ಮಂಗಳೂರು(ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ಕೋರಿ ಆರ್ ಎಸ್ ಎಸ್, ಬಿಜೆಪಿ ಹಿರಿಯ ಕಾರ್ಯಕರ್ತ, ಬಿಎಂಎಸ್ ಮುಖಂಡ ಗಣೇಶ್ ಶೆಣೈ ಮುಲ್ಕಿ ಎಂಬುವವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಪತ್ರ ಬರೆದಿದ್ದಾರೆ.
ಈ ಕುರಿತು ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪತ್ರದ ಪ್ರತಿಯ ಜತೆ ಈ ಮಾಹಿತಿ ಹಂಚಿಕೊಂಡರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ವಿದ್ಯುತ್ ಬಿಲ್ ಶೇಕಡಾ 55 ರಷ್ಟು ಅಧಿಕಗೊಂಡಿದೆ. ಭೂಮಿ ರಿಜಿಸ್ಟ್ರೇಷನ್ ದರ, ಹಾಲು, ಮೊಸರು, ಮಜ್ಜಿಗೆ ದರ ಏರಿಕೆಯಾಗಿದೆ. ಹಿಂದು ಕಾರ್ಯಕರ್ತರಿಗೆ ಕಿರುಕುಳ ಹೆಚ್ಚಿದೆ. ಆದರೆ ನನ್ನ ಪಕ್ಷದ ನಾಯಕರು ಸರಿಯಾದ ಪ್ರತಿಭಟನೆ ನಡೆಸಿಲ್ಲ. ನರೇಂದ್ರ ಮೋದಿಯವರ ಸಾಧನೆಗಳನ್ನು ಮನೆಮನೆಗೆ ತಲುಪಿಲ್ಲ. ಆದ್ದರಿಂದ ತಾನು ಈ ಇಳಿವಯಸ್ಸಿನಲ್ಲಿಯೂ ರಾಜಕೀಯಕ್ಕೆ ಧುಮುಕುತ್ತಿದ್ದೇನೆ ಎಂದು ಹೇಳಿದರು.
ಬಿಜೆಪಿ ಕಾರ್ಯಕರ್ತರಾದ ಪಣಂಬೂರು ನರಸಿಂಹ ಭಂಡಾರ್ಕರ್ ಹಾಗೂ ಕೆ.ವೆಂಕಟೇಶ್ ನಾಯಕ್ ಉಪಸ್ಥಿತರಿದ್ದರು.