ಮಂಗಳೂರು ದಕ್ಷಿಣ ಕನ್ನಡ: ಕನ್ನಡ ಸಾಹಿತ್ಯ ಪರಿಷತ್ತು, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಇಲ್ಲಿನ ಕನ್ನಡ ಸಂಘ ಇವರ ಜಂಟಿ ಸಹಯೋಗದಲ್ಲಿ ಸಾಹಿತ್ಯ ಪ್ರೇಮಿ, ಸಾಹಿತ್ಯ ಪೋಷಕ, ಶಿಕ್ಷಣ ತಜ್ಞ ಡಾ. ಬಿ. ಯಶೋವರ್ಮ ಸಂಸ್ಮರಣೆ ಯಶೋಭಿವ್ಯಕ್ತಿ ಕಾರ್ಯಕ್ರಮ ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಮಂಗಳವಾರ (ಡಿಸೆಂಬರ್ ೫) ದಂದು ಬೆಳಗ್ಗೆ ೧೦ ಗಂಟೆಯಿಂದ ನಡೆಯಲಿದೆ.
ನಗರದ ಪತ್ರಿಕಾಭವನದಲ್ಲಿ ಸೋಮವಾರ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಕ.ಸಾ.ಪ ಜಿಲ್ಲಾಧ್ಯಕ್ಷ ಡಾ. ಎಂ.ಪಿ. ಶ್ರೀನಾಥ, ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ ಆಳ್ವ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ ಅಧ್ಯಕ್ಷತೆ ವಹಿಸಲಿದ್ದಾರೆ. ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಕುಲಪತಿ ಡಾ. ನಿರಂಜನ ವಾನಳ್ಳಿ ಸಂಸ್ಕರಣ ನುಡಿ ಮತ್ತು ವಿಶೇಷ ಉಪನ್ಯಾಸ ನಡೆಸಿಕೊಡಲಿದ್ದಾರೆ. ಬೆಂಗಳೂರಿನ ಕ್ಷೇಮವನದ ನಿರ್ದೇಶಕಿ ಶ್ರದ್ಧಾ ಅಮಿತ್, ಉಜಿರೆಯ ಎಸ್.ಡಿ.ಎಂ ಎಜ್ಯುಕೇಶನಲ್ ಸೊಸೈಟಿಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್, ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ರಾಜು ಕೆ.ಎ.ಎಸ್, ಸೋನಿಯಾ ವರ್ಮ, ವಿವಿ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ ಗೌರವ ಅತಿಥಿಗಳಾಗಿದ್ದಾರೆ. ಅಂತಾರಾಷ್ಟ್ರೀಯ ಖ್ಯಾತಿಯ ಸ್ಪೀಡ್ ಪೈಂಟರ್ ವಿಲಾಸ್ ನಾಯಕ್ ಅವರ ವಿಶೇಷ ಚಿತ್ರಕಲೆಯ ವೀಡಿಯೋ ಪ್ರದರ್ಶನ ಇರಲಿದೆ.
ಅಪರಾಹ್ನ ೩ ಗಂಟೆಗೆ ಆರಂಭಗೊಳ್ಳಲಿರುವ ಸಮಾರೋಪ ಸಮಾರಂಭದಲ್ಲಿ ಕ.ಸಾ.ಪ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಷಿ ಸಮಾರೋಪದ ಮಾತುಗಳನ್ನಾಡಲಿದ್ದಾರೆ. ಮಂಗಳೂರು ವಿವಿಯ ಕುಲಪತಿ ಪ್ರೊ. ಜಯರಾಜ್ ಅಮೀನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದು, ಎಸ್.ಡಿ.ಎಂ ಸೊಸೈಟಿ ಐಟಿ ಮತ್ತು ವಸತಿ ನಿಲಯಗಳ ಆಡಳಿತ ವಿಭಾಗದ ಸಿ.ಇ.ಒ ಪೂರನ್ ವರ್ಮ ಮತ್ತು ಕ.ಸಾ.ಪ ಕೇಂದ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯ ಡಾ. ಮಾಧವ ಎಂ.ಕೆ ಅವರ ಉಪಸ್ಥಿತಿಯಿರಲಿದೆ.
ಕಾರ್ಯಕ್ರಮದ ಭಾಗವಾಗಿ ಕವಿಗೋಷ್ಠಿ ನಡೆಯಲಿದ್ದು ಹಿರಿಯ ಸಾಹಿತಿ ಪ. ರಾಮಕೃಷ್ಣ ಶಾಸ್ತ್ರಿ ಅಧ್ಯಕ್ಷತೆ ವಹಿಸಲಿದ್ದಾರೆ. ಮಧ್ಯಾಹ್ನ ಯಶೋಭಿವ್ಯಕ್ತಿ ಕಾರ್ಯಕ್ರಮ, ಜೊತೆಗೆ ಉಜಿರೆ ಧ. ಮಂ. ಕಾಲೇಜಿನ ವಿದ್ಯಾರ್ಥಿಗಳಿಂದ ಡಾ. ಬಿ. ಯಶೋವರ್ಮರ ಸಾಧನೆ- ಸಾಹಿತ್ಯಾಭಿರುಚಿ ಕುರಿತಾದ ರಂಗ ಪ್ರಸ್ತುತಿ ನಡೆಯಲಿದೆ, ಎಂದರು. ಕ.ಸಾ.ಪ ಕೇಂದ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯ ಡಾ. ಮಾಧವ ಎಂ.ಕೆ, ಸಹ ಕಾರ್ಯದರ್ಶಿ ಯು. ಹೆಚ್ ಖಾಲಿದ್, ಕಾರ್ಯಕಾರಿ ಸಮಿತಿ ಸದಸ್ಯ ಸನತ್ ಕುಮಾರ್ ಜೈನ್ ಉಪಸ್ಥಿತರಿದ್ದರು.