ತಿರುವನಂತಪುರಂ : ಕೇರಳಂ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿರುವ ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ಮೈತ್ರಿಕೂಟ ಇಂದು ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಯುಡಿಎಫ್ ನಾಯಕ ವಿ.ಡಿ. ಸತೀಶನ್ ಅವರು ಇಂದು (ಸೋಮವಾರ) ಕೇರಳದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ತಿರುವನಂತಪುರಂನ ಸೆಂಟ್ರಲ್ ಸ್ಟೇಡಿಯಂನಲ್ಲಿ ಅದ್ಧೂರಿ ಪ್ರಮಾಣ ವಚನ ಸಮಾರಂಭ ಆಯೋಜನೆಯಾಗಿದ್ದು, ಈ ಮೂಲಕ ಒಂದು ದಶಕದ (10 ವರ್ಷ) ನಂತರ ಕೇರಳದಲ್ಲಿ ಯುಡಿಎಫ್ ಅಧಿಕಾರಕ್ಕೆ ಮರಳಿದಂತಾಗುತ್ತಿದೆ.
ಗಣ್ಯರ ಉಪಸ್ಥಿತಿ
ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ದೇಶದ ಪ್ರಮುಖ ನಾಯಕರು ಆಗಮಿಸುತ್ತಿದ್ದಾರೆ. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಹಿರಿಯ ನಾಯಕರು ಹಾಗೂ ಕಾಂಗ್ರೆಸ್ ಆಡಳಿತವಿರುವ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಸಮಾರಂಭದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ.
ಕಾರ್ಡಿನಲ್ ಭೇಟಿ ಮಾಡಿದ ಸತೀಶನ್
ಕೇರಳಂ 13ನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ಮುನ್ನಾದಿನವಾದ ಭಾನುವಾರ, ವಿ.ಡಿ. ಸತೀಶನ್ ಅವರು ಪ್ರಮುಖ ಧಾರ್ಮಿಕ ಮುಖಂಡರಾದ ಕಾರ್ಡಿನಲ್ ಮೊರನ್ ಮೊರ್ ಬೆಸೆಲಿಯೊಸ್ ಕ್ಲೀಮಿಸ್ (ಕ್ಲೀಮಿಸ್ ಬಾವಾ) ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಕಾರ್ಡಿನಲ್ ಅವರು ಸದ್ಯ ಸಿರೋ-ಮಲಂಕರ ಕ್ಯಾಥೋಲಿಕ್ ಚರ್ಚ್ನ ಮೇಜರ್ ಆರ್ಚ್ಬಿಷಪ್-ಕ್ಯಾಥೋಲಿಕೋಸ್ ಮತ್ತು ತ್ರಿವೆಂಡ್ರಂನ ಮೇಜರ್ ಆರ್ಚ್ಬಿಷಪ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
21 ಸದಸ್ಯರ ಸಂಪುಟ
ನೂತನ ಸರ್ಕಾರವು ಮುಖ್ಯಮಂತ್ರಿ ಸೇರಿದಂತೆ ಒಟ್ಟು 21 ಸದಸ್ಯರ ಬಲಿಷ್ಠ ಸಚಿವ ಸಂಪುಟದೊಂದಿಗೆ ಕಾರ್ಯಭಾರ ಆರಂಭಿಸಲಿದೆ. ಸೋಮವಾರ ನಡೆಯಲಿರುವ ಪ್ರಮಾಣ ವಚನ ಸಮಾರಂಭಕ್ಕೂ ಮುನ್ನ ಸಚಿವ ಸಂಪುಟದ ಅಂತಿಮ ಪಟ್ಟಿ ಪ್ರಕಟವಾಗಲಿದ್ದು, ಯುಡಿಎಫ್ ಮೈತ್ರಿಕೂಟದ ಒಳಗಿನ ಅಧಿಕಾರ ಹಂಚಿಕೆಯ ಸ್ಪಷ್ಟ ಚಿತ್ರಣ ಸಿಗಲಿದೆ.



