ಬೆಂಗಳೂರು: ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಭಾರಿ ಪ್ರಮಾಣದ ಹೆಚ್ಚುವರಿ ತ್ಯಾಜ್ಯ ಉತ್ಪತ್ತಿಯಾಗಿದ್ದು, ಬಹುತೇಕ ಕಡೆ ಕಸ ರಾಶಿ ಬಿದ್ದಿರುವುದು ಕಂಡುಬರುತ್ತಿದೆ. ಮಾರುಕಟ್ಟೆ, ಜನಸಂದಣಿಯಿದ್ದ ಪ್ರದೇಶದಲ್ಲಿ ಮಾರಾಟವಾಗದೇ ಉಳಿದ ಬಾಳೆಕಂಬ, ಬೂದುಗುಂಬಳ ಅಲ್ಲಲ್ಲೇ ಬಿದ್ದಿದ್ದು, ಶೀಘ್ರ ವಿಲೇವಾರಿಯಾಗದೇ ಇದ್ದಲ್ಲಿ ಕೊಳೆತು ಗಬ್ಬು ನಾರುವ ಸ್ಥಿತಿಗೆ ತಲುಪಲಿದೆ. ಸಾಮಾನ್ಯ ದಿನಗಳಲ್ಲಿ ನಗರದಲ್ಲಿ ೪,೦೦೦ ಟನ್ ತ್ಯಾಜ್ಯ ಉತ್ಪತ್ತಿಯಾದರೆ, ಹಬ್ಬದ ಸಂದರ್ಭದಲ್ಲಿ ಶೇ. ೨೦ರಿಂದ ಶೇ. ೩೦ರಷ್ಟು ಹೆಚ್ಚುವರಿ ತ್ಯಾಜ್ಯ ಉತ್ಪತ್ತಿಯಾಗಿದೆ.
ಮಡಿವಾಳ ಮಾರುಕಟ್ಟೆ, ಯಶವಂತಪುರ, ಗಾಂಧಿ ಬಜಾರ್, ಮಲ್ಲೇಶ್ವರ ಸೇರಿದಂತೆ ನಾನಾ ಮಾರುಕಟ್ಟೆಗಳಲ್ಲಿ ಬಾಳೆಕಂಬ, ಬೂದಗುಂಬಳ ರಾಶಿ ಬಿದ್ದಿದೆ. ಸಾರಕ್ಕಿ ಮಾರುಕಟ್ಟೆಯ ಬಳಿಯ ಮೆಟ್ರೊ ಮಾರ್ಗದ ಪಿಲ್ಲರ್ ಸುತ್ತಲೂ ಮಾರಾಟವಾಗದ ಬಾಳೆಕಂಬ, ರಸ್ತೆಗಳಲ್ಲಿ ಬೂದಗುಂಬಳ, ಮಾವಿನಸೊಪ್ಪಿನ ರಾಶಿಗಳನ್ನು ಕಾಣಬಹುದು.
ಹಬ್ಬದ ನಂತರ ಉಳಿಯುವ ವಸ್ತುಗಳನ್ನು ರಸ್ತೆಯಲ್ಲೇ ರೈತರು ಮತ್ತು ವ್ಯಾಪಾರಿಗಳು ರಾಶಿ ಹಾಕಿ ಹೋಗಿದ್ದಾರೆ. ಹೀಗಾಗಿ ರಸ್ತೆ ರಸ್ತೆಗಳಲ್ಲಿ ಬಾಳೆ ಕಂಬ, ಬೂದುಕುಂಬಳಕಾಯಿ, ಮಾವಿನ ಸೊಪ್ಪಿನ ಕಸ ಕಂಡು ಬರುತ್ತಿದೆ ಎಂದು ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಮಧ್ಯೆ ಕೆಲವರು ಕಸದ ರಾಶಿಗೆ ಬೆಂಕಿ ಹಚ್ಚುವುದು ಹೆಚ್ಚಾಗಿದ್ದು, ನೈರ್ಮಲ್ಯ ಇನ್ನಷ್ಟು ಹಾಳಾಗುವಂತಾಗಿದೆ. ಕಸ ದೊಂದಿಗೆ ಪ್ಲಾಸ್ಟಿಕ್ ತ್ಯಾಜ್ಯವು ಸುಟ್ಟು ಪರಿಸರಕ್ಕೆ ಇನ್ನಷ್ಟು ಹಾನಿಯಾಗುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.