ಮೈಸೂರು: ನಾಡಹಬ್ಬ, ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-೨೦೨೩ಕ್ಕೆ ಚಾಲನೆ ದೊರೆತಿದೆ. ಅರಮನೆ ನಗರಿಯಲ್ಲಿ ಸಂಭ್ರಮ ಮನೆ ಮಾಡಿದ್ದು, ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ. ಈಗಾಗಲೆ ವಿವಿಧ ಕಾರ್ಯಕ್ರಮಗಳು ಆರಂಭವಾಗಿದೆ. ಅ. ೨೪ರ ವಿಜಯದಶಮಿಯಂದು ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆ ನಡೆಯಲಿದೆ.
ದಸರಾ ಉತ್ಸವವನ್ನು ವೀಕ್ಷಿಸಲು ದೇಶ, ವಿದೇಶಗಳಿಂದ ಆಗಮಿಸುವ ಪ್ರವಾಸಿಗರು ಹಾಗೂ ಸಾರ್ವಜನಿಕರ ಆಗಮಿಸುತ್ತಿದ್ದಾರೆ. ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ೨೦೨೩ರ ನಾಲ್ಕನೇ ದಿನವಾದ ಇಂದು (ಅ.೧೮) ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ. ಕಾರ್ಯಕ್ರಮಗಳ ಪಟ್ಟಿ ಈ ಕೆಳಗಿನಂತಿದೆ.
ಚಿಗುರು ಕವಿಗೋಷ್ಠಿ ಮತ್ತು ಮಹಿಳಾ ಕವಿಗೋಷ್ಠಿ ಚಾಲನೆ ನೀಡಲಾಗುತ್ತದೆ. ಬೆಳಿಗ್ಗೆ ೧೧ಕ್ಕೆ ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಖ್ಯಾತ ಕವಿಯತ್ರಿ ಸವಿತಾ ನಾಗಭೂಷಣ್ ಕವಿಗೋಷ್ಠಿ ಉದ್ಘಾಟನೆ ಮಾಡಲಿದ್ದಾರೆ.
ಬೆಳಿಗ್ಗೆ ೧೧ಕ್ಕೆ ಜಗನ್ಮೋಹನ ಅರಮನೆಯಲ್ಲಿ ಮಕ್ಕಳ ದಸರಾ ಕಾರ್ಯಕ್ರಮವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಉದ್ಘಾಟನೆ ಮಾಡಲಿದ್ದಾರೆ.
ಅರಮನೆ ಆವರಣದಲ್ಲಿ ರಾತ್ರಿ ೭ಗಂಟೆಗೆ ಕರ್ನಾಟಕ ರಾಜ್ಯ ಪೊಲೀಸ್ ವತಿಯಿಂದ ಸಮೂಹ ಬ್ಯಾಂಡ್ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ ಜಿ ಪರಮೇಶ್ವರ್ ಭಾಗಿಯಾಗಲಿದ್ದಾರೆ.
ಮಹಾರಾಜ ಕಾಲೇಜು ಮೈದಾನದಲ್ಲಿ ಯುವದಸರಾ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದ್ದಾರೆ. ನಟ ಡಾ. ಶಿವರಾಜಕುಮಾರ್ ಯುವದಸರಾ ಉದ್ಘಾಟನೆ ಮಾಡಲಿದ್ದಾರೆ. ಯುವಜನತೆಯನ್ನ ಸೆಳೆಯುವ ಕಾರ್ಯಕ್ರಮ ಯುವದಸರಾ ಇಂದಿನಿಂದ ನಾಲ್ಕು ದಿನ ನಡೆಯಲಿದೆ.
ಇಂದು (ಮೊದಲ ದಿನ) ಯುವದಸರಾಗೆ ಸ್ಯಾಂಡಲ್ವುಡ್ ನಟ, ನಟಿಯರು ಮೆರುಗು ನೀಡಲಿದ್ದಾರೆ. ಸಂಗೀತ ನಿರ್ದೇಶಕ ಸಾಧುಕೋಕಿಲರಿಂದ ಸಂಗೀತ ಕಾರ್ಯಕ್ರಮ ಇರಲಿದೆ. ಅ. ೧೯ರಂದು ಸಂಚಿತ್ ಹೆಗ್ಡೆ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ ಮತ್ತು ಶಿಲ್ಪರಾವ್ ಮತ್ತು ತಂಡದಿಂದ ಸಂಗೀತ, ನೃತ್ಯ ಸಮಾರಂಭ ಇರಲಿದೆ.