ಬಳ್ಳಾರಿ : ಭಾರತೀಯ ವೈದ್ಯರ ಸಂಘ ರಾಜ್ಯ ಶಾಖೆ ಮತ್ತು ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಹಭಾಗಿತ್ವದಲ್ಲಿ 40ನೇ ವಾರ್ಷಿಕ ರಾಜ್ಯಮಟ್ಟದ ವೈದ್ಯಕೀಯ ಸಮ್ಮೇಳನವನ್ನು ಇಂದಿನಿಂದ (11-08-23 ರಿಂದ13-08-23)ವರೆಗೆ ನಗರದ ವಿಮ್ಸ್ ವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಸಮ್ಮೇಳನದಲ್ಲಿ ರಾಜ್ಯದ ಎಲ್ಲಾ ವೈದ್ಯಕೀಯ ಮಹಾವಿದ್ಯಾಲಯಗಳಿಂದ ಸುಮಾರು 990 ಕ್ಕಿಂತಲೂ ಹೆಚ್ಚು ವೈದ್ಯರು ಮತ್ತು ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಲಿದ್ದು, ಗ್ರಾಮೀಣ ಭಾಗದಲ್ಲಿ ರೋಗಿಗಳ ಉತ್ತಮ ಆರೈಕೆ ಎಂಬ ಮುಖ್ಯ ಧ್ಯೇಯದೊಂದಿಗೆ ಹಮ್ಮಿಕೊಳ್ಳಲಾಗಿರುವ ಈ ಸಮ್ಮೇಳನದಲ್ಲಿ ಅಮೇರಿಕಾ, ಆಸ್ಟ್ರೇಲಿಯಾ ವಿದೇಶಗಳ ತಜ್ಞ ವೈದ್ಯರು ವಿವಿಧ ವಿಷಯಗಳ ಕುರಿತು ವಿಚಾರ ಸಂಕಿರಣಗಳಲ್ಲಿ ಪಾಲ್ಗೊಂಡು, ವೈದ್ಯಕೀಯ ರಂಗದಲ್ಲಿ ತೀವ್ರಗತಿಯಲ್ಲಿ ಆಗುತ್ತಿರುವ ಬದಲಾವಣೆಗಳನ್ನು ತಿಳಿಸಲಿದ್ದಾರೆ.
ಇದು ರೋಗಿಗಳ ಆರೋಗ್ಯವನ್ನು ಪರಿಣಾಮಕಾರಿಯಾಗಿ ಸುಧಾರಿಸಲು ಮತ್ತು ವಿದ್ಯಾರ್ಥಿಗಳ ಜ್ಞಾನವನ್ನು ಹೆಚ್ಚಿಸಲು ಸಹಕಾರಿಯಾಗಲಿದೆ ಎಂದು ವಿಮ್ಸ್ನ ನಿರ್ದೇಶಕ ಡಾ.ಗಂಗಾಧರ ಗೌಡ ಅವರು ತಿಳಿಸಿದರು.
ಸಮ್ಮೇಳನದ ಅಂಗವಾಗಿ ಏರ್ಪಡಿಸಲಾಗಿರುವ ಮುಂದುವರಿದ ಶೈಕ್ಷಣಿಕ ಕಾರ್ಯಕ್ರಮವನ್ನು (ಸಿಎಂಇ) ಆ.11 ರಂದು ಬೆಳಿಗ್ಗೆಯಿಂದಲೇ ವಿಮ್ಸ್ ವೈದ್ಯಕೀಯ ಕಾಲೇಜಿನ ವೈದ್ಯ ಸಭಾಂಗಣದಲ್ಲಿ ಆರಂಭವಾಗಿದೆ.
ಇದೇ ಸಂದರ್ಭದಲ್ಲಿ ಹೊಸ ಔಷಧಗಳನ್ನು ಪರಿಚಯಿಸುವ ಸಲುವಾಗಿ ವಿವಿಧ ಔಷಧ ಕಂಪನಿಗಳ ಉತ್ಪನ್ನಗಳ ಪ್ರದರ್ಶನ ಹಾಗೂ ವೈದ್ಯರಿಂದ ಫೋಟೊಗ್ರಾಫಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಕೆಪಿಕಾನ್ ವೈದ್ಯಕೀಯ ಸಮ್ಮೇಳನ 2023 ರ ಸಮಾರೋಪ ಆ.13 ರಂದು ನಡೆಯಲಿದ್ದು, ವಿವಿಧ ಶೈಕ್ಷಣಿಕ ಸ್ಪರ್ಧೆಗಳಲ್ಲಿ ಗೆದ್ದವರಿಗೆ ಬಹುಮಾನ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಭಾರತೀಯ ವೈದ್ಯರ ಸಂಘ ಅಧ್ಯಕ್ಷ ಡಾ.ಗೋವಿಂದ, ಡಾ.ಮುರಳಿ ಮೋಹನ, ಡಾ.ನಾರಾಯಣ ಬಾಬು, ಡಾ.ಕೊಟ್ರೇಶ್, ಕಾರ್ಯದರ್ಶಿ ಡಾ.ಸೋಮನಾಥ, ರಾಜ್ಯ ಕಾರ್ಯದರ್ಶಿ ಡಾ.ವಿಶ್ವನಾಥ ಸೇರಿದಂತೆ ಇತರರು ಉಪಸ್ಥಿತರಿದ್ದರು.