ಚಿತ್ರದುರ್ಗ : ಪೋಲಿಯೋ ರೋಗದ ಹಾಗೇ ಕುಷ್ಠರೋಗವನ್ನು ಸಹ ದೇಶದಿಂದ ನಿರ್ಮೂಲನೆ ಮಾಡಬೇಕು. ‘ಕುಷ್ಠ ರೋಗ ಮುಕ್ತ ಚಿತ್ರದುರ್ಗ ಜಿಲ್ಲೆ’ ಎನ್ನುವ ಘೋಷ ವಾಕ್ಯದೊಂದಿಗೆ ಡಿ.27 ರಿಂದ ಜ.11 ವರೆಗೆ ನಡೆಯುವ ಕುಷ್ಠರೋಗ ಪತ್ತೆ ಹಚ್ಚುವ ಅಭಿಯಾನದಲ್ಲಿ ನಿಖರ ತಪಾಸಣೆ ನಡೆಸಿ, ಶೇ.100 ರಷ್ಟು ಸಮೀಕ್ಷೆ ಕಾರ್ಯ ಪೂರ್ಣಗೊಳಿಸಿ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಸೂಚನೆ ನೀಡಿದರು.
ಈ ಕುರಿತು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕುಷ್ಠ ರೋಗದ ಲಕ್ಷಣ, ಸ್ವರೂಪದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಶಾಲೆ ಹಾಗೂ ಹಾಸ್ಟೆಲ್ಗಳಲ್ಲಿ ಮಕ್ಕಳ ತಪಾಸಣೆ ಕೈಗೊಳ್ಳುವುದರ ಮೂಲಕ ಅರಿವು ಮೂಡಿಸಬೇಕು. ಕೊಳಚೆ ಪ್ರದೇಶಗಳು ಹಾಗೂ ಈ ಹಿಂದೆ ಕುಷ್ಠ ರೋಗ ಪತ್ತೆಯಾದ ಏರಿಯಾಗಳಲ್ಲಿ ಹೆಚ್ಚಿನ ತಪಾಸಣೆ ಕಾರ್ಯ ನಡೆಸಬೇಕು. ತಾಯಂದಿರು ಹಾಗೂ ಗರ್ಭಿಣಿಯರಿಗೂ ಈ ಕುರಿತು ಮಾಹಿತಿ ನೀಡಬೇಕು. ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಎಲ್ಲರ ಸಹಕಾರ ಬೇಕು, ಈ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕರು ಈ ವಿಶೇಷ ಅಭಿಯಾನದ ಯಶಸ್ವಿಗೆ ಕೈಜೋಡಿಸಬೇಕು ಎಂದರು.