ನವದೆಹಲಿ : ಭಯೋತ್ಪಾದನೆಗೆ ಹಣಕಾಸು ನೆರವು (Terror Funding) ಮತ್ತು ಅಕ್ರಮ ನುಸುಳುಕೋರರ ಜಾಲಕ್ಕೆ ಸಂಬಂಧಿಸಿದ ಪ್ರಕರಣವೊಂದರ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯವು (ED) 13 ಸ್ಥಳಗಳಲ್ಲಿ ದಾಳಿ ನಡೆಸಿದೆ.
ಈ ಪ್ರಕರಣವು ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳ (ATS) ದಾಖಲಿಸಿದ ಎಫ್ ಐಆರ್ ನಿಂದ ಆರಂಭವಾಗಿದೆ. ರೋಹಿಂಗ್ಯಾಗಳು ಮತ್ತು ಬಾಂಗ್ಲಾದೇಶಿ ಪ್ರಜೆಗಳನ್ನು ಭಾರತಕ್ಕೆ ಅಕ್ರಮವಾಗಿ ನುಸುಳುವಂತೆ ಮಾಡುವುದು, ಅವರಿಗೆ ನಕಲಿ ಭಾರತೀಯ ಗುರುತಿನ ಚೀಟಿಗಳನ್ನು ಸಿದ್ಧಪಡಿಸುವುದು ಮತ್ತು ದೇಶದ ವಿವಿಧ ಭಾಗಗಳಲ್ಲಿ ಅವರಿಗೆ ಪುನರ್ವಸತಿ ಕಲ್ಪಿಸಲು ಸಹಾಯ ಮಾಡುತ್ತಿದ್ದ ಸಂಘಟಿತ ಸಿಂಡಿಕೇಟ್ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ.
ಕೆಲವು ದತ್ತಿ ಸಂಸ್ಥೆಗಳು ಮತ್ತು ಇತರ ಘಟಕಗಳು ವಿದೇಶಗಳಿಂದ ಭಾರೀ ಪ್ರಮಾಣದ ದೇಣಿಗೆಯನ್ನು ಸ್ವೀಕರಿಸಿ, ಅದನ್ನು ವಿವಿಧ ಬ್ಯಾಂಕ್ ಖಾತೆಗಳು ಮತ್ತು ‘ಮೂಲ್’ ಖಾತೆಗಳ ಮೂಲಕ ವರ್ಗಾಯಿಸುವ ಮೂಲಕ ಅಕ್ರಮ ಚಟುವಟಿಕೆಗಳಿಗೆ ಬಳಸುತ್ತಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ನಗದು ಹಿಂಪಡೆಯುವಿಕೆ ಮತ್ತು ಸಣ್ಣ ಮೊತ್ತದ ಹಲವು ಹಣ ವರ್ಗಾವಣೆಗಳ ಮೂಲಕ ಅನುಮಾನಾಸ್ಪದ ಫಲಾನುಭವಿಗಳಿಗೆ ಹಣವನ್ನು ತಲುಪಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ.



