ಮೈಸೂರು : ಮೈಸೂರಿನ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಸಂಭವಿಸಿದ ಸರಣಿ ಸಾವುಗಳಿಗೆ ಅಲ್ಲಿನ ಅವ್ಯವಸ್ಥೆ ಮತ್ತು ವೈದ್ಯರ ಕೊರತೆ ಕಾರಣ ಎಂಬ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಜಯದೇವ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಸದಾನಂದ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ವೈದ್ಯಕೀಯ ಅಧೀಕ್ಷಕ ಡಾ.ಸದಾನಂದ, ನಿನ್ನೆ ಹೆಚ್ಚಿನ ಔಟ್ ಪೇಷಂಟ್ ಗಳು ಆಸ್ಪತ್ರೆಗೆ ದಾಖಲಾಗಿದ್ದರು. ಎಲ್ಲರಿಗೂ ಐಸಿಯು ನಲ್ಲಿ ಚಿಕಿತ್ಸೆ ಕೊಟ್ಟಿದ್ದೇವೆ. 18 ಜನರಿಗೆ ಮಾತ್ರ ಐಸಿಯುನಲ್ಲಿ ಚಿಕಿತ್ಸೆ ಕೊಡಬಹುದು. ನಾವು 25 ಜನರಿಗೆ ಚಿಕಿತ್ಸೆ ಕೊಟ್ಟಿದ್ದೇವೆ. ಹೃದಯಾಘಾತವಾಗಿ ಸುಮಾರು ಗಂಟೆಗಳ ನಂತರ ಬಂದವರು ತೀರಿ ಹೋಗಿದ್ದಾರೆ. ಹೃದಯಾಘಾತವಾದಾಗ ಗೋಲ್ಡನ್ ಅವರ್ ಅಂತ ಇರುತ್ತದೆ. ಅದು ಮೀರಿದರೆ ಯಾರು ಏನು ಮಾಡೋಕೆ ಆಗಲ್ಲ ಎಂದು ತಿಳಿಸಿದರು.
5 ಜಿಲ್ಲೆಗಳಿಂದ ಹೃದಯದ ಸಮಸ್ಯೆಯಿಂದ ರೋಗಿಗಳು ಬರುತ್ತಾರೆ. ಇಲ್ಲಿನ ವೈದ್ಯರು ಸಿಬ್ಬಂದಿಗಳು ಹೆಚ್ಚಿನ ಅವಧಿಯ ಕೆಲಸ ಮಾಡ್ತಿದ್ದಾರೆ ನಮಗೆ ಸಿಬ್ಬಂದಿ ಸಮಸ್ಯೆಯಿದೆ. ನಿನ್ನೆ ಘಟನೆಗೆ ಸಿಬ್ಬಂದಿ ಸಮಸ್ಯೆ ಕಾರಣ ಅಲ್ಲ. ಜನರು ಪ್ಯಾನಿಕ್ ಆಗುವ ಅವಶ್ಯಕತೆ ಇಲ್ಲ ಎಂದು ವೈದ್ಯಕೀಯ ಅಧೀಕ್ಷಕರಾದ ಡಾ.ಸದಾನಂದ ತಿಳಿಸಿದರು.
ರೋಗಿಯ ಸಂಬಂಧಿ ಇಸ್ಮಾಯಿಲ್ ಮಾತನಾಡಿ, ಬೆಳಿಗ್ಗೆ 4.30 ಗಂಟೆಯಿಂದ 7 ಗಂಟೆ ತನಕ ಒಬ್ಬರು ವೈದ್ಯರು ಇರಲಿಲ್ಲ. ಎಮರ್ಜೆನ್ಸಿಯಲ್ಲಿ ಒಬ್ಬ ವೈದ್ಯರು ಇಲ್ಲ ಅಂದ್ರೆ ಹೇಗೆ? ಸಿಬ್ಬಂದಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ನಾನು ಆಸ್ಪತ್ರೆಗೆ ಬಂದ ಮೇಲೆ ಐದಾರು ಮಂದಿ ತೀರಿ ಹೋದರು. ಯಾವ ಕಾರಣಕ್ಕೆ ತೀರಿ ಹೋದ್ರು ಗೊತ್ತಿಲ್ಲ. ವೈದ್ಯರು ಎಮರ್ಜೆನ್ಸಿ ಅಲ್ಲಿ ಇದ್ದರೇ ಈ ರೀತಿ ಆಗಲ್ಲ. ನಿಮ್ಮ ತಾಯಿಗೆ ಚಿಕಿತ್ಸೆ ಕೊಡುತ್ತಿದ್ದೇವೆ. ನೀವೇಕೆ ಬೇರೆಯವರ ಬಗ್ಗೆ ಕೇಳುತ್ತೀರಾ ಅಂತಾರೆ . ಒಬ್ಬರು ವೈದ್ಯರು ಬಂದ ಮೇಲೆ ತಾನೇ ಇನ್ನೊಬ್ಬ ವೈದ್ಯರು ಹೋಗಬೇಕು. 2 ಗಂಟೆಗಳ ಕಾಲ ಒಬ್ಬೇ ಒಬ್ಬ ವೈದ್ಯರು ಇಲ್ಲ ಅಂದರೆ ಹೇಗೆ ಎಂದು ಅಳಲು ತೋಡಿಕೊಂಡಿದ್ದಾರೆ.
11 ಜನರು ಮೃತಪಟ್ಟ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ಜಯದೇವ ಆಸ್ಪತ್ರೆ ವೈದ್ಯ ಶ್ರೀನಿಧಿ ಹೆಗಡೆ, ಆ ಸಮಯದಲ್ಲಿ ನಾನೇ ಡ್ಯೂಟಿ ಡಾಕ್ಟರ್ ಆಗಿದ್ದೆ. ನಿಂಗೇಗೌಡ ರೋಗಿಯ ಕಡೆವರು ಬಂದು ಮಾತನಾಡಿದರು. ಅವರಿಗೆ ವಿವರವಾಗಿ ರೋಗಿಯ ಬಗ್ಗೆ ತಿಳಿಸಿದ್ದೆ. ಬಳಿಕ ಬಂದ ಇಬ್ಬರು ಬೇರೆ ಯಾರೋ ಇಬ್ಬರು ಕೂಗಾಡಿದರು. ಅವರಿಗೂ ಕೂಡ ನಾನು ಸಮಾಧಾನದಿಂದ ಉತ್ತರಿಸಿದೆ. ಅವರು ಗಲಾಟೆ ಮಾಡೋದು ನೋಡಿ ಮತ್ತಷ್ಟು ಮಂದಿ ಬಂದು ಗಲಾಟೆ ಮಾಡಿದರು. ನಾವು ಯಾವುದೇ ತಪ್ಪು ಎಸಗಿಲ್ಲ. ಗಲಾಟೆ ಮಾಡಲು ಬಂದವರನ್ನು ತಡೆದಿದ್ದೇನೆ ಅಷ್ಟೇ. ವೈದ್ಯರು ಸಿಬ್ಬಂದಿಗಳ ಕೊರತೆ ಇರೋದು ನಿಜ. ಜನರು ಆತಂಕಕ್ಕೆ ಒಳಗಾದದೇ ಚಿಕಿತ್ಸೆ ಪಡೆಯಿರಿ ಎಂದು ತಿಳಿಸಿದ್ದಾರೆ.



