ಮೈಸೂರು: ಏಪ್ರಿಲ್ ಹಾಗೂ ಮೇ ಮಾಹೆಯಲ್ಲಿ ಮಳೆಯ ಕೊರತೆ ಉಂಟಾಗಿದ್ದು, ಮಳೆ ಸರಿಯಾಗಿ ಬಾರದಿದ್ದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಕುಡಿಯುವ ನೀರಿಗೆ ತೊಂದರೆಯಾಗದಂತೆ ಯೋಜನೆ ರೂಪಿಸಿ ಎಂದು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಜಿ ಅವರು ಅಧಿಕಾರಿಗಳಿಗೆ ತಿಳಿಸಿದರು.
ಅವರು ಇಂದು ಜಿಲ್ಲಾ ಪಂಚಾಯತ್ ಡಿ.ದೇವರಾಜ ಅರಸು ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಣೆಕಟ್ಟಿನಲ್ಲಿ ಲಭ್ಯವಿರುವ ನೀರಿನ ಆಧಾರದ ಮೇಲೆ ಜುಲೈ ಮಾಹೆಯವರೆಗೆ ಕುಡಿಯುವ ನೀರಿಗೆ ತೊಂದರೆಯಾಗುವುದಿಲ್ಲ. ಆದರೆ ಈಗಿನಿಂದಲೇ ಮಿತವಾಗಿ ನೀರನ್ನು ಬಳಸಿ, ಕುಡಿಯುವ ನೀರು ಪೋಲಾಗದಂತೆ ಎಚ್ಚರಿಕೆ ವಹಿಸಿ ಎಂದರು.
ಸ್ಥಳೀಯ ಸಂಸ್ಥೆಗಳು ಕುಡಿಯುವ ನೀರಿನ ತೊಂದರೆಯಾಗುವ ಸ್ಥಳಗಳನ್ನು ಗುರುತಿಸಿ ಸದರಿ ಸ್ಥಳಗಳಲ್ಲಿ ಇರುವ ಖಾಸಗಿ ಬೋರ್ ವೆಲ್ ಗಳ ಪಟ್ಟಿ ಮಾಡಿಕೊಂಡು ಅವಶ್ಯಕತೆಯ ಸಂದರ್ಭದಲ್ಲಿ ನೀರು ಪಡೆಯಲು ಸಿದ್ಧತೆ ಮಾಡಿಕೊಳ್ಳಿ ಎಂದರು.
ತಾಲ್ಲೂಕುವಾರು ಕುಡಿಯುವ ನೀರಿನ ಸಮಸ್ಯೆಗಳ ಕುರಿತು ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು ಸಾರ್ವಜನಿಕರು ಕುಡಿಯುವ ನೀರಿನ ತೊಂದರೆಯ ಬಗ್ಗೆ ಅಧಿಕಾರಿಗಳು ಅಥವಾ ಸಿಬ್ಬಂದಿಗಳಿಗೆ ಸಾರ್ವಜನಿಕರು ಕರೆ ಮಾಡಿದಾಗ ಸಕಾರಾತ್ಮಕವಾಗಿ ಸ್ಪಂದಿಸಿ ತೊಂದರೆ ಇರುವ ಸ್ಥಳವನ್ನು ಪರಿಶೀಲಿಸಿ ಪರಿಹಾರಗೊಳಿಸಿ ಇಲ್ಲಾವಾದಲ್ಲಿ ಸಣ್ಣ ಹಂತದಲ್ಲಿ ಪರಿಹಾರವಾಗಬೇಕಾದ ಸಮಸ್ಯೆ ಗಂಭೀರವಾಗುತ್ತದೆ ಎಂದರು.
ಬೋರ್ ವೆಲ್ ಗಳ ರಿಡ್ರಿಲ್, ಹೊಸ ಬೋರ್ ವೆಲ್ ಕೊರೆಯುವಿಕೆ, ಟ್ಯಾಂಕರ್ ಮೂಲಕ ನೀರು ಸರಬರಾಜು, ಕುಡಿಯುವ ನೀರಿನ ಪೈಪ್ ಲೈನ್ ಜೋಡಣೆ ಕುರಿತು ಯೋಜನೆಗಳನ್ನು ಸಿದ್ಧಪಡಿಸಿಕೊಳ್ಳಿ. ಕುಡಿಯುವ ನೀರಿನ ತೊಂದರೆ ಉಂಟಾಗಬಹುದಾದ ಸ್ಥಳಗಳಿಗೆ ನಿಗಧಿತವಾಗಿ ಭೇಟಿ ನೀಡಿ ಸಮಸ್ಯೆ ಉಲ್ಭಣವಾಗುವ ಮೊದಲೇ ಪರಿಹರಿಸಿ ಎಂದರು.
ಜಂಟಿ ಕೃಷಿ ನಿರ್ದೇಶಕ ರವಿ ಅವರು ಮಾತನಾಡಿ ಜಿಲ್ಲೆಯಲ್ಲಿ ಏಪ್ರಿಲ್ ಮಾಹೆಯಲ್ಲಿ 85% ಹಾಗೂ ಮೇ ಮಾಹೆಯಲ್ಲಿ ಇಲ್ಲಿಯವರೆಗೆ 24 % ಮಳೆಯ ಕೊರತೆ ಉಂಟಾಗಿದೆ. 38,000 ಹೆಕ್ಟೇರ್ ತಂಬಾಕು ಬೆಳೆ ಬಿತ್ತನೆಯಾಗಿದ್ದು, ಹೆಚ್ಚು ಭಾಗ ಬೋರ್ ವೆಲ್ ನೀರನ್ನು ಆಧರಿಸಿದೆ. ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆ ಇಲ್ಲ. ಮಳೆಯು ವಾರ/ ತಿಂಗಳು ಪೂರ ಬಾರದೇ ಬಿತ್ತನೆಯನ್ನು ಮುಂದಕ್ಕೆ ಸೆಪ್ಟೆಂಬರ್ ಮಾಹೆಗೆ ಹೋದರೆ ಅಂತಹ ಸಂದರ್ಭದಲ್ಲಿ ಬೆಳೆಯಲು ಚಳಿಯನ್ನು ತಡೆದು ಇಳುವರಿ ನೀಡುವ ಬೀಜದ ಬಿತ್ತನೆಯನ್ನು ಪ್ರೋತ್ಸಾಹಿಸಲು ಯೋಜನೆ ಸಿದ್ಧಪಡಿಸಲಾಗಿದೆ ಎಂದರು.
ವಿವಿಧ ಬೆಳೆಗಳಿಗೆ ಹೆಕ್ಟೇರ್ ವಾರು ಬಳಸಬೇಕಿರುವ ಯುರಿಯಾ ಹಾಗೂ ಇತರೆ ರಸಗೊಬ್ಬರದ ಪ್ರಮಾಣದ ಪ್ರಕಟಣೆಯನ್ನು ಹೊರಡಿಸಲಾಗಿದೆ. ಯುರಿಯಾ ವಿತರಣಾ ಆ್ಯಪ್ ನಲ್ಲಿ ವಿತರಣೆ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ಕುಮಾರಸ್ವಾಮಿ, ಅಗ್ನಿಶಾಮಕ ಅಧಿಕಾರಿ ಗುರುರಾಜ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಂಜುನಾಥ್ ಅಂಗಡಿ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಶಿಥಿಲವಾಗಿರುವ ಕಟ್ಟಡಗಳ ಪಟ್ಟಿ ಮಾಡಿ ಸಲ್ಲಿಸಿ
ಇಲಾಖೆಯ ವ್ಯಾಪ್ತಿಯಲ್ಲಿ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು ಗಾಳಿ ಅಥವಾ ಮಳೆಗೆ ಬೀಳುವ ಸಾಧ್ಯತೆ ಇದ್ದಲ್ಲಿ, ತಕ್ಷಣ ಅವುಗಳ ಪಟ್ಟಿ ಮಾಡಿ ಎರಡು ದಿನದೊಳಗಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಜಿ ಅವರು ತಿಳಿಸಿದರು.
ಶಿಥಿಲಾವಸ್ಥೆಯಲ್ಲಿರುವ ಕಟ್ಟದ ಮಳೆ ಗಾಳಿಯಿಂದ ಬಿದ್ದು ಪ್ರಾಣ ಹಾನಿಯಾದಲ್ಲಿ, ಆಯಾ ಇಲಾಖೆಯ ಅಧಿಕಾರಿಗಳೇ ಜವಾಬ್ದಾರಿ ಹೊರಬೇಕಾಗುತ್ತದೆ ಎಂದರು.
ಶಿಥಿಲಾವಸ್ಥೆಯಲ್ಲಿರುವ ಕಟ್ಟಡವನ್ನು ಆಯಾ ಇಲಾಖೆ ಅವರು ತಮ್ಮ ಇಲಾಖಾ ಅನುದಾನದಿಂದ ತೆರವುಗೊಳಿಸ ಬೇಕಿರುವುದರಿಂದ ಪಟ್ಟಿ ನೀಡಿದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಸಭೆಯ ನಡಾವಳಿಯಲ್ಲಿ ಸೇರಿಸಿ ತೆರವುಗೊಳಿಸುವಂತೆ ಸೂಚನೆ ನೀಡಲಾಗುವುದು ಎಂದರು.
ಪಾರಂಪರಿಕ ಕಟ್ಟಡವಾಗಿದ್ದು, ಶಿಥಿಲಾವಸ್ಥೆಯಲ್ಲಿದ್ದರೆ ತಕ್ಷಣವೇ ಲೋಕೋಪಯೋಗಿ ಇಲಾಖೆಯಿಂದ ಸ್ಟ್ರಕ್ಚರ್ ಸ್ಟೆಬಿಲಿಟಿ ಕುರಿತು ವರದಿ ಪಡೆದು ಜಿಲ್ಲಾಧಿಕಾರಿಗಳ ಕಚೇರಿಗೆ ವರದಿ ಸಲ್ಲಿಸುವಂತೆ ತಿಳಿಸಿದರು.



