ರಾಮನಗರ: ಪ್ರಪಂಚ ಇರುವವರೆಗೂ ಸಮಸ್ಯೆಗಳು ಬಗೆ ಹರಿಯಲ್ಲ. ಬಗೆ ಹರಿಸುವ ಸಮಸ್ಯೆ ಗಳನ್ನು ಬಗೆಹರಿಸುತ್ತೇವೆ. ಜನರ ಸಮಸ್ಯೆ ಪರಿಹಾರಕ್ಕೆ ನಮ್ಮ ಸರಕಾರ ಬದ್ಧವಾಗಿದೆ ಎಂದು ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ನಗರದಲ್ಲಿ ಆಯೋಜಿಸಿದ್ದ ನೂತನ ಸರ್ಕಾರದ ಪ್ರಥಮ ಜನತಾ ದರ್ಶನ ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ಇಂದು ಜನಸ್ಪಂದನಾ ಕಾರ್ಯಕ್ರಮ ಮಾಡುತ್ತಿದ್ದೇವೆ. ಜಿಲ್ಲಾಧಿಕಾರಿಗಳು ಪ್ರತಿ ೧೫ ದಿನಕ್ಕೊಮ್ಮೆ ಸಭೆ ನಡೆಸಿ ಜನರ ಸಮಸ್ಯೆಗಳನ್ನು ಪರಿಹರಿಸಬೇಕು. ಜನರ ಸಮಸ್ಯೆಗಳನ್ನು ಆಲಿಸಲು ಸಭೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಪೊಲೀಸ್, ಹಕ್ಕುಪತ್ರ, ಚರಂಡಿ ಹಾಗೂ ಆನೆ ದಾಳಿ ಸಮಸ್ಯೆಗಳು ಸೇರಿದಂತೆ ಸುಮಾರು ಇನ್ನೂರು ಮನವಿಗಳು ಬಂದಿದೆ. ಮುಂದಿನ ಸಲದ ಜನತಾ ದರ್ಶನಕ್ಕೆ ಬರುವ ವೇಳೆ ಸಮಸ್ಯೆ ಬಗೆಹರಿಯಬೇಕು ಅಂತ ಹೇಳಲಾಗಿದೆ ಎಂದರು.
ಇವರೇನು ಅಭಿವೃದ್ಧಿ ಮಾಡುವುದು ಬೇಕಾಗಿಲ್ಲ, ಕ್ಷೇತ್ರವನ್ನು ನೋಡಿಕೊಂಡು ಹೋಗಲಿ ಸಾಕು ಎಂಬ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಕ್ಷೇತ್ರದಲ್ಲಿ ಮೂಲಭೂತ ಸಮಸ್ಯೆ ಗಳಿವೆ. ಸಮಸ್ಯೆಗಳೆ ಇಲ್ಲ ಅಂತ ಇಲ್ಲ. ಇವು ಬಗೆಹರಿಯುವ ಸಮಸ್ಯೆಗಳಲ್ಲ. ಮುಂದಿನ ಚುನಾವಣೆಗಳಲ್ಲಿ ಕುಮಾರಸ್ವಾಮಿ ಅವರ ಮಾತಿಗೆ ಉತ್ತರ ಸಿಗಲಿದೆ ಎಂದು ಸಚಿವ ರಾಮಲಿಂಗರೆಡ್ಡಿ ತಿರುಗೇಟು ನೀಡಿದ್ದಾರೆ.