಾಟರ್‌ಗಳಿದ್ದರೂ ನಾವು 10-15 ರನ್ ಕಡಿಮೆ ಮಾಡಿದೆವು. ಈ ಪಿಚ್‌ನಲ್ಲಿ ಬ್ಯಾಟಿಂಗ್ ಮಾಡುವುದು ಸುಲಭವಾಗಿರಲಿಲ್ಲ. ಚೆಂಡು ಅಸಹಜವಾಗಿ ಪುಟಿಯುತ್ತಿತ್ತು ಮತ್ತು ನಿಧಾನವಾಗಿ ಬ್ಯಾಟ್‌ಗೆ ಬರುತ್ತಿತ್ತು.”

ಸಂಜು ಸ್ಯಾಮ್ಸನ್ ಅವರ ಬ್ಯಾಟಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅಕ್ಷರ್, “ಒಮ್ಮೆ ಬ್ಯಾಟರ್ ಕ್ರೀಸ್‌ನಲ್ಲಿ ಸೆಟ್ ಆಗಿಬಿಟ್ಟರೆ, ವಿಕೆಟ್ ಬ್ಯಾಟಿಂಗ್‌ಗೆ ಪೂರಕವಾಗಿ ಕಾಣಲಾರಂಭಿಸುತ್ತದೆ ಎಂಬುದಕ್ಕೆ ಸಂಜು ಅವರ ಇನಿಂಗ್ಸ್ ಸಾಕ್ಷಿ,” ಎಂದು ಹೇಳಿದರು. ಅಲ್ಲದೆ, ಬೌಲಿಂಗ್‌ನಲ್ಲಿ ತಂಡವು ಕುಲದೀಪ್ ಯಾದವ್ ಅವರ ಸೇವೆಯನ್ನು ಮಿಸ್ ಮಾಡಿಕೊಂಡಿತು ಎಂದು ಒಪ್ಪಿಕೊಂಡರು.

ಡೆಲ್ಲಿ ತಂಡದ ಬ್ಯಾಟಿಂಗ್ ಕುಸಿತ

ಡೆಲ್ಲಿ ತಂಡದ ಆರಂಭಿಕ ಹಂತದಲ್ಲಿ ಕೇವಲ 69 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಪಥುಮ್ ನಿಸಂಕ: 19 ರನ್,ಕೆ.ಎಲ್. ರಾಹುಲ್: 12 ರನ್, ನಿತೀಶ್ ರಾಣಾ: 15 ರನ್, ಕರುಣ್ ನಾಯರ್: 13 ರನ್, ಅಕ್ಷರ್ ಪಟೇಲ್: 02 ರನ್, ಕೊನೆಯಲ್ಲಿ ಟ್ರಿಸ್ಟನ್ ಸ್ಟಬ್ಸ್ (38) ಮತ್ತು ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದ ಸಮೀರ್ ರಿಜ್ವಿ (40) ಅವರ ಹೋರಾಟದ ಫಲವಾಗಿ ತಂಡ ಗೌರವಯುತ ಮೊತ್ತ ತಲುಪಲು ಸಾಧ್ಯವಾಯಿತು.

ಪ್ಲೇ-ಆಫ್ ಹಾದಿ ಕಠಿಣ

ಡೆಲ್ಲಿ ಕ್ಯಾಪಿಟಲ್ಸ್ ಪ್ರಸ್ತುತ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಪ್ಲೇ-ಆಫ್ ತಲುಪಬೇಕಾದರೆ ತಂಡಕ್ಕೆ ಇನ್ನುಳಿದ ಎಲ್ಲಾ ಪಂದ್ಯಗಳು ‘ಮಾಡು ಇಲ್ಲವೇ ಮಡಿ’ ಎಂಬಂತಾಗಿದೆ.

ಉಳಿದ ಎಲ್ಲಾ ಪಂದ್ಯಗಳನ್ನು ಗೆದ್ದರೆ ಮಾತ್ರ ಡೆಲ್ಲಿ 16 ಅಂಕಗಳನ್ನು ಪಡೆಯಲು ಸಾಧ್ಯ. ಇನ್ನು ಒಂದು ಪಂದ್ಯ ಸೋತರೂ ಪ್ಲೇ-ಆಫ್ ರೇಸ್‌ನಿಂದ ಹೊರಬೀಳುವ ಭೀತಿ ಎದುರಾಗಿದೆ.

“ಇನ್ನುಳಿದ ಪಂದ್ಯಗಳಲ್ಲಿ ನಾವು ಸ್ಪಷ್ಟ ಮನಸ್ಥಿತಿಯೊಂದಿಗೆ ಕಣಕ್ಕಿಳಿಯಬೇಕಿದೆ ಮತ್ತು ಗೆಲುವಿಗಾಗಿ ನಮ್ಮ ಸರ್ವಸ್ವವನ್ನೂ ಧಾರೆ ಎರೆಯಬೇಕಿದೆ ” ಎಂದು ಅಕ್ಷರ್ ಪಟೇಲ್ ತಂಡಕ್ಕೆ ಕರೆ ನೀಡಿದ್ದಾರೆ.

RELATED ARTICLES
- Advertisment -
Google search engine

Most Popular