ಮೈಸೂರು : ಕನಕದಾಸರು ೧೫ನೇ ಶತಮಾನದಲ್ಲಿಯೇ ಜಾತಿವ್ಯವಸ್ಥೆಯ ವಿರುದ್ಧ ಸಾಹಿತ್ಯದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ ಮಹಾಪುರುಷ ಎಂದು ಶ್ರೀರಾಂಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬುಲೆಟ್ ಮಹಾದೇವ್ ತಿಳಿಸಿದರು.
ಶ್ರೀರಾಂಪುರದ ಅಶ್ವಿನಿ ಕಲ್ಯಾಣ ಮಂಟಪದಲ್ಲಿ ಮಹಾದೇವಪುರದ ಶ್ರೀ ಕಾಗಿನೆಲೆ ಡೆವಲಪ್ಮೆಂಟ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ವತಿಯಿಂದ ನಡೆದ ಕನಕ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಹಾಗೂ ೨೦೨೪ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಕುರುಬ ಜನಾಂಗದಲ್ಲಿ ಹುಟ್ಟಿದ ಕನಕದಾಸರು ಶಿಕ್ಷಣ ಕಲಿತಿದ್ದರಿಂದ ನಳಚರಿತ್ರೆ, ರಾಮಧಾನ್ಯಚರಿತ್ರೆ, ಹರಿಭಕ್ತಸಾರ, ಕೀರ್ತನೆಗಳು ಮುಂಡಿಗೆಗಳನ್ನು ಬರೆದು ಜನರಲ್ಲಿ ಜಾಗೃತಿ ಮೂಡಿಸಿದವರು. ಆದ್ದರಿಂದ ಪ್ರತಿಯೊಬ್ಬರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿರಿ. ಶಿಕ್ಷಣ ಯಾರು ಕದಿಯಲಾರದ ವಸ್ತುವಾಗಿದ್ದು, ಜ್ಞಾನವೊಂದಿದ್ದರೆ ಎಲ್ಲಿಯಾದರು ಬದುಕಬಹುದು ಎಂದ ಅವರು ಕನಕದಾಸರ ತತ್ವ ಆದರ್ಶಗಳನ್ನು ಎಲ್ಲರು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಮಿತಿಯ ಉಪಾಧ್ಯಕ್ಷ ಎಸ್.ಕೆ. ರಾಮೇಗೌಡ, ನಿರ್ದೇಶಕರಾದ ಕೆ.ಹೆಚ್. ಕುಮಾರ್, ಬಿ. ಸತೀಶ್, ಶಿವಕುಮಾರ್, ಸೋಮಣ್ಣ, ಆರ್. ಗುರುರಾಜ್, ಜಿ. ರಘುಕುಮಾರ್, ಕೆ. ಸುರೇಶ್, ಶಿವಮ್ಮ, ವಾಣಿಶ್ರೀ ಅಶ್ವಿನಿರೇವಣ್ಣ, ಶಂಕರ್ ಧನಗಳ್ಳಿ ಬಸವರಾಜು ಹಾಜರಿದ್ದರು.