ದಾವಣಗೆರೆ : ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರವು ಜನರಿಗೆ ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳಬಾರದು, ಮಾತು ಕೊಟ್ಟಂತೆ ನಡೆದುಕೊಳ್ಳಬೇಕು ಎಂದು ಹಿರಿಯ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಅಸಮಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿದ್ಯುತ್ ದರ ಏರಿಕೆಯಿಂದ ಇಂಡಸ್ಟ್ರೀಸ್ ಗೆ ಹೊಡೆತ ಬಿದ್ದಿದೆ. ಇಂಡಸ್ಟ್ರಿಗಳು ಉಳಿಯುವುದು ಕಷ್ಟ ಆಗಿದೆ. ಮಾತು ಕೊಟ್ಟಂತೆ ನಡೆದುಕೊಂಡು ವಿದ್ಯುತ್ ದರ ಏರಿಕೆ ಬಗ್ಗೆ ಆಮೇಲೆ ತೀರ್ಮಾನ ತೆಗೆದುಕೊಳ್ಳಿ ಎಂದು ಸಲಹೆ ನೀಡಿದರು.
ವಿದ್ಯುತ್ ದರ ಏರಿಕೆ ಬಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್ ನಾವು ಮಾಡಿಲ್ಲ ಎನ್ನುತ್ತಿದ್ದಾರೆ. ವಿದ್ಯುತ್ ದರ ಏರಿಕೆ ಬಿಜೆಪಿ ಕಾಲದಲ್ಲೇ ಆಗಿತ್ತು. ಬಿಜೆಪಿಯವರು ಅದಕ್ಕೆ ಸಹಿ ಮಾಡಿಲ್ಲ. ಕಾಂಗ್ರೆಸ್ನವರು ಸಹಿ ಮಾಡಿದ್ದಾರೋ ಬಿಟ್ಟಿದ್ದಾರೋ ಗೊತ್ತಿಲ್ಲ. ಅದನ್ನು ಕಾಂಗ್ರೆಸ್ ನವರು ಒಪ್ಪಬಾರದು. ಹಿಂದೆ ದರ ಹೇಗಿತ್ತೋ ಅದೇ ರೀತಿ ಮುಂದುವರಿಸಬೇಕು ಎಂದು ಹೇಳಿದರು. ಶಕ್ತಿ ಯೋಜನೆಯಿಂದ ಖಾಸಗಿ ಬಸ್ ಗಳಿಗೆ ನಷ್ಟ ಆದ್ರೆ ನಾವೇನು ಮಾಡೋಕೆ ಆಗುತ್ತೆ. ರೈಲುಗಳಲ್ಲಿ ಸಂಚರಿಸುವ ಮಹಿಳೆಯರ ಸಂಖ್ಯೆ ಕಡಿಮೆ ಆಗಿದೆ. ಬೆಂಗಳೂರಿನಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಅವರು ಬಿಬಿಎಂಪಿ ಮೀಟಿಂಗ್ ಬಗ್ಗೆ ಕೇಳಿದಾಗ ಅದು ನನಗೆ ಗೊತ್ತಿಲ್ಲ ಎಂದು ಜಾರಿಕೊಂಡರು.
ಸಿಎಂ ಭೇಟಿ ರಾಜಕೀಯ ಪ್ರೇರಿತ ಅಲ್ಲ
ನಾವು ಮತ್ತು ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರು ಸಂಬಂಧಿಕರು. ಚುನಾವಣೆ ಆದಾಗಿನಿಂದ ನಾವು ಭೇಟಿಯಾಗಿರಲಿಲ್ಲ. ನಾನು ಚುನಾವಣೆಯಲ್ಲಿ ಗೆದ್ದಿದ್ದೀನಿ. ಅವರು ಗೆದ್ದಿದ್ದಾರೆ. ಹೀಗಾಗಿ ಭೇಟಿಯಾಗಿದ್ದೆವು. ನಮ್ಮ ಭೇಟಿ ರಾಜಕೀಯ ಪ್ರೇರಿತ ಭೇಟಿ ಅಲ್ಲ ಎಂದು ಸ್ಪಷ್ಟಪಡಿಸಿದರು.
ನಿನ್ನೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಹೋಗುವ ಮಾರ್ಗದಲ್ಲಿ ಬಂದು ಬಸವರಾಜ ಬೊಮ್ಮಾಯಿ ಅವರು ಭೇಟಿಯಾಗಿ ಹೋಗಿದ್ದಾರೆ. ಭೇಟಿಯಾಗಿ ಅವರು ನನಗೆ ಹಾರ ಹಾಕಿದ್ರು. ನಾನು ಅವರಿಗೆ ಶಾಲು ಹೊದಿಸಿದೆ. ನಮ್ಮ ಸಂಬಂಧ ಹೀಗೆ ಮುಂದುವರಿಯಲಿ ಎಂದು ಹೇಳಿದೆ ಎಂದರು.
ಕೆಲವೊಂದು ವಿಚಾರಗಳನ್ನು ಹೇಳುವುದಕ್ಕೆ ಆಗುವುದಿಲ್ಲ. ಅವರು ಬಿಜೆಪಿಯವರು ನಾವು ಕಾಂಗ್ರೆಸ್ ನವರು. ನಮ್ಮಲ್ಲಿ ಯಾವ ರಾಜಕೀಯ ಮಾತುಕತೆ ಇರುತ್ತದೆ. ನಾವು ಹೊಂದಾಣಿಕೆ ರಾಜಕಾರಣ ಮಾಡಲು ಚುನಾವಣೆ ಪೂರ್ವವಾಗಿ ಭೇಟಿಯಾಗಿಲ್ಲ, ಚುನಾವಣೆ ನಂತರ ಭೇಟಿಯಾಗಿದ್ದೇವೆ ಎಂದರು.